ಸಿಂಧೂ ನದಿ ನಮ್ಮದು: ನದಿಯಲ್ಲಿ ನೀರು ಹರಿಯದಿದ್ರೆ, ಅಲ್ಲಿ ಅವರ ರಕ್ತ ಹರಿಯುತ್ತೆ - ಭಾರತಕ್ಕೆ ಪಾಕ್ ಮುಖಂಡ ಎಚ್ಚರಿಕೆ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಗೆ ಇದೀಗ ಭಾರತ ತಕ್ಕ ಉತ್ತರ ನೀಡಲು ಸಜ್ಜಾಗಿದೆ. ಈಗಾಗಲೇ ಪಾಕಿಸ್ತಾನ ವಿರುದ್ಧ ಕೆಲ ಮಹತ್ವದ ತೀರ್ಮಾನಗಳನ್ನ ತೆಗೆದುಕೊಂಡಿದೆ. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಅಮಾಯಕರ ಜೀವ ತೆಗೆದ ಪಾಪಿ ಉಗ್ರರನ್ನು ಹಿಗ್ಗಾಮುಗ್ಗಾ ಅಟ್ಟಾಡಿಸಿಕೊಂಡು ಹೊಡೆದು ಹಾಕುವ ಪ್ರತಿಜ್ಞೆ ಕೂಡ ಮಾಡಿದ್ದಾರೆ.
ಇದರ ನಡುವೆ ಭಾರತದ ಈ ನಿರ್ಧಾರವನ್ನು ಖಂಡಿಸಿರುವ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ "ಭಾರತ ಒಂದು ವೇಳೆ ಸಿಂಧು ನದಿ ಒಪ್ಪಂದವನ್ನು ರದ್ದುಗೊಳಿಸಿದರೆ, ರಕ್ತ ಹರಿಯುತ್ತದೆ" ಎಂದು ಎಚ್ಚರಿಕೆ ನೀಡಿದ್ದಾರೆ.
ಸಿಂಧು ನದಿ ದಡದಲ್ಲಿ ನಿಂತು ಮಾತನಾಡಿದ ಬಿಲಾವಲ್ ಭುಟ್ಟೋ, "ಸಿಂಧು ನದಿ ಒಪ್ಪಂದ ರದ್ದುಗೊಳಿಸುವ ಮೂಲಕ ಭಾರತ ಅನವಶ್ಯಕ ಅಪಾಯವನ್ನು ಮೈಮೇಲೆ ಎಳೆದುಕೊಂಡಿದೆ. ಈ ಒಪ್ಪಂದ ರದ್ದುಗೊಂಡರೆ ಈ ಭಾಗದಲ್ಲಿ ರಕ್ತ ಹರಿಯುತ್ತದೆ. ಭಾರತದ ಈ ನಿರ್ಧಾರ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹೆಚ್ಚಿಸಿದೆ" ಎಂದು ಹರಿಹಾಯ್ದಿದ್ದಾರೆ.
ಸಿಂಧು ನದಿ ನೀರು ಹಂಚಿಕೆ ಒಪ್ಪಂದವನ್ನು ರದ್ದುಗೊಳಿಸುವ ಭಾರತದ ನಿರ್ಧಾರವು ಕಾನೂನುಬಾಹಿರ ಮತ್ತು ಅಮಾನವೀಯವಾಗಿದೆ. ನಾವು ಪಾಕಿಸ್ತಾನದ ಹಿತಾಸಕ್ತಿಯ ವಿಷಯಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸ್ತಾಪಿಸುತ್ತೇವೆ. ಯಾವುದೇ ಕಾರಣಕ್ಕೂ ಪಾಕಿಸ್ತಾನಕ್ಕೆ ಅನ್ಯಾಯ ಆಗಲು ಬಿಡುವುದಿಲ್ಲ" ಎಂದು ಬಿಲಾವಲ್ ಭುಟ್ಟೋ ಗುಡುಗಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






