ಏಷ್ಯಾ ಕಪ್ ಟ್ರೋಫಿ ಹಸ್ತಾಂತರಿಸಿ: ಮೊಹ್ಸಿನ್ ನಖ್ವಿಗೆ ಬಿಸಿಸಿಐ ಎಚ್ಚರಿಕೆ ಪತ್ರ
ಮುಂಬೈ: ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹಾಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಗೆ ಏಷ್ಯಾ ಕಪ್ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧಿಕೃತವಾಗಿ ಇಮೇಲ್ ಮೂಲಕ ಪತ್ರ ಬರೆದಿದೆ.
ಕಳೆದ ಸೆಪ್ಟೆಂಬರ್ 28ರಂದು ನಡೆದ ಟಿ20 ಏಷ್ಯಾ ಕಪ್ ಫೈನಲ್ನಲ್ಲಿ ಭಾರತ ಪಾಕಿಸ್ತಾನ ವಿರುದ್ಧ 5 ವಿಕೆಟ್ಗಳಿಂದ ಜಯಗಳಿಸಿತ್ತು. ಆದರೆ, ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿತ್ತು. ಬಳಿಕ ನಖ್ವಿ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಿಂದ ಟ್ರೋಫಿಯನ್ನೂ ತೆಗೆದುಕೊಂಡು ಹೊರಟಿದ್ದರು. ಈಗ ಬಿಸಿಸಿಐ ಟ್ರೋಫಿಯನ್ನು ಹಿಂದಿರುಗಿಸಲು ಸೂಚಿಸಿದೆ.
ಈ ಕುರಿತು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ, “ನಖ್ವಿಯವರಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಪ್ರತಿಕ್ರಿಯೆ ಬರದಿದ್ದರೆ, ಈ ವಿಷಯವನ್ನು ಐಸಿಸಿಗೆ ದೂರು ನೀಡುತ್ತೇವೆ,” ಎಂದು ಎಚ್ಚರಿಸಿದ್ದಾರೆ.
ನಖ್ವಿಯವರ ಆಪ್ತ ವಲಯದ ಪ್ರಕಾರ, ಟ್ರೋಫಿ ಸದ್ಯ ದುಬೈನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕಚೇರಿಯಲ್ಲೇ ಇದೆ. ಯಾರೂ ತನ್ನ ಅನುಮತಿಯಿಲ್ಲದೆ ಟ್ರೋಫಿಯನ್ನು ಹಸ್ತಾಂತರಿಸಬಾರದು ಎಂದು ನಖ್ವಿ ಸೂಚನೆ ನೀಡಿದ್ದಾರೆ. ಅಗತ್ಯವಾದರೆ ತಾನೇ ವೈಯಕ್ತಿಕವಾಗಿ ಟ್ರೋಫಿಯನ್ನು ಭಾರತ ತಂಡ ಅಥವಾ ಬಿಸಿಸಿಐಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?