ಅಣ್ಣಾವ್ರ ಹಾದಿಯಲ್ಲೇ ಅಭಿನಯ ಸರಸ್ವತಿ: ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಸರೋಜಾದೇವಿ
ಪ್ರಖ್ಯಾತ ಬಹುಭಾಷಾ ನಟಿ ಹಾಗೂ ಹಿರಿಯ ಕಲಾವಿದೆ ಬಿ. ಸರೋಜಾದೇವಿ (87) ಅವರು ಇಂದು ಬೆಳಿಗ್ಗೆ 8 ಗಂಟೆಗೆ ವಯೋಸಹಜ ಕಾಯಿಲೆಯಿಂದ ನಿಧನರಾದರು. ಅವರು ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಮರಣಾನಂತರವೂ ಮಾನವೀಯತೆ ಮೆರೆದಿದ್ದಾರೆ.
ನಟಿಯ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ವೈದ್ಯರು ಕಲೆ ಹಾಕಿದ್ದಾರೆ. ನಟಿ ಸರೋಜಾದೇವಿ ಅವರು ಮರಣಾನಂತರ ಕಣ್ಣುಗಳನ್ನು ದಾನ ಮಾಡುವ ಮೂಲಕ ವರನಟ ಡಾ. ರಾಜ್ ಕುಮಾರ್ ಅವರು ರೂಪಿಸಿದ ಮಾರ್ಗವನ್ನು ಅನುಸರಿಸಿದ್ದಾರೆ. ಡಾ. ರಾಜ್ ಅವರು ತಮ್ಮ ಜೀವಿತಾವಧಿಯಲ್ಲಿ ನೇತ್ರದಾನದ ಮಹತ್ವವನ್ನು ಹೆಚ್ಚಾಗಿ ಪ್ರಚಾರ ಮಾಡಿದ್ದು, ಅವರೂ ಕಣ್ಣುಗಳನ್ನು ದಾನ ಮಾಡಿದ್ದರು.
1938ರ ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದ ಬಿ. ಸರೋಜಾದೇವಿ ಅವರು ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 1962ರಲ್ಲಿ ಬಿಡುಗಡೆಗೊಂಡ ‘ಕಿತ್ತೂರ ರಾಣಿ ಚೆನ್ನಮ್ಮ’ ಚಿತ್ರದಲ್ಲಿ ಅವರ ಪಾತ್ರ ನಿರ್ವಹಣೆಗೆ ವಿಶಿಷ್ಟವಾದ ಮೆಚ್ಚುಗೆ ದೊರೆತಿತ್ತು. ಅವರು ಆ ಕಾಲದ ಮೊದಲ ಮಹಿಳಾ ಸೂಪರ್ಸ್ಟಾರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನಟಿಯ ಅಂತ್ಯಸಂಸ್ಕಾರವನ್ನು ಜುಲೈ 15ರಂದು ಚನ್ನಪಟ್ಟಣ ತಾಲೂಕಿನ ಕಣ್ವ ಡ್ಯಾಮಿನ ಬಳಿ ಇರುವ ದಶಾವರದಲ್ಲಿ, ಒಕ್ಕಲಿಗ ಸಂಪ್ರದಾಯದಂತೆ ಕುಟುಂಬದ ಸದಸ್ಯರು ನೆರವೇರಿಸಲಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?