ಮೋದಿ ಬಾಬು, ನಿಮ್ಮ ಕುರ್ಚಿಯನ್ನು ಅಲುಗಾಡಿಸುತ್ತೇವೆ.. ಎಚ್ಚರ! : ಪ್ರಧಾನಿಗೆ ಮಮತಾ ಬ್ಯಾನರ್ಜಿ ಖಡಕ್ ವಾರ್ನಿಂಗ್

ಮೋದಿ ಬಾಬು, ನಿಮ್ಮ ಕುರ್ಚಿಯನ್ನು ಅಲುಗಾಡಿಸುತ್ತೇವೆ.. ಎಚ್ಚರ! : ಪ್ರಧಾನಿಗೆ ಮಮತಾ ಬ್ಯಾನರ್ಜಿ ಖಡಕ್ ವಾರ್ನಿಂಗ್
ಬಿಜೆಪಿ ಬೆಂಬಲಿತ ಪಶ್ಚಿಮ ಬಂಗಾಳ ಬಂದ್ ವೇಳೆ ವ್ಯಾಪಕ ಹಿಂಸಾಚಾರ ನಡೆದಿದೆ. ರಾಜ್ಯದಲ್ಲಿ ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿ ವಿರುದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ. ಮೋದಿ ಬಾಬು ನಿಮ್ಮ ಕುರ್ಚಿಯನ್ನು ಅಲುಗಾಡಿಸುತ್ತೇವೆ ಎಂದು ಸಿಎಂ ಮಮತಾ ವಾರ್ನಿಂಗ್ ನೀಡಿದ್ದಾರೆ.
ಆರ್ ಜಿ ಕರ್ ವೈದ್ಯಕೀಯ ಕಾಲೇಜು ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಭಾರೀ ಬಿರುಗಾಳಿಯನ್ನು ಸೃಷ್ಟಿಸಿದೆ. ಪ್ರತೀದಿನ ನಡೆಯುತ್ತಿರುವ ಒಂದಲ್ಲಾ ಒಂದು ಪ್ರತಿಭಟನೆಯಿಂದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಬಿಸಿತಟ್ಟಿದೆ.
ಮಮತಾ ದೀದಿ ಸರ್ಕಾರದ ವಿರುದ್ದ ಜನಾಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ, ಬಿಜೆಪಿ ಬೆಂಬಲಿತ 12 ಗಂಟೆಯ ಪಶ್ಚಿಮ ಬಂಗಾಳ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರು ಸ್ವಯಂಪ್ರೇರಿತವಾಗಿ ಬಂದ್ ಗೆ ಬೆಂಬಲ ಸೂಚಿಸಿರುವುದು ಮಮತಾ ಸರ್ಕಾರದ ಕಸಿವಿಸಿಗೆ ಕಾರಣವಾಗಿದೆ.
ಇದರಿಂದ ಆಕ್ರೋಶಗೊಂಡಿರುವ ಮಮತಾ ಬ್ಯಾನರ್ಜಿ, ಪ್ರಧಾನಿ ಮೋದಿಗೆ ನೇರ ಸವಾಲು ಹಾಕಿದ್ದಾರೆ. ರಾಜ್ಯದಲ್ಲಿ ಬೆಂಕಿ ಹಚ್ಚಲು ಪ್ರಯತ್ನಿಸಿದರೆ, ನಿಮ್ಮ ಸರ್ಕಾರವನ್ನು ಅಲುಗಾಡಿಸುತ್ತೇವೆ ಎಂದು ಮಮತಾ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಬಂಗಾಳ ಬಂದ್ ಯಶಸ್ವಿಯಾದ ನಂತರ ಪ್ರಧಾನಿ ಮೋದಿ ವಿರುದ್ದ ಅಕ್ಷರಸಃ ಕೆಂಡಕಾರಿರುವ ಮಮತಾ ಬ್ಯಾನರ್ಜಿ, "ಮೋದಿ ಬಾಬು.. ನಿಮ್ಮ ಪಕ್ಷವು ಬಂಗಾಳದಲ್ಲಿ ಬೆಂಕಿಯಿಡಲು ನೋಡುತ್ತಿದೆ. ನೆನಪಿಟ್ಟುಕೊಳ್ಳಿ, ಬಂಗಾಳದಲ್ಲಿ ಅಶಾಂತಿ ಸೃಷ್ಟಿಸಿದರೆ ಅಸ್ಸಾಂ, ಈಶಾನ್ಯ ರಾಜ್ಯಗಳು, ಉತ್ತರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಅದರ ಬಿಸಿಯನ್ನು ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






