ಸೀರೆ ಕದ್ದ ಕಾರಣಕ್ಕೆ ಮಹಿಳೆಗೆ ಥಳಿತ ಕೇಸ್: ಬಟ್ಟೆ ಅಂಗಡಿ ಮಾಲೀಕ ಸೇರಿ ಇಬ್ಬರು ಅರೆಸ್ಟ್
ಬೆಂಗಳೂರು:- ಸೀರೆ ಕದ್ದ ಎಂಬ ಕಾರಣಕ್ಕೆ ಮಹಿಳೆಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಟ್ಟೆ ಅಂಗಡಿ ಮಾಲೀಕ ಸೇರಿ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ಅಂಗಡಿಯ ಮಾಲೀಕ ಉಮೇದ್ ರಾಮ್, ಕೆಲಸಗಾರ ಮಹೇಂದ್ರ ಶರ್ಮಾ ಎನ್ನಲಾಗಿದೆ. ಕಳೆದ ಶನಿವಾರ ಮಹಿಳೆಯೊಬ್ಬರು ಉಮೇದ್ ರಾಮ್ ಅಂಗಡಿಯಲ್ಲಿ ಸೀರೆ ಕಳ್ಳತನ ಮಾಡಿದ್ದರು. ಇದನ್ನ ಗಮನದಲ್ಲಿಟ್ಟುಕೊಂಡು, ಉಮೇದ್ ರಾಮ್ ಭಾನುವಾರ ಕಾದು ಕೂತಿದ್ದಾನೆ.
ಮಹಿಳೆ ಬರುತ್ತಿದ್ದಂತೆ ಆಕೆಯನ್ನ ಹಿಡಿದು, ಆತ ಮತ್ತು ಸಿಬ್ಬಂದಿ ಹಾಡಹಗಲೇ ಜನನಿಬಿಡ ರಸ್ತೆಯಲ್ಲಿ ಬೂಟ್ ಕಾಲಿನಲ್ಲಿ ಒದ್ದು, ಮನಬಂದಂತೆ ಥಳಿಸಿದ್ದರು. ಮಹಿಳೆ ನೋವಿನಿಂದ ಅಂಗಲಾಚಿದರೂ ಬಿಡದ ಪಾಪಿ ಮಾಲೀಕನ ಕೃತ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಮಹಿಳೆ ದೂರು ಕೊಡಲು ಮುಂದಾದರೂ ಕೇರ್ ಮಾಡದ ಸಿಟಿ ಮಾರ್ಕೆಟ್ ಪೊಲೀಸರು, ಕಳ್ಳತನ ಕೇಸ್ ಹಾಕಿ ಮಹಿಳೆಯನ್ನ ಜೈಲಿಗಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದಂತೆ, ಕನ್ನಡಪರ ಹೋರಾಟಗಾರರು ಮಹಿಳೆಯ ಪರವಾಗಿ ನಿಂತಿದ್ದಾರೆ. ಕನ್ನಡ ಪರ ಸಂಘಟನೆಗಳು ಎಂಟ್ರಿ ಕೊಡುತ್ತಿದ್ದಂತೆ ಸಿಟಿ ಮಾರ್ಕೆಟ್ ಪೊಲೀಸರು, ತರಾತುರಿಯಲ್ಲಿ ಮಾಲೀಕನ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?