ರಾಘವೇಂದ್ರ ಸ್ವಾಮಿಗಳ ಮಹಾಮಹಿಮೆ ಬಗ್ಗೆ ನಿಮಗೆಷ್ಟು ಗೊತ್ತು!? ರಾಯರು ಜೀವಂತವಾಗಿದ್ದಾರಾ? ಸತ್ಯ ಸಂಗತಿ ಇಲ್ಲಿದೆ!

ಡಿಸೆಂಬರ್ 12, 2024 - 07:08
 0  23
ರಾಘವೇಂದ್ರ ಸ್ವಾಮಿಗಳ ಮಹಾಮಹಿಮೆ ಬಗ್ಗೆ ನಿಮಗೆಷ್ಟು ಗೊತ್ತು!? ರಾಯರು ಜೀವಂತವಾಗಿದ್ದಾರಾ? ಸತ್ಯ ಸಂಗತಿ ಇಲ್ಲಿದೆ!

ಹಿಂದೂ ಧರ್ಮದ ಬ್ರಾಹ್ಮಣ ಮಾಧ್ವ ಸನ್ಯಾಸಿಗಳಲ್ಲಿ ರಾಯರು ಪ್ರಮುಖರು. ಆಗಿನ ಕುಂಭಕೋಣ ಸಂಸ್ಥಾನವಾದ ತಮಿಳುನಾಡಿನ ಭುವನಗಿರಿಯಲ್ಲಿ ರಾಘವೇಂದ್ರ ಸ್ವಾಮಿಗಳು ಜನಿಸಿದರು. 

ಶ್ರೀಗುರು ರಾಘವೇಂದ್ರ ಸ್ವಾಮಿಗಳು ದ್ವೈತ ತತ್ವದ ಮುಖ್ಯ ಪ್ರತಿಪಾದಕರಾದ ಶ್ರೀಮಧ್ವಾಚಾರ್ಯರ ಪರಂಪರೆಯೊಂದಿಗೆ ಸಂಬಂಧವನ್ನು ಹೊಂದಿದವರು. ರಾಘವೇಂದ್ರ ಸ್ವಾಮಿಗಳು ಭಕ್ತರಲ್ಲಿ ರಾಯರೆಂದೇ ಪ್ರಸಿದ್ಧರು.  ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ವಿಷ್ಣು ದೇವನನ್ನು ಸರ್ವೋಚ್ಛ ದೇವನಾಗಿ ಪೂಜಿಸುವ ವೈಷ್ಣವ ಧರ್ಮವನ್ನು ಅನುಸರಿಸಿದವರು ಮತ್ತು ಶ್ರೀ ಮಧ್ವಾಚಾರ್ಯರ ದ್ವೈತ ತತ್ತ್ವಶಾಸ್ತ್ರವನ್ನು ಪ್ರತಿಪಾದಿಸಿದ 16 ನೇ ಶತಮಾನದ ಪ್ರಭಾವಿ ಹಿಂದೂ ಸಂತರೆನಿಸಿಕೊಂಡವರು. 

ಭಾರತದಲ್ಲಿರು ಅತ್ಯಂತ ಜನಪ್ರಿಯ ಧಾರ್ಮಿಕ ತಾಣಗಳಲ್ಲಿ ಒಂದಾದ ರಾಘವೇಂದ್ರ ಸ್ವಾಮಿಗಳ ಬೃಂದಾವನದಲ್ಲಿ ಅವರ ಭಕ್ತರು ಭೌತಿಕ ಅಥವಾ ಆಧ್ಯಾತ್ಮಿಕ ರೂಪದಲ್ಲಿ ರಾಯರನ್ನು ನೋಡುತ್ತಾರೆ. ಲಕ್ಷಾಂತರ ಭಕ್ತರು ನಂಬುವ ರಾಘವೇಂದ್ರ ಸ್ವಾಮಿಗಳ ಕುರಿತು ಒಂದಿಷ್ಟು ವಿಚಾರಗಳನ್ನು ನಾವಿಲ್ಲಿ ತಿಳಿದುಕೊಳ್ಳೋಣ.

ವೆಂಕಟನಾಥರು ಶ್ರೀ ರಾಘವೇಂದ್ರ ತೀರ್ಥರಾದರು. ತಲೆಯ ಮೇಲೆ ಶಾಲಿಗ್ರಾಮವನ್ನಿಟ್ಟ ಗುರು ಸುಧೀಂದ್ರ ತೀರ್ಥರು ಕ್ಷೀರಾಭಿಷೇಕ ಮಾಡಿಸಿ ವೆಂಕಟನಾಥರನ್ನು ಯತಿಗಳನ್ನಾಗಿಸಿದರು. ಆ ಕ್ಷಣ ನೆಲದ ಜೀವಿಗಳ ಭವರೋಗಕ್ಕೆ ದಿವ್ಯೌಷಧವೊಂದು ಸಿದ್ಧವಾಯ್ತು.  ಶ್ರೀಮೂಲ ರಾಮದೇವರು  ಮೊದಲಾದ ಕೆಲವು ಪ್ರತಿಮೆಗಳನ್ನು, ಎರಡು ವ್ಯಾಸಮುಷ್ಟಿಗಳನ್ನು, ಗ್ರಂಥಗಳ ರಾಶಿಯನ್ನು, ಶ್ವೇತ ಛತ್ರ- ಬಂಗಾರದ ಪಲ್ಲಕ್ಕಿಯನ್ನು ಕರುಣಿಸಿ ವಿಜಯೀಭವ ಎಂದರು ಗುರುಗಳು. ಗುರುಗಳಿಂದ ದೀಕ್ಷೆ ಪಡೆದ ಶ್ರೀ ರಾಘವೇಂದ್ರ ತೀರ್ಥರು ಮುಂದೆ ಇಂದಿನ ತಮಿಳುನಾಡು, ಕರ್ನಾಟಕ, ಆಂಧ್ರದ ನೆಲಜಲಗಳನ್ನು ಸ್ಪರ್ಶಿಸುತ್ತಾ ಜನೋದ್ಧಾರಕ ಹೆಜ್ಜೆಗಳನ್ನಿಡುತ್ತಾ ಹೋದರು. 

ಅನೇಕ ತೀರ್ಥಕ್ಷೇತ್ರಗಳ ಭೇಟಿ ವೇಳೆ ನೊಂದು ಬಂದ ಭಕ್ತರ ಕಷ್ಟಗಳನ್ನು ಪರಿಹರಿಸಿದರು. ಅಷ್ಟರಲ್ಲಿ ಗುರುರಾಯರಿಗೆ ತಮ್ಮ ಗುರುಗಳಾದ ಸುಧೀಂದ್ರ ತೀರ್ಥರ ದೇಹಾಲಸ್ಯ ಮನವರಿಕೆಯಾಯ್ತು. ಗುರುಗಳ ಇಚ್ಛೆಯಂತೆ ಆನೆಗುಂದಿ ತುಂಗಭದ್ರಾ ನದಿ ತೀರದಲ್ಲಿ ಶ್ರೀಮಠದ ಪೂರ್ವಿಕ ಗುರುಗಳ ಮೂಲ ಬೃಂದಾವನವಿರುವ ಸ್ಥಳಕ್ಕೆ ಹೊರಟು ಬಂದರು. ಗುರುಗಳು ಯಾವಾಗ ಹರಿಧ್ಯಾನಪರರಾಗಿ ದೇಹ ತ್ಯಾಗ ಮಾಡಿದರೋ, ಆಗ ಅವರ ಬೃಂದಾವನವನ್ನು ಪ್ರತಿಷ್ಠೆ ಮಾಡಿ, ಮಹಾ ಸಮಾರಾಧನೆಯನ್ನು ನಿರ್ವಹಿಸಿದರು. ಗುರುಗಳ ನಿರ್ಯಾಣದ ನಂತರ, ಈ ಮೂಲ ಮಹಾಸಂಸ್ಥಾನದ ಜವಾಬ್ದಾರಿ ಹೊತ್ತ ಶ್ರೀ ರಾಘವೇಂದ್ರ ಗುರುಗಳು ದೇಶದೆಲ್ಲೆಡೆ ಸಂಚರಿಸಿ, ಜಾತಿ, ಮತ, ಪಂಥದ ಭೇದವಿಲ್ಲದೆ ಸಜ್ಜನರನ್ನು ಉದ್ಧರಿಸುತ್ತ ಸಾಗಿದರು.

ಇತ್ತ ರಾಯರ ಪೂರ್ವಾಶ್ರಮದ ಪತ್ನಿ ಸರಸ್ವತಿಯವರು ಅಷ್ಟೊತ್ತಿಗಾಗಲೇ ವಿಪರೀತ ಖಿನ್ನತೆಗೊಳಗಾಗಿದ್ದರು. ದೀಕ್ಷೆ ಪಡೆದು ಗುರುಗಳಾಗಿದ್ದಾರೆ ಅನ್ನೋದನ್ನೂ ಮರೆತು ಪದೇ ಪದೇ ಪತಿಯೆಂಬ ಮನಸ್ಥಿತಿಯೊಂದಿಗೇ ರಾಯರನ್ನು ಭೇಟಿ ಮಾಡೋ ಪ್ರಯತ್ನ ಮಾಡಿದರು. ಆದರೆ ರಾಯರು ಮಾತ್ರ ಮಠಕ್ಕೆ ಬರೋ ಇತರ ಸಾಮಾನ್ಯ ಭಕ್ತರಂತೆ ಆಶೀರ್ವದಿಸಿ ಕಳುಹಿಸುತ್ತಿದ್ದರೇ ಹೊರತು ಕಣ್ಣೆತ್ತೂ ನೋಡಲಿಲ್ಲ. ಇದರಿಂದ ಇನ್ನಷ್ಟು ಘಾಸಿಗೊಂಡ ಸರಸ್ವತಮ್ಮನವರು ಇದ್ದ ಒಬ್ಬ ಮಗನನ್ನು ಭಾವ-ವಾರಗಿತ್ತಿಯ ರಕ್ಷಣೆಗೊಪ್ಪಿಸಿ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡುಬಿಟ್ಟರು. ಇದೊಂದು ಸಂದಿಗ್ದ ಸ್ಥಿತಿ. 

ಗುರುಗಳಿಗೆ ಈ ವಿಚಾರವನ್ನು ತಿಳಿಸುವುದೋ ಬೇಡವೋ? ಅನ್ನೋ ಗೊಂದಲಕ್ಕೊಳಗಾಯ್ತು ರಾಯರ ಶಿಷ್ಯವೃಂದ. ಕೊನೆಗೂ ವಿಚಾರವನ್ನು ತಿಳಿಸಿಯೇಬಿಡೋಣ ಎಂದು ಮುಂದಾದ ಶಿಷ್ಯರಿಗೆ ಹೌದಾ? ರಾಮನೊಂದಿಗೆ ಸೇರಿಕೊಂಡರಾ? ಒಳ್ಳೇದಾಯ್ತು. ಅವರ ಮಗನ ಕೈಯಲ್ಲಿ ಸಂಸ್ಕಾರ ಮಾಡಿಸಿಬಿಡಿ ಎಂದು ನಿರ್ಭಾವುಕರಾಗಿ ನುಡಿಯುತ್ತಾರೆ ರಾಯರು.

ಸನ್ಯಾಸಾಶ್ರಮದ ಸಂಸ್ಕಾರ, ಸಂಕಲ್ಪ ಮತ್ತು ಬದ್ಧತೆಗೆ ಆ ಕಾಲದ ಸಂತಧುರೀಣರು ಹೇಗೆಲ್ಲಾ ಸಾಕ್ಷಿಯಾಗಿದ್ದರು ಅನ್ನೋದಕ್ಕೆ ಇದೂ ಕೂಡ ಒಂದು ಉತ್ತಮ ನಿದರ್ಶನ. ರಾಯರ ನುಡಿಯಂತೆ ಪೂರ್ವಾಶ್ರಮದ ಮಗನಿಂದ ಸಂಸ್ಕಾರವಾಯಿತು. ಆದರೆ ಸತ್ತ ಮೇಲೂ ನನ್ನನ್ನು ನೋಡಲು ಬರಲಿಲ್ಲವಲ್ಲವಾ ಅನ್ನೋ ಕೊರಗಲ್ಲಿ ಸರಸ್ವತಮ್ಮ ಪ್ರೇತಾತ್ಮರಾಗಿಬಿಡ್ತಾರೆ. ವೇದೋಪನ್ಯಾಸ ಮಾಡುತ್ತಿದ್ದ ಮಠದ ಅಂಗಳಕ್ಕೆ ಬಂದ ಪ್ರೇತಾತ್ಮವನ್ನ ನೋಡಿ ಗುರುತಿಸಿದ ರಾಯರು ತಮ್ಮ ಮಂತ್ರಜಲವನ್ನು ಪ್ರೋಕ್ಷಣೆ ಮಾಡಿ ಸರಸ್ವತಮ್ಮನವರಿಗೆ ಮುಕ್ತಿ ಕೊಡ್ತಾರೆ.

ಮುಂದೆ ಸಾಲು ಸಾಲು ಮಹಿಮೆಗಳು. ರಾಯರ ಬೆನ್ನ ಹಿಂದೆ ಅಸಂಖ್ಯಾತ ಶಿಷ್ಯರಿದ್ದರೂ ಕೂಡ ರಾಯರ ಪವಾಡಗಳು ಎಂದ ಕೂಡಲೇ 4 ಮಂದಿಯ ಉಲ್ಲೇಖ ಸ್ಮರಣೀಯ. ಆ ನಾಲ್ವರು ಮಹನೀಯರೇ ವೆಂಕಣ್ಣ, ವೆಂಕಟ, ರಾಮಚಂದ್ರ ಮತ್ತು ಅಪ್ಪಣ್ಣಾಚಾರ್ಯ. ಇದರಲ್ಲಿ ವೆಂಕಣ್ಣ ದನಗಾಹಿ. ಮಾರ್ಗಮಧ್ಯೆ ರಾಯರ ಕೃಪಾಶೀರ್ವಾದಕ್ಕೊಳಗಾದ ವೆಂಕಣ್ಣನಿಗೆ ಎಂಥದ್ದೇ ಸಂದರ್ಭದವಿರಲಿ, ನನ್ನನ್ನು ನೆನೆ, ನೆರವಿಗೆ ಬರುತ್ತೇನೆ ಎಂದಿರುತ್ತಾರೆ. ಅಂತಹ ಸಂದರ್ಭವೊಂದು ಒಮ್ಮೆ ಕಾಣಿಸಿಕೊಳ್ಳುತ್ತೆ

ವೆಂಕಣ್ಣ ದನಕಾಯುತ್ತಿರುವಾಗ ಆ ಪ್ರಾಂತ್ಯವಾದ ಅಧೋನಿ ಆಳುತ್ತಿದ್ದ ನವಾಬ ಸಿದ್ದಿಕ್ ಮಸೂದ್ ಖಾನ್ ತನ್ನ ಬೆಂಬಲಿಗ ಪಡೆಯೊಂದಿಗೆ ಆ ಕಡೆ ಬರುತ್ತಾನೆ. ಈ ಭಾಗಕ್ಕೆ ಬರುವಷ್ಟರಲ್ಲಿ ಸಂದೇಶಕಾರರು ಸಂದೇಶ ತಲುಪಿಸುತ್ತಾರೆ. ಆದರೆ ರಾಜನಿಗೆ ಅದು ಅರ್ಥವಾಗೋದಿಲ್ಲ. ಕಾರಣ ಅದು ಸ್ಥಳೀಯಭಾಷೆಯಲ್ಲಿರುತ್ತೆ. ಅಲ್ಲೇ ಕೀರ್ತನೆಗಳನ್ನು ಹಾಡುತ್ತಿದ್ದ ವೆಂಕಣ್ಣನನ್ನು ಕರೆದು ಓದುವಂತೆ ಸೂಚಿಸುತ್ತಾನೆ ನವಾಬ. ನನಗೆ ಅಕ್ಷರಗೊತ್ತಿಲ್ಲ, ಓದಲಾಗಲ್ಲ ಎಂದ ವೆಂಕಣ್ಣನ ಮೇಲೆ ಸಿಟ್ಟಾಗುತ್ತಾನೆ ರಾಜ. ಓದು ಇಲ್ಲವೆ ತಲೆದಂಡವಾಗುತ್ತದೆ ಎಂದು ಆದೇಶ ಮಾಡುತ್ತಾನೆ. ಇದೇನು ಹೀಗಾಯ್ತಲ್ಲ. ಈಗೇನು ಮಾಡೋದು ಎಂದು ಗಾಬರಿಗೊಳಗಾದ ವೆಂಕಣ್ಣನಿಗೆ ರಾಯರ ಅನುಗ್ರಹ ನೆನಪಾಗುತ್ತದೆ. ಕೂಡಲೇ ರಾಯರನ್ನು ನೆನೆಯುತ್ತಾನೆ. 

ಅನಕ್ಷರಸ್ಥ ವೆಂಕಣ್ಣನ ನಾಲಗೆ ಮೇಲೆ ಸರಸ್ವತಿ ಹರಿಯುತ್ತಾಳೆ. ನವಾಬನಿಗೆ ಎರಡೆರಡು ಸಿಹಿ ಸುದ್ದಿ ಸಿಗುತ್ತದೆ. ಒಂದು ಕಡೆ ಯುದ್ಧಕ್ಕೆ ಹೊರಟಿದ್ದ ನವಾಬನ ಸೈನ್ಯ ಗೆದ್ದುಕೊಂಡಿದ್ದರೆ ಇನ್ನೊಂದು ಕಡೆ ನವಾಬನಿಗೆ ಗಂಡುಮಗುವಾಗಿರುತ್ತದೆ. ಸಿಹಿಸುದ್ದಿ ಕೇಳಿದ ನವಾಬ ಸಂದೇಶ ಓದಿದ ವೆಂಕಣ್ಣನಿಗೆ ಬಹುಮಾನ, ಜಾಗೀರು ಕೊಡುತ್ತಾನೆ

ಮತ್ತೊಮ್ಮೆ ರಾಮಾಪುರ ಅನ್ನೋ ಊರಲ್ಲಿ ಗುರುಸಂಚಾರ ಆಗುವಾಗ ಆಗಷ್ಟೇ ವಿವಾಹವಾಗಿದ್ದ ನವಜೋಡಿಗೆ ಆಶೀರ್ವದಿಸುತ್ತಾರೆ ರಾಯರು. ವೆಂಕಟಾಚಾರ್ಯ ಅಂತ ಆ ವರನ ಹೆಸರು. ದೀರ್ಘಾಯುಷ್ಟಯ ಸಿಗಲಿ ಎಂದು ವರನಿಗೂ, ದೀರ್ಘಸುಮಂಗಲಿ ಭವ ಎಂದು ವಧುವಿಗೂ ಆಶೀರ್ವದಿಸುತ್ತಾರೆ ರಾಯರು. ಇಷ್ಟು ಹೇಳಿ ರಾಯರು ವಿಶ್ರಾಂತಿಗೆಂದು ತೆರಳುತ್ತಾರೆ. ಅದೇನು ಗ್ರಹಚಾರವೋ ಹಾವೊಂದು ಕಚ್ಚಿ ವೆಂಕಟಾಚಾರ್ಯ ಸಾವಿಗೀಡಾಗುತ್ತಾನೆ. ದೇಹ ನೀಲಿಗಟ್ಟುತ್ತದೆ. ಶೋಕತಪ್ತಳಾದ ವಧು, ಮಹಾಮಹಿಮ ರಾಯರ ಬಳಿ ದೌಡಾಯಿಸುತ್ತಾಳೆ. ಗುರುಗಳೇ ಇದೇನಾಯಿತು ನಿಮ್ಮ ಆಶೀರ್ವಾದ, ನನ್ನ ಪತಿ ಸತ್ತು ಮಲಗಿದ್ದಾನಲ್ಲ ಎಂದು ಗೋಳಾಡುತ್ತಾಳೆ. 

ಕೂಡಲೇ ಬಂದ ರಾಯರು ನೆಲದಲ್ಲಿದ್ದ ಮಣ್ಣನ್ನು ತೆಗೆದುಕೊಂಡು ಮಂತ್ರೋಚ್ಛಾರ ಮಾಡಿ ಸತ್ತ ವರನ ಬಾಯಿಗೆ ಹಾಕುತ್ತಾರೆ. ಅಲ್ಲಿದ್ದವರೆಲ್ಲ ಬೆಕ್ಕಸ ಬೆರಗಾಗುವಂತೆ ವಿಷವಿಳಿದು ವರ ಬದುಕುಳಿಯುತ್ತಾನೆ. ಮುಂದೆ ಈತ ರಾಯರ ಪರಮ ಶಿಷ್ಯನಾಗುತ್ತಾನೆ

ಇದೇ ರೀತಿ ರಾಮಚಂದ್ರ ಅನ್ನೋ ಮತ್ತೊಬ್ಬ ಶಿಷ್ಯನಿರುತ್ತಾನೆ ರಾಯರ ಬಳಿ. ವೆಂಕಟಗುರುವಿನ ಪ್ರಕರಣ ನೋಡಿ ತಾನೂ ಕೂಡ ಮದುವೆಯಾಗಿ ಸುಖವಾಗಿರಬೇಕು ಎಂದುಕೊಳ್ಳುತ್ತಾನೆ. ಸೀದಾ ರಾಯರ ಬಳಿ ಹೋಗ್ತಾನೆ. ಆಗವರು ಮೃತ್ತಿಕೆ ಅಂದ್ರೆ ಮಣ್ಣಿನಿಂದ ಸ್ನಾನ ಮಾಡುತ್ತಿರುತ್ತಾರೆ. ಈ ವೇಳೆ ಗುರುಗಳೇ ನಾನೂ ಕೂಡ ಮದುವೆಯಾಗಬೇಕು ಎಂದುಕೊಂಡಿದ್ದೇನೆ. ಆದರೆ ಮದುವೆಗೆ ಬೇಕಾದ ಹಣವೂ ಇಲ್ಲ, ಹಸೆಮಣೆ ಏರಲು ವಧುವೂ ಇಲ್ಲ ಎನ್ನುತ್ತಾನೆ. ನಸುನಕ್ಕ ರಾಯರು ಮದುವೆ ಒಳ್ಳೆಯದೆ, ಮಾಡಿಕೊ. ಪಿತೃಋಣ ತೀರಿಸಲು ಇದು ಉತ್ತಮ ಮಾರ್ಗವೂ ಹೌದು. ಮೈಗೆ ಸವರಿಕೊಳ್ತಿದ್ದ ಮಣ್ಣನ್ನು ಉಂಡೆ ಮಾಡಿ ಅವನ ಕೈಗಿತ್ತು, ಊರಿಗೆ ಹೊರಡು ಶುಭವಾಗಲಿ ಅನ್ನುತ್ತಾರೆ.

ಇಂತಹ ಅಸಂಖ್ಯಾತ ಪವಾಡಗಳನ್ನು ಮಾಡುತ್ತಾ ಸಂವತ್ಸರಗಳನ್ನು ಸರಿಸಿ ಅಂತಿಮವಾಗಿ ಮಂತ್ರಾಲಯದಲ್ಲಿ ಬೃಂದಾವನಸ್ಥರಾದರು ಗುರುರಾಯರು. 700 ವರ್ಷಗಳ ದೈವಾಂಶ ಆಯುಷ್ಯದಲ್ಲಿ 76 ವರ್ಷ ಶರೀರರೂಪದಲ್ಲಿ, 300 ವರ್ಷದವರೆಗೆ ಮಂತ್ರ-ಕೃತಿಗಳ ಮೂಲಕ, 700 ವರ್ಷದವರೆಗೆ ಕೃಪಾಶೀರ್ವಾದದ ಮೂಲಕವೂ ಇಂದಿಗೂ ಜೀವಂತವಾಗಿದ್ದಾರೆ ರಾಯರು ಅನ್ನೋದು ಪ್ರಬಲ ನಂಬಿಕೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow