ದೇವರಿಗೆ ವಾಮಾಚಾರವಾ? ದೇವಾಲಯದ ಬಾಗಿಲಿಗೆ ಕಿಡಿಗೇಡಿಗಳಿಂದ ಬೆಂಕಿ!

ತುಮಕೂರು:- ತುಮಕೂರು ಜಿಲ್ಲೆ ತಿಪಟೂರು ತಾಲೂಕಿನಲ್ಲಿ ವಾಮಾಚಾರ ಮಾಡಿ ಶಕ್ತಿ ದೇವತೆ ಕೆಂಪಮ್ಮ ದೇವಿ ದೇವಾಲಯದ ಬಾಗಿಲಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಜರುಗಿದೆ.
ಕೆಂಪಮ್ಮ ದೇವಿ ದೇವಾಲಯಕ್ಕೆ ಮಂಗಳವಾರ ಸಂಜೆ ಯಾರೂ ಇಲ್ಲದ್ದನ್ನು ಗಮನಿಸಿ ಪಶ್ಚಿಮದ ಬಾಗಿಲಿಗೆ ವಾಮಾಚಾರ ಮಾಡಿದ್ದಾರೆ. ನಂತರ ವಾಮಾಚಾರದ ವಸ್ತುಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಸಂಪೂರ್ಣ ಬಾಗಿಲಿಗೆ ಬೆಂಕಿ ಆವರಿಸಿದೆ. ಇಂದು ಬೆಳಗ್ಗೆ ಪೂಜಾ ಕೈಂಕರ್ಯಗಳನ್ನು ನಡೆಸಲು ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಘಟನೆಯಿಂದ ದೇವಸ್ಥಾನದ ಬಾಗಿಲು ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳದಲ್ಲಿ ವಾಮಾಚಾರಕ್ಕೆ ಬಳಸಿದ್ದ ಬೊಂಬೆ, ಕುಂಕುಮ, ತಾಮ್ರದ ತಗಡು ವಸ್ತುಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಕಿಬ್ಬನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಕೈಗೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






