Colonel Sofiya Qureshi: ಆಪರೇಷನ್ ಸಿಂಧೂರ ಬಗ್ಗೆ ಜಗತ್ತಿಗೆ ಬಿಚ್ಚಿಟ್ಟ ಖುರೇಷಿ ನಮ್ಮ ಬೆಳಗಾವಿ ಸೊಸೆ..!

ಜಸ್ಟ್ 23 ನಿಮಿಷದಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಏಕಕಾಲಕ್ಕೆ ಧ್ವಂಸ ಮಾಡಿರುವ ಆಪರೇಷನ್ ಸಿಂಧೂರ ಭಾರತೀಯರ ಮೈ ಜುಮ್ಮೆನ್ನುವಂತೆ ಮಾಡಿದೆ. ಕೇವಲ 23 ನಿಮಿಷಗಳಲ್ಲೇ ಪಾಕಿಸ್ತಾನದ ರಕ್ತಪಿಪಾಸುಗಳ ‘ಉಗ್ರ’ ನೆಲೆ ನಾಮಾವಶೇಷವಾಗಿವೆ. ಪಾಕಿಸ್ತಾನದ 9 ನೆಲೆಗಳನ್ನ ಟಾರ್ಗೆಟ್ ಮಾಡಿ 90ಕ್ಕೂ ಹೆಚ್ಚು ಉಗ್ರರನ್ನ ಭಾರತೀಯ ಸೇನೆ ಉಡಾಯಿಸಿದೆ. ಆಪರೇಷನ್ ಸಿಂಧೂರ ಹೆಸರಿನಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿರುವ ಭಾರತೀಯ ಸೇನೆಗೆ ಇಡೀ ದೇಶದಾದ್ಯಂತ ಅಭಿನಂದಿಸಲಾಗುತ್ತಿದೆ.
ಅದಲ್ಲದೆ ಇದೇ ಮೊದಲ ಬಾರಿಗೆ ಇಬ್ಬರು ಮಹಿಳಾ ಸೇನಾಧಿಕಾರಿಗಳ ನೇತೃತ್ವದಲ್ಲಿ ಭಾರತೀಯ ಸೇನೆ ಸುದ್ದಿಗೋಷ್ಠಿ ನಡೆಸಿದೆ. ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಹಾಗೂ ಕರ್ನಲ್ ಸೋಫಿಯಾ ಖುರೇಷಿ ಸುದ್ದಿಗೋಷ್ಠಿಯ ನೇತೃತ್ವ ವಹಿಸಿದ್ದರು. ಜೊತೆಗೆ ವಿದೇಶಾಂಗ ವ್ಯವಹಾರಗಳ ಕಾರ್ಯದರ್ಶಿ ವಿಕ್ರಂ ಮೆಸ್ತ್ರಿ ಕೂಡ ಭಾಗಿಯಾಗಿದ್ದರು. ಸುದ್ದಿಗೋಷ್ಠಿಯಲ್ಲಿ ಆಪರೇಷನ್ ಸಿಂಧೂರನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಒಟ್ಟು 9 ಸ್ಥಳಗಳ ಮೇಲೆ ದಾಳಿ ನಡೆದಿರುವ ಬಗ್ಗೆ ಮಹಿಳಾ ಸೇನಾಧಿಕಾರಿಗಳು ಮಾಹಿತಿ ನೀಡಿದರು.
ಮತ್ತೊಂದು ಹೆಮ್ಮೆಯ ವಿಚಾರ ಏನೆಂದರೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಗ್ಗೆ ಎಳೆ ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದು ಬೇರೆ ಯಾರು ಅಲ್ಲ, ಅವರೇ ಬೆಳಗಾವಿಯ ಸೊಸೆ. ಹೌದು ಜಮ್ಮು ಕಾಶ್ಮೀರದ ಪೆಹಲ್ಗಾಮ್ ನಲ್ಲಿ ಭಾರತೀಯರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ನಡೆದ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಬಗ್ಗೆ ಜಗತ್ತಿಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಕರ್ನಲ್ ಸೋಫಿಯಾ ಖುರೇಷಿ ಅವರು ಬೆಳಗಾವಿ ಜಿಲ್ಲೆಯ ಸೊಸೆ ಎನ್ನುವುದು ಬೆಳಗಾವಿಗರಿಗೆ ಹಮ್ಮೆ ಮೂಡಿಸಿದೆ. ಬಹುರಾಷ್ಟ್ರೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಭಾರತೀಯ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರ್ನಲ್ ಸೋಫಿಯಾ ಖುರೇಷಿ ಅವರು,
ಗೋಕಾಕ ತಾಲೂಕಿನ ಕೊಣ್ಣೂರು ಗ್ರಾಮದವರಾದ, ಕರ್ನಲ್ ತಾಜುದ್ದೀನ್ ಬಾಗೇವಾಡಿ ಅವರ ಪತ್ನಿ. ಕರ್ನಲ್ ಸೋಫೀಯಾ ಅವರು ಮೂಲತಃ ಗುಜರಾತ್ ರಾಜ್ಯದ ಬರೋಡಾದವರಾಗಿದ್ದು, ಇಬ್ಬರೂ ಪರಸ್ಪರ ಪ್ರೀತಿಸಿ 2015 ರಲ್ಲಿ ವಿವಾಹವಾಗಿದ್ದಾರೆ. ಸದ್ಯ ಸೋಫೀಯಾ ಅವರು ಜಮ್ಮುವಿನಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದು, ಪತಿ ತಾಜುದ್ದೀನ್ ಬಾಗೇವಾಡಿ ಅವರು ಝಾನ್ಸಿಯಲ್ಲಿ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






