ಹಿಂಗೂ ಯಾಮಾರಿಸ್ತಾರೆ ಹುಷಾರ್: ಚಿನ್ನ ಕದ್ದು ಕಲ್ಲು ಕೊಟ್ಟು ಹೋದ ನಕಲಿ ಪೊಲೀಸರು!

ಫೆಬ್ರವರಿ 18, 2025 - 20:58
 0  16
ಹಿಂಗೂ ಯಾಮಾರಿಸ್ತಾರೆ ಹುಷಾರ್: ಚಿನ್ನ ಕದ್ದು ಕಲ್ಲು ಕೊಟ್ಟು ಹೋದ ನಕಲಿ ಪೊಲೀಸರು!

ಕೊಪ್ಪಳ:- ಕೊಪ್ಪಳದಲ್ಲಿ ಪೊಲೀಸರ ಹೆಸರು ಹೇಳಿಕೊಂಡು ವಂಚಕರು ಮಹಿಳೆಯ ಬಂಗಾರದ ಆಭರಣ ಕದ್ದು, ಕಲ್ಲು ಕೊಟ್ಟು ಕಳುಹಿಸಿದ ಘಟನೆ ನಡೆದಿದೆ.

ಸುಮಾ ಅಲಬೂರ ಎಂಬವರ ಒಂದೂವರೆ ತೊಲೆಯ ಬಂಗಾರದ ಸರವನ್ನು ಪೊಲೀಸರ ಸೋಗಿನಲ್ಲಿ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಸೋಮವಾರ ಮಧ್ಯಾಹ್ಮ ಸುಮಾ ಒಬ್ಬರೇ ಮನೆಯಿಂದ ಬ್ಯಾಂಕ್‌ಗೆ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಇಬ್ಬರು ಬಂದು, ತಾವು ಪೊಲೀಸ್‌ ಎಂದು ಹೇಳಿಕೊಂಡು ಪರಿಚಯ ಮಾಡಿಕೊಂಡಿದ್ದಾರೆ. ಪಟ್ಟಣದಲ್ಲಿ ಕಳ್ಳತನದ ಹಾವಳಿ ಹೆಚ್ಚಾಗಿದೆ. ಆಭರಣ ಮೈಮೇಲೆ ಧರಿಸಿ ಓಡಾಡಬೇಡಿ. ಹೀಗೆ ಓಡಾಡಿದರೆ ಯಾರಾದರೂ ಕಳ್ಳರು ಕದ್ದು ಪರಾರಿಯಾಗುತ್ತಾರೆ ಎಂದು ಹೇಳಿದ್ದಾರೆ.

ಅನುಮಾನಗೊಂಡ ಮಹಿಳೆ, ನೀವು ಪೊಲೀಸ್‌ ಸಮವಸ್ತ್ರದಲ್ಲಿಲ್ಲವಲ್ಲಾ ಎಂದಿದ್ದಾರೆ. ಪೊಲೀಸ್‌ ಸಮವಸ್ತ್ರದಲ್ಲಿ ಬಂದರೆ ಕಳ್ಳರು ಸಿಗುವುದಿಲ್ಲ. ಆದ್ದರಿಂದ ಆ ಬಟ್ಟೆ ಹಾಕಿಲ್ಲ ಎಂದು ಕಳ್ಳರು‌ ಮಹಿಳೆಗೆ ಸಮಜಾಯಿಷಿ ಹೇಳಿ ನಂಬಿಸಿದ್ದಾರೆ. ಪಕ್ಕದಲ್ಲಿದ್ದ ಇನ್ನೊಬ್ಬ ವ್ಯಕ್ತಿಗೆ ಇದೇ ರೀತಿ ಹೇಳಿ ಆತ ಬಿಚ್ಚಿಕೊಟ್ಟ ಉಂಗುರವನ್ನು ಪೇಪರ್ ಹಾಳೆಯಲ್ಲಿ ಸುತ್ತಿ ಮರಳಿ ಕೊಟ್ಟಿದ್ದಾರೆ.

ಬಳಿಕ ಸುಮಾ ಅವರ ಕೊರಳಲ್ಲಿದ್ದ ಬಂಗಾರದ ಸರವನ್ನು ಅವರಿಂದ ಪಡೆದು, ಪೇಪರ್ ಹಾಳೆಯಲ್ಲಿ ಮಡಚಿಕೊಡುವುದಾಗಿ ನಂಬಿಸಿ ಕಲ್ಲು ಸುತ್ತಿದ ಹಾಳೆಯ ಕವರ್‌ ನೀಡಿ ಮನೆಯಲ್ಲಿ ಭದ್ರವಾಗಿ ಇರಿಸುವಂತೆ ಹೇಳಿ ಸರ ಕದ್ದು ಪರಾರಿಯಾಗಿದ್ದಾರೆ.

ಮಹಿಳೆ ಮನೆಗೆ ಹೋಗಿ ಹಾಳೆ ಬಿಚ್ಚಿ ನೋಡಿದಾಗ ಅದರಲ್ಲಿ ಕಲ್ಲುಗಳು ಇರುವುದು ಕಂಡು ಕಂಗಾಲಾಗಿದ್ದಾರೆ. ಕೂಡಲೇ ಕುಕನೂರು ಪೋಲಿಸ್ ಠಾಣೆಗೆ ತೆರಳಿ ನಡೆದ ವಿಷಯ ತಿಳಿಸಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow