ಸೌಜನ್ಯ ಪರ ಹೋರಾಟಗಾರನ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ ದಾಖಲು
ಬೆಂಗಳೂರು: ಸೌಜನ್ಯ ಪರ ಹೋರಾಟ ನಡೆಸುತ್ತಿದ್ದ ಕರುನಾಡ ಯುವ ಸೇನೆ ಅಧ್ಯಕ್ಷ ರವಿಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ವಂಚನೆ ಪ್ರಕರಣ ದಾಖಲಾಗಿದೆ.
ಶ್ರೀರಾಮಸೇನೆ ಮಹಿಳಾ ಕಾರ್ಯಕರ್ತೆಯೊಬ್ಬರು ಕೆ.ಜಿ.ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಪ್ರಕಾರ, ರವಿಕುಮಾರ್ ಮಹಿಳೆಯ ಫೋಟೋಗಳನ್ನು ಎಡಿಟ್ ಮಾಡಿ ತನ್ನ ಫೋಟೋ ಪಕ್ಕದಲ್ಲಿ ಸೇರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಮಹಿಳೆಯ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಹಿಳೆ ಮೊದಲು ಕರುನಾಡ ಯುವ ಸೇನೆ ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ರವಿಕುಮಾರ್ ಅವರಿಂದ ಸುಮಾರು ₹2.5 ಲಕ್ಷ ಹಣ ಪಡೆದಿದ್ದರು. ಹಣವನ್ನು ಮರಳಿ ಕೇಳಿದಾಗ ಮನೆ ಮುಂದೆ ಜಗಳವಾಡಿದ ಪರಿಣಾಮ ಆಕೆ ಸಂಘಟನೆಯಿಂದ ದೂರವಿದ್ದು, ಬಳಿಕ ಶ್ರೀರಾಮಸೇನೆಗೆ ಸೇರಿಕೊಂಡಿದ್ದಾರೆ.
ಆ ನಂತರ, ಹಣಕ್ಕಾಗಿ ಒತ್ತಾಯಿಸಿದಾಗ ಮಹಿಳೆಯ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ ಜೊತೆಗೆ, ಅವಳ ಪತಿಯ ಎದುರು ಅವಳ ಚಾರಿತ್ರ್ಯ ಕುರಿತು ತಪ್ಪು ಪ್ರಚಾರ ನಡೆಸಿ ಅವಮಾನ ಮಾಡಿದ್ದಾರೆಂದು ದೂರಿನಲ್ಲಿ ಹೇಳಲಾಗಿದೆ.
ಗಮನಾರ್ಹವೆಂದರೆ, ಇದೇ ರವಿಕುಮಾರ್ ಸೌಜನ್ಯ ಪರ ಹೋರಾಟದಲ್ಲಿ ಭಾಗವಹಿಸಿ, ಮಹೇಶ್ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣ ಅವರ ಜೊತೆ ಸೌಜನ್ಯಗೆ ನ್ಯಾಯ ಸಿಗಲು ಪಾದಯಾತ್ರೆ ಮಾಡಿದ್ದರು.
ನಿಮ್ಮ ಪ್ರತಿಕ್ರಿಯೆ ಏನು?