ರೈತರಿಗೆ ಕೇಂದ್ರ ಸರ್ಕಾರದಿಂದ ಆಧಾರ್ ಮಾದರಿ ಸ್ಮಾರ್ಟ್ ಕಾರ್ಡ್: ಇದರ ಅನುಕೂಲತೆಗಳೇನು?

ರೈತರಿಗೆ ಕೇಂದ್ರ ಸರ್ಕಾರದಿಂದ ಆಧಾರ್ ಮಾದರಿ ಸ್ಮಾರ್ಟ್ ಕಾರ್ಡ್: ಇದರ ಅನುಕೂಲತೆಗಳೇನು?
ರೈತರಿಗೆ ಆಧಾರ್ ಮಾದರಿಯ ವಿಶಿಷ್ಟ ಗುರುತಿನ ಕಾರ್ಡ್ ನೀಡುವ ಯೋಜನೆಗೆ ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸರಕಾರ ಘೋಷಿಸಿದೆ.
ಸುದ್ದಿ ಸಂಸ್ಥೆ ಜತೆ ಮಾತನಾಡಿದ ಕೇಂದ್ರ ಕೃಷಿ ಕಾರ್ಯದರ್ಶಿ ದೇವೇಶ್ ಚತುರ್ವೇದಿ ಅವರು, ''ಅಕ್ಟೋಬರ್ ಮೊದಲ ವಾರದಲ್ಲಿ ರೈತರ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು. ನೋಂದಣಿ ಹೇಗೆ ನಡೆಯಬೇಕು ಎಂಬ ಕುರಿತು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ ಐದು ಕೋಟಿ ರೈತರನ್ನು ನೋಂದಾಯಿಸಬೇಕು ಎನ್ನುವ ಗುರಿ ಹೊಂದಲಾಗಿದೆ,'' ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ 2,817 ಕೋಟಿ ರೂ. ವೆಚ್ಚದೊಂದಿಗೆ 'ಡಿಜಿಟಲ್ ಅಗ್ರಿಕಲ್ಚರ್ ಮಿಷನ್'ಗೆ ಅನುಮೋದನೆ ನೀಡಿದೆ. ಅದರ ಭಾಗವಾಗಿ ರೈತರ ಮಾಹಿತಿಯ ಡಿಜಿಟಲೀಕರಣಕ್ಕಾಗಿ ಗುರುತಿನ ಚೀಟಿ ನೀಡುವ ಯೋಜನೆ ರೂಪಿಸಲಾಗಿದೆ.
ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿ ವಿಶಿಷ್ಟ ಕಾರ್ಡ್ಗೆ ನೋಂದಣಿ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಈಗ ಅದನ್ನು 19 ರಾಜ್ಯಗಳಿಗೆ ವಿಸ್ತರಿಸಲಾಗುತ್ತದೆ.
ರೈತರ ನೋಂದಣಿಯಾದ ಕೂಡಲೇ ಆಧಾರ್ ಮಾದರಿಯ ವಿಶಿಷ್ಟ ಗುರುತಿನ ಕಾರ್ಡ್ ನೀಡಲಾಗುತ್ತದೆ. ಕನಿಷ್ಠ ಬೆಂಬಲ ಬೆಲೆ, ಕಿಸಾನ್ ಕ್ರೆಡಿಟ್ ಕಾರ್ಡ್ ಸೇರಿದಂತೆ ಹಲವು ಕೃಷಿ ಸಂಬಂಧಿತ ಯೋಜನೆಗಳ ನೆರವು ಪಡೆಯಲು ವಿಶಿಷ್ಟ ಕಾರ್ಡ್ ಒತ್ತಾಸೆ ನೀಡುತ್ತದೆ. ಸರಕಾರದ ಯೋಜನೆ ಮತ್ತು ಕೆಲವೊಂದು ಕಾರ್ಯಕ್ರಮಗಳನ್ನು ವಿಸ್ತರಿಸಲು ಅಗತ್ಯವಿರುವ ಅಂಕಿ-ಅಂಶಗಳು, ಮಾಹಿತಿಯನ್ನೂ ಸರಕಾರಕ್ಕೆ ನೀಡಲಿದೆ.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






