ಸುವರ್ಣ ಸೌಧದಲ್ಲೇ ನಿನ್ನ ಹೆಣ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು: ಮಾಜಿ ಸಚಿವ ಸಿಟಿ ರವಿ

ಬೆಂಗಳೂರು: ಸುವರ್ಣ ಸೌಧದಲ್ಲೇ ನಿನ್ನ ಹೆಣ ಕಳುಹಿಸುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದು ಮಾಜಿ ಸಚಿವ, ಎಂಎಲ್ಸಿ ಸಿಟಿ ರವಿ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಶೋಕ್ ಅವರನ್ನು ಭೇಟಿ ಮಾಡಿ ವಾಪಸ್ ಬರುವಾಗ ಮೂರ್ನಾಲ್ಕು ಜನ ಹಲ್ಲೆ ಮಾಡಲು ಬಂದರು. ನಿನ್ನ ಕೊಲೆ ಮಾಡುತ್ತೇವೆ, ನಿನ್ನ ಹೆಣ ಚಿಕ್ಕಮಗಳೂರಿಗೆ ಕಳುಹಿಸುತ್ತೇವೆ ಎಂದು ಕೂಗಾಡಿದರು. ಮಾರ್ಷಲ್ ಗಳು ಅವರನ್ನು ಗೇಟಿನ ಆಚೆ ಹಾಕಿದರು. ಆಗಲೂ ಗೇಟ್ಗೆ ಒದೆಯುತ್ತಿದ್ದರು ಎಂದರು.
ಇನ್ನೂ ರಾತ್ರಿ ಸುತ್ತಾಡುವಾಗ ಪೊಲೀಸರು ವಾಕಿ-ಟಾಕಿಯಲ್ಲಿ ಕಡಿಮೆ ಮಾತನಾಡುತ್ತಿದ್ದರು, ಪೋನ್ನಲ್ಲಿ ಹೆಚ್ಚಾಗಿ ಮಾತನಾಡುತ್ತಿದ್ದರು. ಕೆಲವು ಕರೆ ಸೇವ್ ಆಗಿರುವ ನಂಬರಗಳಿಂದ, ಕೆಲವು ಕರೆ ನಂಬರಗಳಿಂದ ಬರುತ್ತಿದ್ದವು. ನನ್ನ ಜೊತೆ ಸ್ಕಾರ್ಪಿಯೋದಲ್ಲಿ ರಾಮದುರ್ಗ ಡಿವೈಎಸ್ಪಿ ಚಿದಂಬರ್, ಬೆಳಗಾವಿ ಮಾರ್ಕೆಟ್ ಠಾಣೆ ಎಸ್ಐ ಗಂಗಾಧರ್, ಕಿತ್ತೂರು ಎಸ್ಐ ಇದ್ದರು ಎಂದು ತಿಳಿಸಿದರು.
ಈಗಲೂ ನನಗೆ ಜೀವ ಬೆದರಿಕೆ ಇದೆ. ನನಗೆ ರಕ್ಷಣೆ ಕೊಡುವುದು ಸರ್ಕಾರದ ಜವಾಬ್ದಾರಿ. ಬೆಳಗಾವಿ ಆಯುಕ್ತ, ಎಸ್ಪಿ ಮತ್ತು ಇನ್ನತರೆ ಅಧಿಕಾರಿಗಳು ನನ್ನ ಜೊತೆ ನಡೆದುಕೊಂಡ ರೀತಿ ನಿಗೂಢವಾಗಿತ್ತು. ಪೊಲೀಸರ ಅಧಿಕೃತ ಫೋನ್, ಖಾಸಗಿ ಫೋನ್ ಕಾಲ್ ಬಗ್ಗೆ ತನಿಖೆ ಆಗಲಿ. ನನ್ನ ಫೋನ್ ಟ್ಯಾಪಿಂಗ್ ಆಗುತ್ತಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರಿನ ಸಂಸ್ಕೃತಿ ಬಗ್ಗೆ ಮಾತಾಡಿದ್ದಾರೆ. ನಾನು ಬೆಳೆದ ಬಂದ ಹಾದಿ, ಅವರು ಬೆಳೆದು ಬಂದ ರೀತಿ ಏನು ಅಂತ ಚಿಕ್ಕಮಗಳೂರಿನ ಜನತೆಗೆ ಗೊತ್ತಿದೆ. ನಾನು ತಪ್ಪು ಮಾಡಿದ್ದರೇ ಕಾನೂನು ಪ್ರಕಾರ ಶಿಕ್ಷೆ ಏನು ಬೇಕಾದರೂ ಆಗಲಿ ಅನುಭವಿಸುತ್ತೇನೆ. ರೇವಣ್ಣ, ಮುನಿರತ್ನ, ನನ್ನ ಮೇಲೆ ನಡೆದಿದ್ದನ್ನು ನೋಡಿದರೇ ಇದು ಷಡ್ಯಂತ್ರದ ಒಂದು ಭಾಗ. ಕಾಲ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಸತ್ಯ ಮೇಯ ಜಯತೆ ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






