Naxalites Surrender: ನಕ್ಸಲ್ ಯುಗಾಂತ್ಯಕ್ಕೆ ಕ್ಷಣಗಣನೆ: 6 ಮಂದಿ ನಕ್ಸಲರ ಪ್ರಮುಖ ಬೇಡಿಕೆಗಳೇನು..?

ಬೆಂಗಳೂರು: ಶಸ್ತ್ರಾಸ್ತ್ರವನ್ನು ತೊರೆದು ಮುಖ್ಯವಾಹಿನಿಗೆ 6 ಮಂದಿ ನಕ್ಸಲರು ಬರುತ್ತಿದ್ದಾರೆ. ಈ ನಿಟ್ಟಿನಲ್ಲಿ ನಕ್ಸಲರ ಶರಣಾಗತಿ ಸಮಿತಿ ನಡೆಸಿದ ಮಾತುಕತೆಯೂ ಯಶಸ್ವಿಯಾಗಿದೆ. ಮಂಡಗಾರು ಲತಾ ನೇತೃತ್ವದಲ್ಲಿ ಮಾವೋವಾದಿಗಳು ಶರಣಾಗುತ್ತಿದ್ದಾರೆ. ಸದ್ಯ ರಾಜ್ಯದಲ್ಲಿ ಆ್ಯಕ್ಟೀವ್ ಆಗಿರುವ 6 ಮಂದಿ ನಕ್ಸಲರು ಶರಣಾಗತಿಗೆ ಮುಂದಾಗಿದ್ದಾರೆ.
ಇಂದೇ 6 ಮಂದಿ ನಕ್ಸಲರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬರಲಿದ್ದಾರೆ. ಮಾಜಿ ನಕ್ಸಲರಾದ ನೂರ್ ಜುಲ್ಫಿಕರ್ ಶ್ರೀಧರ್ ನೇತೃತ್ವದಲ್ಲಿ ನಕ್ಸಲರ ಶರಣಾಗತಿ ಪ್ರಕ್ರಿಯೆ ನಡೆಯಲಿದ್ದು, ಈಗಾಘಲೇ ಚಿಕ್ಕಮಗಳೂರಲ್ಲಿ ಸಕಲ ಸಿದ್ದತೆಗಳು ನಡೆದಿದೆ. ಶರಣಾಗತಿಗೂ ಮುನ್ನ ನಕ್ಸಲರು ಕಾಡಿನಲ್ಲಿ ನಿನ್ನೆ ತಮ್ಮ ಕಟ್ಟಕಡೆಯ ಮೀಟಿಂಗ್ ನಡೆಸಿದ್ದಾರೆ.
ವಿಕ್ರಮ್ ಗೌಡ ಹತ್ಯೆಯ ಬಳಿಕ ಉಳಿದ ನಕ್ಸಲರನ್ನು ಶರಣಾಗರನ್ನಾಗಿ ಮಾಡಬೇಕು ಎಂಬ ಪ್ರಯತ್ನಗಳು ನಡೆಸಲಾಗಿತ್ತು. ಸ್ವತಃ ಸಿಎಂ ಸಿದ್ದರಾಮಯ್ಯ ಅವರು ಮಾವೋವಾದಿಗಳು ಶಸ್ತ್ರಾಸ್ತ್ರವನ್ನು ತೊರೆದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಕರೆ ಕೊಟ್ಟಿದ್ದರು. ಅದರಂತೆ 6 ಮಂದಿ ನಕ್ಸಲರು ಶರಣಾಗತರಾಗಲಿದ್ದಾರೆ.
ಎಲ್ಲಿ ಶರಣಾಗುತ್ತಿದ್ದಾರೆ?
ಬುಧವಾರ ಬೆಳಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಲಿರುವ ಮಾವೋವಾದಿಗಳು ರಾಜ್ಯ ಮಟ್ಟದ ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿಯ ಸಮ್ಮುಖದಲ್ಲಿ ಶರಣಾಗಲಿದ್ದಾರೆ. ಶರಣಾಗತರಾಗುತ್ತಿರುವ ಮಾವೋವಾದಿಗಳು ಕೆಲವೊಂದು ಬೇಡಿಕೆಗಳನ್ನು ಇಟ್ಟಿದ್ದು ಸಮಿತಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಅದಕ್ಕೆ ಒಪ್ಪಿಗೆ ನೀಡಲಾಗಿದೆ.
- ಶರಣಾಗತಿ ಪ್ರಕ್ರಿಯೆ ಘನತೆಯಿಂದ ನಡೆಯಬೇಕು. ಆತ್ಮಗೌರವಕ್ಕೆ ಯಾವುದೇ ಧಕ್ಕೆ ಆಗಬಾರದು.
- ಮುಂದಿನ ದಿನಗಳಲ್ಲಿ ಪ್ರಜಾತಾಂತ್ರಿಕ ಮಾದರಿಯಲ್ಲಿ ಹೋರಾಟ ನಡೆಸಲು ತಡೆಯಾಗಬಾರದು.
- ಶರಣಾಗತರಾದ ಬಳಿಕ ಜೈಲಿನಲ್ಲಿ ಕೊಳೆಯುವ ಪರಿಸ್ಥಿತಿ ಎದುರಾಗಬಾರದು. ಸಂಬಂಧವಿಲ್ಲದ ಪ್ರಕರಣದ ಜಾಲದಿಂದ ಮುಕ್ತಿ ಕೊಡಬೇಕು.
- ಎಲ್ಲಾ ಮೊಕದ್ದಮೆಗಳನ್ನು ತ್ವರಿತ ನ್ಯಾಯಾಲಯದಲ್ಲಿ ತಂದು ತ್ವರಿತ ವಿಚಾರಣೆ ಮಾಡಬೇಕು.
- ಶರಣಾಗತರಾದ ನಕ್ಸಲರಿಗೆ ಆರ್ಥಿಕ ನೆರವನ್ನು ಒದಗಿಸುವ ಜವಾಬ್ದಾರಿಯನ್ನು ಸರ್ಕಾರವೇ ಹೊತ್ತುಕೊಳ್ಳಬೇಕು.
ನಿಮ್ಮ ಪ್ರತಿಕ್ರಿಯೆ ಏನು?






