1 ವರ್ಷದ ಹಸುಗೂಸಿಗೆ ಹೃದಯ ಶಸ್ತ್ರಚಿಕಿತ್ಸೆ: ದಾಖಲೆ ನಿರ್ಮಿಸಿದ ನಾರಾಯಣ ಹೆಲ್ತ್ಸಿಟಿಯ ವೈದ್ಯರ ತಂಡ!

ಬೆಂಗಳೂರು:- ಒಂದಿಲ್ಲೊಂದು ವಿಭಿನ್ನ ಪ್ರಯತ್ನ ಮಾಡಿ ವೈದ್ಯ ಲೋಕವನ್ನೇ ಆಶ್ಚರ್ಯ ಪಡುವಂತಹ ಕೆಲಸವನ್ನು ಬೆಂಗಳೂರಿನ ನಾರಾಯಣ ಹೆಲ್ತ್ಸಿಟಿ ಆಸ್ಪತ್ರೆ ಮಾಡುತ್ತಿದೆ.
ಅದರಂತೆ ಇದೀಗ ಹೃದಯ ವೈಪಲ್ಯ ಸಮಸ್ಯೆಯಿಂದ ಬಳಲುತ್ತಿದ್ದ ಒಂದು ವರ್ಷದ ಮಗುವಿಗೆ ಯಶಸ್ವಿಯಾಗಿ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಈ ಮೂಲಕ ಹೊಸ ದಾಖಲೆ ಬರೆದಿದ್ದಾರೆ.
ಹೊಸ ಹೃದಯ ಪಡೆದಿರುವ ಮಗು 10 ತಿಂಗಳಿದ್ದಾಗ ಹೃದಯ ಸಮಸ್ಯೆ ಕಾಣಿಸಿಕೊಂಡಿತ್ತು. ಹೃದಯ ಸಮಸ್ಯೆಯಿಂದ ಕಾಮಲೆ, ತೂಕನಷ್ಟ, ಕಿಬ್ಬೊಟ್ಟೆಯಲ್ಲಿ ದ್ರವ ಶೇಖರಣೆ ಮತ್ತು ಬೇಕಾದಷ್ಟು ಆಹಾರ ತಿನ್ನಲಾಗದೆ ಗಂಭೀರ ಸ್ವರೂಪ ಪಡೆದಿತ್ತು. ಮಗುವಿನ ಆರೋಗ್ಯದಲ್ಲಿ ಉಂಟಾದ ಏರುಪೇರನ್ನು ಗಮನಿಸಿದ ಪೋಷಕರು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಗೆ ಕರೆತಂದಿದ್ದರು
ಇಲ್ಲಿನ ವೈದ್ಯರು ಮಗುವನ್ನು ಪರಿಶೀಲಿಸಿದಾಗ ರಿಸ್ಟ್ರಿಕ್ಟಿವ್ ಕಾರ್ಡಿಯೋ ಮಯೀಪತಿ ಎಂಬ ಹೆಸರಿನ ಹೃದಯ ಸಂಬಂಧಿತ ಕಾಯಿಲೆ ಇದ್ದು, ಅಂತಿಮ ಘಟ್ಟದಲ್ಲಿರುವುದು ಪತ್ತೆ ಹಚ್ಚಿದ್ದಾರೆ. 72 ಗಂಟೆಯೊಳಗೆ ಮಗುವಿಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ಮಾಡಬೇಕೆಂದು ತೀರ್ಮಾನಿಸಿ, ಒಂದು ವರ್ಷದ ಮಗುವಿಗೆ ಹೊಂದುವ ಹೃದಯಕ್ಕೆ ಹುಡಕಾಟ ನಡೆಸಿದ್ದಾರೆ.
ಆಗ, ನರದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಮಗುವಿನ ಮೆದುಳು ನಿಷ್ಕ್ರಿಯಗೊಂಡಿತ್ತು. ಆಗ, ವೈದ್ಯರು ನರದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದ ಮಗುವಿನ ಪೋಷಕರಿಗೆ ಪರಿಸ್ಥಿತಿಯನ್ನು ವಿವರಿಸಿ ಬಾಲಕನ ಹೃದಯವನ್ನು ದಾನವಾಗಿ ಪಡೆದಿದ್ದಾರೆ.
ಬಳಿಕ, ರಿಸ್ಟ್ರಿಕ್ಟಿವ್ ಕಾರ್ಡಿಯೋ ಮಯೀಪತಿ ಕಾಯಿಲೆಯಿಂದ ಬಳಲುತ್ತಿದ್ದ ಒಂದು ವರ್ಷದ ಬಾಲಕನಿಗೆ ಆಗಸ್ಟ್ 18 ರಂದು ಹೊಸ ಹೃದಯ ಅಳವಡಿಸಿದ್ದಾರೆ. ಆಸ್ಪತ್ರೆಯಲ್ಲಿ ಸುಮಾರು ಎರಡು ತಿಂಗಳ ಚೇತರಿಕೆಯ ನಂತರ ಮಗುವನ್ನು ಡಿಸ್ಚಾರ್ಜ್ ಮಾಡಿದ್ದಾರೆ.
ಒಟ್ಟಾರೆ ನಾರಾಯಣ ಹೆಲ್ತ್ ಸಿಟಿ ವೈದ್ಯರ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






