ಮೋದಿ 3.0 ಸರ್ಕಾರಕ್ಕೆ ಮೊದಲ ಮುಖಭಂಗ.!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಕಳೆದ 11 ವರ್ಷಗಳ ಅಧಿಕಾರಾವಧಿಯಲ್ಲಿ ಮೊದಲ ಬಾರಿಗೆ ದೊಡ್ಡ ಮುಖಭಂಗವಾಗಿದೆ. ತನ್ನ ನಿರ್ಧಾರಗಳಿಂದ ಸುಲಭವಾಗಿ ಹಿಂದೆ ಸರಿಯದ ಕೇಂದ್ರ ಸರ್ಕಾರ ಈಗ ಲ್ಯಾಟರಲ್ ಎಂಟ್ರಿ ವಿಚಾರದಲ್ಲಿ ಕೆಲವೇ ದಿನಗಳಲ್ಲಿ ಯೂಟರ್ನ್ ಹೊಡೆದಿದೆ. ಇದಕ್ಕೆ ಪ್ರಮುಖ ಕಾರಣ ಮಿತ್ರಪಕ್ಷಗಳ ಮರ್ಜಿ ಎನ್ನಲಾಗಿದೆ. ವಿರೋಧ ಪಕ್ಷಗಳ ವಿರೋಧಕ್ಕೆ ತಲೆಕೆಡಿಸಿಕೊಳ್ಳದ ಕೇಂದ್ರ ಈ ಬಾರಿ ವಿಪಕ್ಷಗಳ ಸಣ್ಣ ವಿರೋಧಕ್ಕೂ ಹೆದರುತ್ತಿರುವುದು ಅಚ್ಚರಿ ಮೂಡಿಸಿದೆ.
ಸರ್ಕಾರದ ಉನ್ನತ ಹುದ್ದೆಗಳಿಗೆ 'ಲ್ಯಾಟರಲ್ ಎಂಟ್ರಿ' ಎಂಬ ಪರ್ಯಾಯ ಕ್ರಮದ ಮೂಲಕ ವಿಷಯ ತಜ್ಞರನ್ನು ನೇಮಕ ಮಾಡಲು 45 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದ ಕೇಂದ್ರ ಸರ್ಕಾರ, ವಿಪಕ್ಷ ಮತ್ತು ಮಿತ್ರಪಕ್ಷಗಳ ಒತ್ತಡಕ್ಕೆ ಮಣಿದು ಜಾಹೀರಾತನ್ನೇ ಹಿಂಪಡೆದುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೇರೆಗೆ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಚಿವ ಜಿತೇಂದ್ರ ಸಿಂಗ್ ಅವರು ಕೇಂದ್ರ ಲೋಕಸೇವಾ ಆಯೋಗಕ್ಕೆ ಪತ್ರ ಬರೆದು ಜಾಹೀರಾತು ಹಿಂಪಡೆಯುವಂತೆ ಸೂಚಿಸಿದ್ದಾರೆ.
ಇದಕ್ಕೂ ಮೊದಲು ಲ್ಯಾಟರಲ್ ಎಂಟ್ರಿ ಕಾರ್ಯವಿಧಾನವನ್ನು ಸಮರ್ಥಿಸಿಕೊಂಡಿದ್ದ ಕೇಂದ್ರ ಸರ್ಕಾರ, ಕೆಲವೇ ಗಂಟೆಗಳಲ್ಲಿ ಯೂ-ಟರ್ನ್ ಹೊಡೆದಿರುವುದು ವಿಪಕ್ಷಗಳು ಪ್ರಬಲವಾಗಿರುವುದು ಮತ್ತು ಮಿತ್ರಪಕ್ಷಗಳ ಅಭಿಪ್ರಾಯಕ್ಕೆ ಮಣೆ ಹಾಕುವ ಅನಿವಾರ್ಯತೆ ಬಿಜೆಪಿಗೆ ಎಷ್ಟರಮಟ್ಟಿಗೆ ಇದೆ ಎನ್ನುವುದಕ್ಕೆ ಇದು ತಾಜಾ ಉದಾಹರಣೆ ಎಂದು ವಿಶ್ಲೇಷಿಸಲಾಗುತ್ತಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಬಾರದ ಹಿನ್ನೆಲೆ ಮಿತ್ರಪಕ್ಷಗಳ ಮರ್ಜಿಗೆ ಬಿದ್ದಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕೆಂದರು ಅವುಗಳ ಸಮ್ಮತಿ ಪಡೆಯುವ ಅನಿವಾರ್ಯತೆ ಬಿದ್ದಿರುವುದು ಸ್ಪಷ್ಟವಾಗಿ ಕಾಣುತ್ತಿದೆ.
ಲ್ಯಾಟರಲ್ ಎಂಟ್ರಿ ಎಂಬ ಪರ್ಯಾಯ ನೇಮಕದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಮುಖವಾಗಿ ಎನ್ಡಿಎ ಮಿತ್ರಪಕ್ಷ ಎಲ್ಜಿಪಿ ನಾಯಕ ಚಿರಾಗ್ ಪಾಸ್ವಾನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತು ಸರ್ಕಾರದ ಜತೆ ಮಾತುಕತೆ ನಡೆಸುತ್ತೇನೆ ಎಂದೂ ಪಾಸ್ವಾನ್ ಹೇಳಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ಕೇಂದ್ರ ಸರ್ಕಾರ ಜಾಹೀರಾತು ಹಿಂಪಡೆದಿದ್ದು, ಅನಿವಾರ್ಯವಾಗಿ ತನ್ನ ಹೆಜ್ಜೆಯನ್ನು ಹಿಂದಕ್ಕೆ ಇಡುವ ಪರಿಸ್ಥಿತಿ ಬಂದಿದೆ. ಕೃಷಿ ಮಸೂದೆಯ ರದ್ಧತಿಗೆ ಅಷ್ಟು ದೊಡ್ಡ ಹೋರಾಟ ನಡೆದರೂ ತಲೆಕೆಡಿಸಿಕೊಳ್ಳದ ಕೇಂದ್ರ ಸರ್ಕಾರ ಈಗ ಲ್ಯಾಟರಲ್ ಎಂಟ್ರಿಯ ವಿಚಾರದಲ್ಲಿ ಸಣ್ಣ ವಿರೋಧದ ಕಾರಣಕ್ಕೆ ಹಿಂದೆ ಸರಿದಿರುವುದು ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






