ವಕೀಲೆ ಜೀವಾ ಆತ್ಮಹತ್ಯೆ ಕೇಸ್: 2,300 ಪುಟಗಳ ಅಂತಿಮ ವರದಿ ಸಲ್ಲಿಕೆ – ಸ್ಪೋಟಕ ಮಾಹಿತಿ ಬಯಲು

ಬೆಂಗಳೂರು: ಬೆಂಗಳೂರಿನ ಪದ್ಮನಾಭ ನಗರದ ನಿವಾಸಿ ವಕೀಲೆ ಜೀವಾ 2024ರ ನವೆಂಬರ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. 2021-22ರಲ್ಲಿ ಬೆಳಕಿಗೆ ಬಂದ ಭೋವಿ ಅಭಿವೃದ್ಧಿ ನಿಗಮ ಹಗರಣಕ್ಕೆ ಸಂಬಂಧಿಸಿದಂತೆ ವಿವಸ್ತ್ರಗೊಳಿಸಿ ವಿಚಾರಣೆ ಮಾಡಿದ್ದಲ್ಲದೇ 25 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ವಕೀಲೆ ಜೀವಾ ತಮ್ಮ ಡೆತ್ ನೋಟ್ನಲ್ಲಿ ಕನಕಲಕ್ಷ್ಮಿ ವಿರುದ್ಧ ಆರೋಪ ಮಾಡಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಒಟ್ಟು 2,300 ಪುಟಗಳ ಅಂತಿಮ ವರದಿಯನ್ನು ಸಿದ್ಧಪಡಿಸಿ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಐಪಿಎಸ್ ಅಧಿಕಾರಿಗಳಾದ ವಿನಾಯಕ್ ವರ್ಮಾ, ಅಕ್ಷಯ್ ಮಚೀಂದ್ರ, ನಿಶಾ ಜೇಮ್ಸ್ ನೇತೃತ್ವದ ವಿಶೇಷ ತನಿಖಾ ತಂಡದಿಂದ ವರದಿ ಸಲ್ಲಿಕೆ ಮಾಡಲಾಗಿದೆ. ಸಾಕ್ಷಿದಾರರ ಹೇಳಿಕೆ, ವಿಡಿಯೋ ಸಾಕ್ಷ್ಯಗಳ ಸಮೇತ ವರದಿ ನೀಡಿದ್ದು, ಜೀವಾಗೆ ಡಿವೈಎಸ್ಪಿ ಕನಕಲಕ್ಷ್ಮೀ ಕಿರುಕುಳ, ಹಿಂಸೆ ನೀಡಿರೋದು ಸಾಬೀತಾಗಿದೆ.
ಡಿಸೆಂಬರ್ನಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಹೈಕೋರ್ಟ್ ಸೂಚಿಸಿತ್ತು. ಸದ್ಯ ಹೈಕೋರ್ಟ್ ಸೂಚನೆಯಂತೆ ಎಸ್ಐಟಿಯಿಂದ ವರದಿ ಸಲ್ಲಿಕೆಯಾಗಿದ್ದು, ತನಿಖಾ ತಂಡದ ವರದಿಗೆ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿದೆ.
ಜೀವಾ ವಿಚಾರಣೆ ವೇಳೆ ಚಿತ್ರೀಕರಿಸಲಾಗಿದ್ದ ಕೆಲವು ವಿಡಿಯೋ ಡಿಲೀಟ್ ಆಗಿದ್ದವು. ಜೀವಾರನ್ನು ವಿವಸ್ತ್ರಗೊಳಿಸಿರುವುದು, ಇತರೆ ಕೆಲ ವಿಡಿಯೋಗಳು ಇರಲಿಲ್ಲ. ಎಫ್ಎಸ್ಎಲ್ ಮೂಲಕ ಮರು ಸಂಗ್ರಹಿಸಿದಾಗ ಆ ವಿಡಿಯೋಗಳು ಪತ್ತೆಯಾದವು. ಡೆತ್ನೋಟ್ನಲ್ಲಿ ಜೀವಾ ಮಾಡಿದ್ದ ಬಹುತೇಕ ಆರೋಪಗಳು ಸಾಬೀತಾಗಿದೆ.
ಮಾ.11ರಂದು DySP ಕನಕಲಕ್ಷ್ಮೀ ಬಂಧಿಸಿ ವಿಚಾರಣೆ ಮಾಡಿದ್ದ SIT, ಸದ್ಯ ತನಿಖೆ ಪೂರ್ಣಗೊಳಿಸಿ ಎಸ್ಐಟಿಯಿಂದ ಅಂತಿಮ ವರದಿ ಸಲ್ಲಿಸಲಾಗಿದೆ. ಆದರೆ ವಿಚಾರಣಾಧೀನ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸೋದು ಬಾಕಿ ಇದೆ. ಏಕೆಂದರೆ ಕನಕಲಕ್ಷ್ಮೀ ಸರ್ಕಾರಿ ಅಧಿಕಾರಿ ಆಗಿರುವುದರಿಂದ ಪ್ರಕರಣದ ಚಾರ್ಜ್ಶೀಟ್ ಸಲ್ಲಿಸಲು ಪ್ರಾಸಿಕ್ಯೂಷನ್ ಅನುಮತಿ ಬೇಕು. ಸದ್ಯ ಪ್ರಾಸಿಕ್ಯೂಷನ್ ಅನುಮತಿಗಾಗಿ SIT ಅಧಿಕಾರಿಗಳು ಕಾಯುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






