Happy Ugadi: ಇಂದು ಎಲ್ಲೆಡೆ “ಯುಗಾದಿ” ಸಂಭ್ರಮ: ಈ ಹಬ್ಬದ ವಿಶೇಷತೆ ತಿಳಿದುಕೊಳ್ಳಿ..!

ಮತ್ತೆ ಬಂದಿದೆ ಯುಗಾದಿ! ಈ ಹಬ್ಬದಿಂದಲೇ ಹಿಂದೂಗಳಿಗೆ ಹೊಸ ವರ್ಷಾರಂಭ. ಹಿಂದೂ ಚಾಂದ್ರಮಾನ ಕ್ಯಾಲೆಂಡರ್ನ ಚೈತ್ರ ಮಾಸದ ಮೊದಲ ದಿನವನ್ನು ಯುಗಾದಿ ಎನ್ನುವರು. ಈ ವರ್ಷದ ಯುಗಾದಿಯನ್ನು ಇಂದು ಎಲ್ಲೆಡೆ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ಉತ್ತರ ಭಾರತದಲ್ಲಿ ಗುಡಿ ಪಾಡ್ವ ಎಂದು ಆಚರಿಸುತ್ತಾರೆ.
ವೇದಗಳ ಪ್ರಕಾರ ಧರ್ಮಗ್ರಂಥಗಳ ಪ್ರಕಾರ ಯುಗಾದಿ ಹಬ್ಬವು ಹಲವು ಮಹತ್ತರಗಳಿಗೆ ಸಾಕ್ಷಿಯಾಗಿದೆ. ಬ್ರಹ್ಮ ದೇವ ಈ ಜಗತ್ತನ್ನು ಚೈತ್ರ ಶುಕ್ಲ ಪ್ರತಿಪದೆ ಅಂದ್ರೆ ಯಗಾದಿಯಂದು, ಸೂರ್ಯೋದಯ ಕಾಲಕ್ಕೆ ಸೃಷ್ಟಿಸಿದನಂತೆ. ಬ್ರಹ್ಮ ದೇವನು ಅಂದೇ ಗ್ರಹ , ನಕ್ಷತ್ರ, ಮಾಸ, ಋತು, ವರ್ಷಾಧಿಪತಿಯನ್ನ ಸೃಷ್ಟಿಸಿ ಕಾಲಗಣೆನಯನ್ನು ಆರಂಭಿಸಿದ. ನಂತರ ಜೀವರಾಶಿ , ಜಲರಾಶಿ , ಸಸ್ಯರಾಶಿ ಬೆಟ್ಟ ಗುಡ್ಡಗಳನ್ನ ಸೃಷ್ಟಿಸಲು ಆರಂಭಿಸಿದ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ಆಚರಣೆ ಹೇಗೆ?: ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಇನ್ನಿತರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಹಲವೆಡೆ ಉಗಾದಿ ಎಂತಲೂ ಕರೆಯುತ್ತಾರೆ. ವಸಂತ ಕಾಲದ ಆಗಮನವನ್ನು ಸೂಚಿಸುವುದರಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ವಿಜೃಂಭಣೆ ಇರುತ್ತದೆ. ಯುಗ ಮತ್ತು ಆದಿ ಎನ್ನುವ ಎರಡು ಸಂಸ್ಕೃತ ಪದಗಳಿಂದ ರೂಪುಗೊಂಡ ಯುಗಾದಿ ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ.
ಮಹಾವಿಷ್ಣು ಮತ್ಸ್ಯಾವತಾರ ತಾಳಿದ ದಿನವಿದು ಯುಗಗಳಲ್ಲಿ ಮೊದಲ ಯುಗ ಸತ್ಯಯುಗ. ಇಂತಹ ಮೊದಲ ಯುಗದ ಆರಂಭದ ದಿನವೇ ಯುಗಾದಿ. ಮಹಾ ವಿಷ್ಣುವಿನ ದಶಾವತಾರಗಳಲ್ಲಿ ಮೊದಲನೇ ಅವತಾರ ಮತ್ಸ್ಯಾವತಾರ. ಆ ಆವತಾರವನ್ನು ತಾಳಿದ್ದು ಇದೇ ದಿನವೆಂದು ವೇದಗಳಲ್ಲಿ ಉಲ್ಲೇಖವಾಗಿದೆ. ಬ್ರಹ್ಮನಿಂದ ನಾಲ್ಕು ವೇದಗಳನ್ನು ಕದ್ದಂತಹ ರಕ್ಕಸ ಸೋಮಕಾಸುರ ಸಮುದ್ರದೊಳಗೆ ಅವಿತಿರುತ್ತಾನೆ. ಆಗ ವಿಷ್ಣು ಮತ್ಸ್ಯಾವತಾರವನ್ನ ತಾಳಿ ನೀರಿನಲ್ಲಿ ಅವಿತಿದ್ದ ಸೋಮಕಾಸುರನನ್ನ ಸಂಹರಿಸಿ ನಾಲ್ಕು ವೇದಗಳನ್ನ ಬ್ರಹ್ಮ ದೇವರಿಗೆ ಹಿಂತಿರುಗಿಸುತ್ತಾರೆ. ಹಾಗೆ ಬ್ರಹ್ಮ ದೇವರು ವೇದಗಳನ್ನು ಹಿಂಪಡೆದ ದಿನವೇ ಯುಗಾದಿ.
ಶ್ರೀರಾಮಚಂದ್ರ ಅಯೋಧ್ಯೆಯಲ್ಲಿ ರಾಮ ರಾಜ್ಯ ಸ್ಥಾಪಿಸಿದ ದಿನ ಲಂಕೆಗೆ ಹೋಗಿ ರಾವಣನನ್ನು ಸಂಹರಿಸಿ ಸೀತಾ ಸಮೇತ ಶ್ರೀರಾಮಚಂದ್ರರು ಅಯೋಧ್ಯೆಗೆ ಮರಳುತ್ತಾರೆ. ಅಯೋಧ್ಯೆಯಲ್ಲಿ ರಾಜ್ಯಭಾರ ಆರಂಭಿಸುತ್ತಾರೆ. ರಾಮರಾಜ್ಯ ಆರಂಭವಾದ ದಿನವೇ ಯುಗಾದಿಯ ದಿನವೆಂದು ಪುರಾಣಗಳಲ್ಲಿ ಹೇಳಲಾಗಿದೆ. ದ್ವಾಪರ ಯುಗವು ಕೊನೆಯಾಗಿ ಯುಗಾದಿಯ ದಿನ ಕಲಿಯುಗವು ಆರಂಭವಾಯಿತೆಂದು ವೇದವ್ಯಾಸರು ತಮ್ಮ ಗ್ರಂಥದಲ್ಲಿ ವಿವರಿಸಿದ್ದಾರೆ. ಶಾಸ್ತ್ರಗಳ ಪ್ರಕಾರ, ವೇದಗಳ ಪ್ರಕಾರ ಯುಗಾದಿಯು ಹೊಸ ವರ್ಷದ ಮೊದಲ ದಿನವಾಗಿದೆ. ಬಹಳಷ್ಟು ಶ್ರೇಷ್ಠತೆಯಿಂದ ಕೂಡಿದೆ. ನಾನಾ ಪ್ರಥಮಗಳಿಗೆ ಸಾಕ್ಷಿಯಾಗಿದೆ.
ಬೇವು ಬೆಲ್ಲ ಸೇವಿಸಬೇಕು ಯುಗಾದಿ ಹಬ್ಬದ ದಿನ ಬೇವು ಬೆಲ್ಲ ಸೇವಿಸಿ ಇತರರಿಗೆ ಹಂಚುವ ವಿಶೇಷ ಸಂಪ್ರದಾಯವಿದೆ. ಬೇವು ಬೆಲ್ಲ ಸೇವಿಸುವ ಆಚರಣೆಯು ಇಡೀ ಮನುಕುಲಕ್ಕೆ ಒಂದು ಪಾಠವನ್ನ ಹೇಳುತ್ತದೆ. ಜೀವನದಲ್ಲಿ ಎದುರಾಗುವ ಸುಖ ದುಃಖವನ್ನು , ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕು. ಇದರ ಜೊತೆಗೆ ಬೇವು ಬೆಲ್ಲಕ್ಕೆ ವಿಶೇಷವಾದ ಔಷಧಿ ಗುಣಗಳು ಇರುವುದನ್ನು ಆಯುರ್ವೇದದಲ್ಲಿ ಉಲ್ಲೇಖಿಸಲಾಗಿದೆ. ಬೇವು ಬೆಲ್ಲ ಸ್ವೀಕರಿಸಿದರೆ ಶರೀರ ವಜ್ರಕಾಯವಾಗುತ್ತೆಂಬ ಮಾತನ್ನು ವೇದಗಳಲ್ಲಿ ಉಲ್ಲೇಖಿಸಲಾಗಿದೆ. ಆ ಕುರಿತಾದ ಒಂದು ಶ್ಲೋಕವು ಹೀಗಿದೆ . ಈ ಶ್ಲೋಕವನ್ನ ಬೆವು ಬೆಲ್ಲ ಸೇವಿಸುವಾಗ ಹೇಳಿಕೊಳ್ಳಬೇಕೆಂಬ ಮಾತನ್ನು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.
ಬೇವು ಬೆಲ್ಲ ಸೇವಿಸುವ ಸಮಯದಲ್ಲಿ ಹೇಳಬೇಕಾದ ಈ ಮಂತ್ರ ಅತ್ಯಂತ ಅರ್ಥಪೂರ್ಣವಾಗಿದೆ. ನೂರು ವರ್ಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತಿನ ಪ್ರಾಪ್ತಿಗಾಗಿಯೂ, ಸಕಲಾರಿಷ್ಟ ನಿವಾಣೆಗಾಗಿಯೂ ಬೇವೂ ಬೆಲ್ಲ ಸೇವನೆ ಮಾಡುತ್ತೇನೆಂದು ಹೇಳಿ ಬೇವು ಬೆಲ್ಲ ಸೇವಿಸಬೇಕೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ. ಬಹಳಷ್ಟು ಮಹತ್ತರಗಳಿಗೆ ಸಾಕ್ಷಿಯಾಗಿರುವ, ಯುಗ ಯುಗಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ಯುಗಾದಿ ಹಬ್ಬವನ್ನ ನೆಮ್ಮದಿಯಿಂದ ಆಚರಿಸಿ, ಸಂತಸದಿಂದ ಆಚರಿಸಿ.
ನಿಮ್ಮ ಪ್ರತಿಕ್ರಿಯೆ ಏನು?






