ಸರ್ಕಾರದ ವಿರುದ್ಧ ಸಿಡಿದೆದ್ದ ಸಾರಿಗೆ ನೌಕರರು: ರಾಜ್ಯದಲ್ಲಿ ಮತ್ತೆ ಸ್ತಬ್ಧವಾಗುತ್ತಾ ಸಾರಿಗೆ ಸಂಚಾರ?

ಬೆಂಗಳೂರು: ರಾಜ್ಯದ ನಾನಾ ಸಾರಿಗೆ ಸಂಸ್ಥೆಗಳ ನೌಕರರು ಮತ್ತೆ ಮುಷ್ಕರ ಮಾಡಲು ಮುಂದಾಗಿದ್ದಾರೆ ಎಂಬ ಸುಳಿವು ಸರ್ಕಾರಕ್ಕೆ ಸಿಕ್ಕಿದೆ. ಹೌದು ಏಪ್ರಿಲ್ 15 ರಂದು ಸಿಎಂ ಸಿದ್ದರಾಮಯ್ಯ ನಿವಾಸದ ಮುಂದೆ ಧರಣಿ ಸತ್ಯಾಗ್ರಹದ ನಡೆಸಲಾಗುವುದು ಎಂದು ಜಂಟಿ ಕ್ರಿಯಾ ಸಮಿತಿ ಹೇಳಿದೆ. ಅಲ್ಲದೆ, ಸಿಎಂ ಸಿದ್ದರಾಮಯ್ಯ ಕೊಟ್ಟ ಮಾತು ತಪ್ಪಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದೆ.
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಡಿಸೆಂಬರ್ 31 ರಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗಿದ್ದರು. ಆ ಸಂದರ್ಭದಲ್ಲಿ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದ ಸಿಎಂ, ಮುಷ್ಕರ ನಿರ್ಧಾರ ಹಿಂತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಅಲ್ಲದೆ, ಸಂಕ್ರಾಂತಿ ನಂತ್ರ ನೌಕರರ ಸಂಘಟನೆ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದರು.
ನೌಕರರ ಜೊತೆ ಮಾತುಕತೆ ನಡೆಸುವುದು ಮಾತ್ರವಲ್ಲದೆ, ಪ್ರಯಾಣ ದರ ಏರಿಕೆ ಷರತ್ತನ್ನೂ ಹಾಕಲಾಗಿತ್ತು. ಅದರಂತೆ, ನಿಗಮವು ಈಗಾಗಲೇ ಟಿಕೆಟ್ ದರ ಏರಿಕೆ ಮಾಡಿದೆ. ಆದರೆ, ನೌಕರರನ್ನು ಮಾತ್ರ 2 ತಿಂಗಳು ಕಳೆದರೂ ಮಾತುಕತೆಗೆ ಕರೆದಿಲ್ಲ. ಇದರಿಂದಾಗಿ ಸಾರಿಗೆ ನೌಕರರ ಸಂಘಟನೆಗಳು ಸಿಎಂ ವಿರುದ್ಧ ಕೆರಳಿವೆ. ಏಪ್ರಿಲ್ 15 ರ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಧರಣಿ ಸತ್ಯಾಗ್ರಹ ನಡೆಸುವ ಸುಳಿವು ನೀಡಿವೆ.
ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಸರಿ ಸಮಾನ ವೇತನ ನೀಡಬೇಕು (7 ನೇ ವೇತನ ಆಯೋಗ ಜಾರಿಯಾಗಬೇಕು), 38 ತಿಂಗಳ ವೇತನ ಹಿಂಬಾಕಿ ನೀಡಬೇಕು, ಕಾರ್ಮಿಕ ಸಂಘಟನೆಗಳ ಚುನಾವಣೆ ಮಾಡಬೇಕು ಹಾಗೂ 2021 ರ ವೇಳೆಯಲ್ಲಿ ಮುಷ್ಕರದ ವಜಾಗೊಂಡ ನೌಕರರ ಸಮಸ್ಯೆಯನ್ನು ಬಗೆಹರಿಸಬೇಕು ಎಂಬುದೂ ಸೇರಿದಂತೆ ಅನೇಕ ಬೇಡಿಕೆಗಳ ಈಡೇರಿಕೆಗೆ ಸಾರಿಗೆ ನೌಕರರು ಆಗ್ರಹಿಸಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?






