ರಸ್ತೆಯಲ್ಲಿ ಬಿಟ್ಟು ಹೋಗಿದ್ದ ಮಗುವನ್ನು ದತ್ತು ಪಡೆದ ಮಹಿಳೆ: ಸ್ನೇಹಿತರ ಜೊತೆ ಸೇರಿ ಆಕೆಯನ್ನು ಕೊಲೆ ಮಾಡಿದ 13ರ ಬಾಲಕಿ!

ಒಡಿಶಾದ ಗಜಪತಿ ಜಿಲ್ಲೆಯ ಪರ್ಲಖೆಮುಂಡಿ ಪಟ್ಟಣದಲ್ಲಿ ಬಾಲಕಿಯೊಬ್ಬಳು ತನ್ನ ಸ್ವಂತ ಮಹಿಳೆ ಎಂದು ಭಾವಿಸಿ ಬೆಳೆಸಿದ ಮಹಿಳೆಯನ್ನು ಆಕೆಯ ಸ್ನೇಹಿತರು ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪೊಲೀಸ್ ವಿವರಗಳ ಪ್ರಕಾರ. ಮೂರು ದಿನಗಳ ಮಗುವನ್ನು ಅಪರಿಚಿತ ಜನರು ರಸ್ತೆಯಲ್ಲಿ ಬಿಟ್ಟು ಹೋದಾಗ, ಮಕ್ಕಳಿಲ್ಲದ ರಾಜ್ಯಲಕ್ಷ್ಮಿ ಮತ್ತು ಅವರ ಪತಿ ಮಗುವನ್ನು ದತ್ತು ಪಡೆದರು. ಮಗುವನ್ನು ಬಹಳ ಪ್ರೀತಿಯಿಂದ ಬೆಳೆಸಲಾಯಿತು. ಆದರೆ, ಮಗುವನ್ನು ದತ್ತು ಪಡೆದ ಒಂದು ವರ್ಷದ ನಂತರ, ರಾಜ್ಯಲಕ್ಷ್ಮಿಯವರ ಪತಿ ನಿಧನರಾದರು.
ಅಂದಿನಿಂದ, ರಾಜಲಕ್ಷ್ಮೀ ಒಂಟಿಯಾಗಿಯೇ ಮಗಳನ್ನು ಬೆಳೆಸಿದರು. ಬಳಿಕ ಮಗಳ ವಿದ್ಯಾಭ್ಯಾಸದ ಸಲುವಾಗಿ ಪರಲಖೆಮುಂಡಿಗೆ ಆಗಮಿಸಿ, ಬಾಡಿಗೆ ಮನೆಯಲ್ಲಿ ವಾಸವಿದ್ದರು.
ರಾಜಲಕ್ಷ್ಮೀ ಅವರು ಮಗಳನ್ನು ಸುಸಂಸ್ಕೃತವಾಗಿ ಬೆಳೆಸಿದ್ದರು. ಕಾಲಕ್ರಮೇಣ ಆಕೆ ದೇವಸ್ಥಾನದ ಅರ್ಚಕ ಗಣೇಶ್ ರಾತ್ (21) ಮತ್ತು ದಿನೇಶ್ ಸಾಹು(20)ವಿನೊಂದಿಗೆ ಒಡನಾಟ ಬೆಳೆಸಿಕೊಂಡು, ತರಗತಿಗಳಿಗೆ ಬಂಕ್ ಮಾಡಿ ಅವರೊಂದಿಗೆ ಸುತ್ತಾಡುತ್ತಿದ್ದಳು. ಈ ವಿಚಾರ ತಿಳಿದ ರಾಜಲಕ್ಷ್ಮೀ, ಮಗಳಿಗೆ ಬೈದು ಬುದ್ದಿವಾದ ಹೇಳಿದ್ದರು.
ಕೋಪಗೊಂಡ ಆಕೆ ಈ ವಿಚಾರವನ್ನು ವಾಟ್ಸಾಪ್ ಚಾಟ್ ಮೂಲಕ ಇಬ್ಬರು ಗೆಳೆಯರ ತಿಳಿಸಿದ್ದಳು. ಬಳಿಕ ಆಕೆಯ ಇಬ್ಬರು ಗೆಳೆಯರೊಂದಿಗೆ ಸೇರಿ ತಾಯಿಯ ಕೊಲೆಯ ಪ್ಲ್ಯಾನ್ ಮಾಡಿದ್ದರು. ರಾಜಲಕ್ಷ್ಮೀಯನ್ನು ಕೊಲೆಮಾಡಿ ಆಸ್ತಿಯನ್ನು ಪಡೆಯಬಹುದು ಹಾಗೂ ನೀನು ಸ್ವತಂತ್ರವಾಗಿ ಬಾಳಬಹುದು ಎಂದೆಲ್ಲಾ ಗೆಳೆಯರು ಹುಡುಗಿಯ ತಲೆತುಂಬಿದ್ದರು.
ಇದರಿಂದ ಪ್ರಚೋದಿತಲಾದ ಮಗಳು ಏ. 29ರಂದು ಸಂಜೆ, ತಾಯಿ ರಾಜಲಕ್ಷ್ಮೀಗೆ ನಿದ್ರೆ ಮಾತ್ರೆಗಳನ್ನು ನೀಡಿದ್ದಳು. ರಾಜಲಕ್ಷ್ಮೀ ಪ್ರಜ್ಞಾಹೀನಳಾದ ನಂತರ, ಇಬ್ಬರು ಸ್ನೇಹಿತರಿಗೆ ಕರೆ ಮಾಡಿ ಮನೆಗೆ ಬರುವಂತೆ ತಿಳಿಸಿದ್ದಳು, ಬಳಿಕ ಮೂವರು ಸೇರಿ ರಾಜಲಕ್ಷ್ಮೀಯನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು.
ಬಳಿಕ ಆಕೆಯೇ ಕುಟುಂಬಸ್ಥರಿಗೆ ಕರೆ ಮಾಡಿ ತಾಯಿಗೆ ಹುಷಾರಿಲ್ಲ ಎಂದು ತಿಳಿಸಿ, ಆಸ್ಪತ್ರೆಗೆ ಕರೆದೊಯ್ದಿದ್ದಳು. ಆಸ್ಪತ್ರೆಯಲ್ಲಿ ವೈದ್ಯರು ರಾಜಲಕ್ಷ್ಮೀಮೃತಪಟ್ಟಿದ್ದಾರೆ ಎಂದು ಹೇಳಿದ್ದರು. ಈ ಹಿಂದೆ ರಾಜಲಕ್ಷ್ಮೀಗೆ ಹೃದಯಾಘಾತವಾಗಿದ್ದರಿಂದ, ಇದನ್ನೇ ದಾಳವಾಡಿ ಬಳಸಿಕೊಂಡು ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರನ್ನು ನಂಬಿಸಿದ್ದಳು.
ರಾಜಲಕ್ಷ್ಮೀಯದ್ದು ಸಹಜ ಸಾವು ಎಂದು ಭಾವಿಸಿದ್ದ ಕುಟುಂಬಸ್ಥರಿಗೆ ಹುಡುಗಿ ಭುವನೇಶ್ವರದಲ್ಲಿ ಬಿಟ್ಟು ಹೋಗಿದ್ದ ಮೊಬೈಲ್ ಕೊಲೆಯ ರಹಸ್ಯವನ್ನು ಬಿಚ್ಚಿಟ್ಟಿದೆ. ರಾಜಲಕ್ಷ್ಮೀ ಅವರ ಸಹೋದರ ಸಿಬಾ ಪ್ರಸಾದ್ ಮಿಶ್ರಾ ಆಕೆಯ ಮೊಬೈಲ್ ಅನ್ನು ಪರಿಶೀಲಿಸಿದಾಗ ಹುಡುಗಿ ಸ್ನೇಹಿತರೊಂದಿಗೆ ಸೇರಿ ಕೊಲೆಯ ಸಂಚು ರೂಪಿಸಿರುವುದು ಬಯಲಾಗಿದೆ.
ತನಿಖೆ ಆರಂಭಿಸಿದ ಪೊಲೀಸರು ಮೂವರು ಆರೋಪಿಗಳಾದ ಅಪ್ರಾಪ್ತ ಹುಡುಗಿ, ಗಣೇಶ್ ರಾತ್ ಮತ್ತು ದಿನೇಶ್ ಸಾಹುವನ್ನು ಬಂಧಿಸಿದ್ದಾರೆ. ಹುಡುಗಿಯು ತಾಯಿಯ ಕೆಲವು ಚಿನ್ನದ ಆಭರಣಗಳನ್ನು ಈ ಹಿಂದೆ ಗಣೇಶ್ ರಾತ್ಗೆ ಹಸ್ತಾಂತರಿಸಿದ್ದಳು. ಆತ ಚಿನ್ನಾಭರಣಗಳನ್ನು 2.4 ಲಕ್ಷ ರೂ.ಗೆ ಅಡವಿಟ್ಟಿದ್ದ ಎನ್ನಲಾಗಿದೆ. ಆರೋಪಿಯಿಂದ ಸುಮಾರು 30 ಗ್ರಾಂ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






