SM Krishna: ಬೆಂಗಳೂರು ಐಟಿ ಸಿಟಿಯಾಗಿ ಪರಿವರ್ತಿಸುವಲ್ಲಿ ಎಸ್ಎಂ ಕೃಷ್ಣ ಪಾತ್ರ ಅಪಾರ!

ಕೇಂದ್ರದ ಮಾಜಿ ವಿದೇಶಾಂಗ ಸಚಿವ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಿಧನರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಿಸದೇ ತಡರಾತ್ರಿ ನಿಧನರಾಗಿದ್ದಾರೆ. ಅವರ ಅಗಲಿಕೆ ಕರ್ನಾಟಕ್ಕೆ, ರಾಜಕೀಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ.
ಮದ್ದೂರಿನಲ್ಲಿ ಹುಟ್ಟಿದ ಎಸ್.ಎಂ. ಕೃಷ್ಣ ಅವರು ಅಮೆರಿಕದ ಡಲ್ಲಾಸ್ ಮತ್ತು ವಾಷಿಂಗ್ಟನ್ನಲ್ಲಿ ಉನ್ನತ ವ್ಯಾಸಂಗ ಮಾಡಿದವರಾಗಿದ್ದರು. ಹೀಗಾಗಿ, ಅವರ ಆಡಳಿತದ ಬಗ್ಗೆ ಜನರಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ಈ ನಿರೀಕ್ಷೆ ಉಳಿಸಿಕೊಳ್ಳಲು ಅವರು ತಮ್ಮ ಕೈಲಾದ ಕಾರ್ಯಗಳನ್ನು ಮಾಡಿದ್ದರು. ಅವರ ಕಾರ್ಯಗಳಲ್ಲಿ ಹೆಚ್ಚಾಗಿ ನೆನಪುಳಿಯುವುದು ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯ ಹೆಚ್ಚಿಸುವ ಕೆಲಸ.
ಉದ್ಯಮಗಳಿಗೆ ಇದ್ದ ನಿಯಮಗಳನ್ನು ಸಡಿಲಿಸಿದರು. ಟ್ಯಾಕ್ಸ್ ಇನ್ಸೆಂಟಿವ್ಗಳನ್ನು ನೀಡಿದರು. ಈ ನೀತಿಗಳಿಗೆ ಉದ್ಯಮ ವಲಯದಲ್ಲಿ ಮನ್ನಣೆ ಸಿಕ್ಕಿತು. ಹಲವು ಐಟಿ ಬಿಟಿ ಸಂಸ್ಥೆಗಳು ಬೆಂಗಳೂರಿನಲ್ಲಿ ನೆಲೆ ಕಾಣಲು ಈ ನೀತಿಗಳೇ ಕಾರಣವಾದವು. ಈ ಮೂಲಕ ಬೆಂಗಳೂರು ಸಿಲಿಕಾನ್ ಸಿಟಿ ಎನಿಸಿದೆ.
ಎಸ್.ಎಂ. ಕೃಷ್ಣ ಅವರಿಂದ ಮಾಡಲಾದ ಸಾಧನೆಗಳಿವು…
- ಬೆಂಗಳೂರಿನಲ್ಲಿ ಐಟಿ, ಬಿಟಿ ಸೆಕ್ಟರ್ ಬೆಳವಣಿಗೆ ಚುರುಕುಗೊಳಿಸಿದರು.
- ಬೆಂಗಳೂರಿಗೆ ಮೆಟ್ರೋ ರೈಲು ತರಲು ಅವರ ಪಾತ್ರ ಇತ್ತು
- ಬೆಂಗಳೂರಿಗೆ ಏರ್ಪೋರ್ಟ್ ಬರಲು ಅವರ ಪಾತ್ರ ಇತ್ತು
- ಅವರು ಸಿಎಂ ಆಗಿದ್ದ ಅವಧಿಯಲ್ಲಿ ವಿಕಾಸಸೌಧ ನಿರ್ಮಾಣ ಆಗಿತ್ತು
- ಎಸ್.ಎಂ. ಕೃಷ್ಣ ಸಿಎಂ ಆಗಿದ್ದಾಗ ಸರ್ಕಾರದ ಆದಾಯ ಹೆಚ್ಚಿಸಿದರು. ಮೊದಲ ವರ್ಷ (1999) ಸರ್ಕಾರದ ಬಜೆಟ್ 13,000 ಕೋಟಿ ರೂ ಇತ್ತು. ಕೊನೆಯ ವರ್ಷ (2004) ಬಜೆಟ್ ಗಾತ್ರ 34,000 ಕೋಟಿ ರೂಗೆ ಏರಿತ್ತು.
- ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿ
- ರೈತರಿಗೆ ಯಶಸ್ವಿನಿ ಯೋಜನೆ ಜಾರಿ
- ಇವರ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿದ ವಿದ್ಯುತ್ ಉತ್ಪಾದನೆ
- ಗ್ರಾಮೀಣ ಭಾಗದಲ್ಲಿ ಆಸ್ಪತ್ರೆ, ಆರೋಗ್ಯ ಕೇಂದ್ರಗಳ ವ್ಯವಸ್ಥೆಯನ್ನು ಗಟ್ಟಿಗೊಳಿಸಿದರು.
- ನೀರಾವರಿ ಆಧುನೀಕರಣ
- ರಾಜ್ಯ ರಸ್ತೆ ಮೂಲಸೌಕರ್ಯಗಳ ಅಭಿವೃದ್ಧಿ
- ಬಿಎಂಟಿಸಿ, ಕೆಎಸ್ಸಾರ್ಟಿಸಿಗಳಿಗೆ ವೋಲ್ವೋದಂಥ ಲಕ್ಸುರಿ ಬಸ್ಸುಗಳನ್ನು ತರುವ ಪ್ರಯೋಗ ಇವರ ಕಾಲದಲ್ಲಾಯಿತು.
ನಾಳೆ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ನಡೆಯಲಿದೆ. ಹುಟ್ಟೂರಾದ ಸೋಮನಹಳ್ಳಿ ಅಥವಾ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಈ ಬಗ್ಗೆ ಕುಟುಂಬಸ್ಥರೆಲ್ಲ ಸೇರಿ ಸರ್ಕಾರದ ಜೊತೆ ಮಾತನಾಡಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಇನ್ನು ಎಸ್ಎಂಕೆ ಅವರ ತಂದೆ-ತಾಯಿ ಸಮಾಧಿ ಸೋಮನಹಳ್ಳಿಯಲ್ಲಿದೆ. ಅಲ್ಲಿಯೇ ಕೃಷ್ಣರ ಪಾರ್ಥಿವ ಶರೀರವನ್ನು ಮಣ್ಣು ಮಾಡುವ ಸಾಧ್ಯತೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?






