ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರ ದೃಷ್ಟಿಕೋನಕ್ಕೆ ದ್ರೋಹ ಬಗೆದಿದೆ: ಪ್ರಧಾನಿ ಮೋದಿ

ಹರಿಯಾಣ: ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರ ದೃಷ್ಟಿಕೋನಕ್ಕೆ ದ್ರೋಹ ಬಗೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಹರಿಯಾಣದ ಹಿಸಾರ್ನಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರ ದೃಷ್ಟಿಕೋನಕ್ಕೆ ದ್ರೋಹ ಬಗೆದಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳನ್ನು 2ನೇ ದರ್ಜೆಯ ನಾಗರಿಕರು ಎಂದು ಪರಿಗಣಿಸಿದೆ.
ಡಾ. ಅಂಬೇಡ್ಕರ್ ಬಡವರು ಮತ್ತು ಹಿಂದುಳಿದವರಿಗೆ ಘನತೆಯ ಕನಸು ಕಂಡಿದ್ದರು. ಆದರೆ ಕಾಂಗ್ರೆಸ್ ಮತ ಬ್ಯಾಂಕ್ ರಾಜಕೀಯದ ವೈರಸ್ ಅನ್ನು ಹರಡಿತು ಮತ್ತು ಅವರ ದೃಷ್ಟಿಕೋನವನ್ನು ನಿರ್ಬಂಧಿಸಿತು ಎಂದು ಅವರು ಹೇಳಿದರು. ಅಂಬೇಡ್ಕರ್ ಜೀವಂತವಾಗಿದ್ದಾಗ ಅವರನ್ನು ಅವಮಾನಿಸಿದರು, ಚುನಾವಣೆಯಲ್ಲಿ ಸೋಲುವಂತೆ ಮಾಡಿದರು ಮತ್ತು ಅವರ ಪರಂಪರೆಯನ್ನು ಅಳಿಸಲು ಪ್ರಯತ್ನಿಸಿದರು.
ನಮ್ಮ ಸಂವಿಧಾನದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನಿಷೇಧಿಸಲಾಗಿದೆ. ಎಸ್ಸಿ, ಎಸ್ಟಿ, ಒಬಿಸಿಗಳಿಗೆ ಮಾತ್ರ ಮೀಸಲಾತಿ ಕಲ್ಪಿಸಲಾಗಿದೆ ಆದರೆ ಕಾಂಗ್ರೆಸ್ ಈ ಬಗ್ಗೆ ಎಂದು ಎಂದಿಗೂ ಚಿಂತಿಸಲಿಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಕಂಡ ಕನಸನ್ನು ಕಾಂಗ್ರೆಸ್ ನನಸಾಗಿಸಲಿಲ್ಲ,
ಸಂವಿಧಾನದ ನಿಬಂಧನೆಗಳನ್ನು ಸಮಾಧಾನಪಡಿಸುವ ಸಾಧನವನ್ನಾಗಿ ಮಾಡಿಕೊಂಡು ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಗುತ್ತಿಗೆಯಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಹಕ್ಕುಗಳನ್ನು ಕಿತ್ತುಕೊಂಡು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿದೆ. ಆದರೆ ಅಂಬೇಡ್ಕರ್ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲಾಗುವುದಿಲ್ಲ ಎಂದು ಸಂವಿಧಾನದಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ ಈ ನಿಯಮವನ್ನು ಕಾಂಗ್ರೆಸ್ ಉಲ್ಲಂಘಿಸಿದೆ ಎಂದರು.
ನಿಮ್ಮ ಪ್ರತಿಕ್ರಿಯೆ ಏನು?






