RG Kar Doctor Case: ಕೊಲ್ಕತ್ತಾ ವೈದ್ಯೆ ಕೊಲೆ ಪ್ರಕರಣ: ಕಾಮುಕ ಸಂಜಯ್ ರಾಯ್ಗೆ ಜೀವಾವಧಿ ಶಿಕ್ಷೆ

ಕೋಲ್ಕತ್ತಾದ ಡಾ. ರಾಧಾ ಗೋಬಿಂದ ಕರ್ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದಿದ್ದು ಅಕ್ಷರಶಃ ಬರ್ಬರ ಅತ್ಯಾಚಾರ ಹಾಗೂ ಭೀಕರ ಕೊಲೆ. ಈ ಘೋರ ಕೃತ್ಯವನ್ನು ಖಂಡಿಸಿ ದೇಶಾದ್ಯಂತ ವೈದ್ಯರು ಬೀದಿಗಿಳಿದು ನ್ಯಾಯಕ್ಕಾಗಿ ಹೋರಾಡಿದ್ದರು. ನಾರಾಯಣ ಹರಿಃ ಅನ್ನೋ ಮಾತು ಬರೀ ಮಾತಲ್ಲ. ಜೀವ ಉಳಿಸೋ ವೈದ್ಯ ವೃತ್ತಿ ಮಾಡೋರನ್ನ ದೇವರಂತೆಯೇ ಕಾಣಬೇಕು. ಆದರೆ, ಇದೇ ಡಾ. ರಾಧಾ ಗೋಬಿಂದ ಕರ್ ಮೆಡಿಕಲ್ ಕಾಲೇಜಿನಲ್ಲಿ ಟ್ರೈನಿ ವೈದ್ಯೆ ಮೇಲೆ ನಡೆದಿದ್ದು ಅಮಾನುಷ ಎಂದು ಇಡೀ ದೇಶವೇ ಬೆಚ್ಚಿಬಿದ್ದಿತ್ತು.
ಇದೀಗ ಆರ್ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಅಪರಾಧಿ ಸಂಜಯ್ ರಾಯ್ಗೆ ಪಶ್ಚಿಮ ಬಂಗಾಳದ ಸೀಲ್ದಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಇದರೊಂದಿಗೆ ನ್ಯಾಯಾಲಯ 50 ಸಾವಿರ ದಂಡವನ್ನೂ ವಿಧಿಸಿದೆ. ಅಲ್ಲದೇ ಸಂತ್ರಸ್ತೆಯ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕೆಂದು ನ್ಯಾಯಾಲಯ ಆದೇಶಿಸಿದೆ. ತನ್ನ ಮಗಳನ್ನು ಕೊಂದ ರಾಕ್ಷಸನಿಗೆ ಗರಿಷ್ಠ ಶಿಕ್ಷೆಯಾಗಬೇಕು ಎಂದು ಸಂತ್ರಸ್ತೆಯ ತಂದೆ ಈ ಹಿಂದೆ ಆಗ್ರಹಿಸಿದ್ದರು.
ನ್ಯಾಯಾಧೀಶರು ತಮ್ಮ ತೀರ್ಪನ್ನು ಓದುವಾಗ, ಈ ಪ್ರಕರಣವು ಅಪರೂಪದಲ್ಲಿ ಅಪರೂಪದ ಪ್ರಕರಣ ಎಂದು ಹೇಳಿದರು. ಹಾಗಾಗಿ ತಪ್ಪಿತಸ್ಥ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 14 ವರ್ಷಗಳಲ್ಲಿ ಸಂಜಯ್ನ ಜೀವಾವಧಿ ಶಿಕ್ಷೆ ಮುಗಿಯುವುದಿಲ್ಲ, ಅವನು ತನ್ನ ಉಳಿದ ಜೀವನವನ್ನು ಕಂಬಿಗಳ ಹಿಂದೆ ಕಳೆಯಬೇಕಾಗುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ವೇಳೆ ನ್ಯಾಯಾಲಯದ ತೀರ್ಪಿಗೆ ಸಂತ್ರಸ್ತ ಕುಟುಂಬದವರು ಅಸಮಾಧಾನ ವ್ಯಕ್ತಪಡಿಸಿ 10 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಅಲ್ಲದೇ, ಕೊಲೆಗಾರನನ್ನು ಗಲ್ಲಿಗೇರಿಸಬೇಕಿತ್ತು, ನಮಗೆ ಹಣ ಬೇಡ, ನ್ಯಾಯ ಮಾತ್ರ ಬೇಕು ಎಂದು ಹೇಳಿದರು. ಇದಾದ ಬಳಿಕ ನ್ಯಾಯಾಧೀಶರು ನನ್ನ ಕೆಲಸ ನಾನು ಮಾಡಿದ್ದೇನೆ, ನೀವು ಉನ್ನತ ನ್ಯಾಯಾಲಯಕ್ಕೆ ಹೋಗುವ ಆಯ್ಕೆಯನ್ನು ಹೊಂದಿದ್ದೀರಿ ಎಂದರು.
ನಿಮ್ಮ ಪ್ರತಿಕ್ರಿಯೆ ಏನು?






