ಅಪ್ರಾಪ್ತ ಬಾಲಕಿಯ ರೇಪ್ & ಮರ್ಡರ್ ಕೇಸ್: ಮರ್ಮಾಂಗಕ್ಕೆ 19 ಬಾರಿ ಚಾಕು ಇರಿದು ಕೊಂದಿದ್ದ ಕಾಮುಕ!
ಮೈಸೂರು: ದಸರಾ ಹಬ್ಬದ ಸಂದರ್ಭದಲ್ಲಿ ಬಲೂನ್ ಮಾರಾಟಕ್ಕಾಗಿ ಕಲಬುರಗಿಯಿಂದ ಮೈಸೂರಿಗೆ ಬಂದಿದ್ದ ಒಂಬತ್ತು ವರ್ಷದ ಬಾಲಕಿ ದುರಂತ ಅಂತ್ಯ ಕಂಡಿದ್ದಾಳೆ. ಬಾಲಕಿ ಮೇಲಿನ ಅತ್ಯಾಚಾರ ಹಾಗೂ ಭೀಕರ ಹತ್ಯೆ ಪ್ರಕರಣದಲ್ಲಿ ಆರೋಪಿ ಕಾರ್ತಿಕ್ ಎಂಬಾತನನ್ನು ಮೈಸೂರು ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಅರಮನೆ ಮುಂಭಾಗದ ಇಟ್ಟಿಗೆಗೂಡಿನ ಖಾಲಿ ಜಾಗದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಪೋಷಕರೊಂದಿಗೆ ಅಲ್ಲಿಯೇ ಮಲಗಿದ್ದ ಬಾಲಕಿಯನ್ನು ರಾತ್ರಿ 2 ಗಂಟೆಯ ಸುಮಾರಿಗೆ ಆರೋಪಿ ಹೊತ್ತುಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ.
ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಗೆ ಹಲವು ಇರಿತ ಗಾಯಗಳಾಗಿರುವುದು ಹಾಗೂ ಕೊಲೆ ಅತ್ಯಂತ ಭೀಕರವಾಗಿರುವುದು ದೃಢಪಟ್ಟಿದೆ. ಆರೋಪಿ ಅತಿಯಾದ ಮದ್ಯಪಾನದ ನಶೆಯಲ್ಲಿ ಈ ಅಮಾನವೀಯ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿಗೆ 19 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗ್ತಿದೆ. ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿಯ ದೇಹದಲ್ಲಿ 19 ಚಾಕು ಇರಿತದ ಗುರುತು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಅಜ್ಜಿ ಪಕ್ಕದಲ್ಲಿ ಮಲಗಿದ್ದವಳನ್ನು ಕಿಡ್ನ್ಯಾಪ್ ಮಾಡಿ ಹೊತ್ತೋಯ್ತಿದ್ದ ಕಾರ್ತಿಕ್, ಕೊಲೆಗೈದು ಆಕೆ ವಾಸವಾಗಿದ್ದ ಟೆಂಟ್ ಬಳಿಯೇ ಶವ ಬಿಸಾಡಿ ಪರಾರಿಯಾಗಿದ್ದ ಎಂದು ವರದಿ ಆಗಿದೆ.
ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಪತ್ತೆಹಚ್ಚಿ ಮೇಟಗಳ್ಳಿ ಪ್ರದೇಶದಲ್ಲಿ ಬಂಧಿಸಿದರು. ತಪ್ಪಿಸಿಕೊಳ್ಳಲು ಯತ್ನಿಸಿದಾಗ ಆರೋಪಿಗೆ ಪೊಲೀಸರಿಂದ ಕಾಲಿಗೆ ಗುಂಡು ಹಾರಿಸಲಾಯಿತು. ಪ್ರಸ್ತುತ ಆರೋಪಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು, ಘಟನೆಯ ಹಿನ್ನೆಲೆ ಹಾಗೂ ಆರೋಪಿಯ ಹಿನ್ನಲೆ ಕುರಿತು ವಿವರಗಳನ್ನು ಸಂಗ್ರಹಿಸುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?