BMTCಯ ಕಂಡಕ್ಟರ್ ಮತ್ತು ಡ್ರೈವರ್ ಗೆ ಜೀವ ಬೆದರಿಕೆ ಹಾಕಿದ ಪ್ರಯಾಣಿಕ!

ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಪ್ರಯಾಣಿಕನೋರ್ವ ಬಿಎಂಟಿಸಿ ಬಸ್ ನಿರ್ವಾಹಕ ಮತ್ತು ಚಾಲಕನಿಗೆ ಸ್ಕ್ರೂಡ್ರೈವರ್ ತೋರಿಸಿ ಬೆದರಿಕೆ ಹಾಕಿದ ಘಟನೆ ಜರುಗಿದೆ.
ಬೆದರಿಕೆ ಹಾಕಿದ ಪ್ರಯಾಣಿಕ ಕೊನಪ್ಪನ ಅಗ್ರಹಾರದಲ್ಲಿ ಬಸ್ ಹತ್ತಿದ್ದಾನೆ. ನಿರ್ವಾಹಕ ಪ್ರಯಾಣಿಕರಿಗೆ ಟಿಕೆಟ್ ನೀಡುವ ಸಂಬಂಧ ಬಸ್ ಅನ್ನು ಅದೇ ನಿಲ್ದಾಣದಲ್ಲಿ ಕೆಲ ಹೊತ್ತು ನಿಲ್ಲಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕ ಹೊಸ ರೋಡ್ ಬಸ್ ನಿಲ್ದಾಣದಲ್ಲಿ ಬಸ್ನಿಂದ ಇಳಿದು, ಬ್ಯಾಗ್ನಲ್ಲಿದ್ದ ಸ್ಕ್ರೂಡ್ರೈವರ್ ತೆಗೆದು, ಚಾಲಕ ಮತ್ತು ನಿರ್ವಾಹಕನಿಗೆ ತೋರಿಸಿ, ಚುಚ್ಚಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಗುರುವಾರ ಸಂಜೆ 4:15ರ ಸುಮಾರಿಗೆ ಬಿಎಂಟಿಸಿ ವೋಲ್ವೋ ಬಸ್ ಅತ್ತಿಬೆಲೆಯಿಂದ ಮೆಜಸ್ಟಿಕ್ಗೆ ಹೋಗುತ್ತಿತ್ತು. ಇದೇ ಬಸ್ ನಲ್ಲಿ ಈ ಘಟನೆ ಜರುಗಿದೆ ಎನ್ನಲಾಗಿದೆ.
ಇನ್ನೂ ಮೊನ್ನೆ ತಾನೇ ಬೆಂಗಳೂರು ಮಹಾನಗರ ಸಾರಿಗೆ ಬಸ್ ನಿರ್ವಾಹಕನಿಗೆ ಚಾಕು ಇರಿದ ಪ್ರಕರಣ ನಡೆದಿತ್ತು. ಇದೀಗ ಮತ್ತೆ ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಹಲ್ಲೆ ಮತ್ತು ಬೆದರಿಕೆ ಘಟನೆ ನಡೆದಿದೆ.
ನಿಮ್ಮ ಪ್ರತಿಕ್ರಿಯೆ ಏನು?






