ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ! ಸಿಎಲ್-7 ಪರವಾನಗಿ ನೀಡಲು ಕೊಡ್ಬೇಕಂತೆ ಕಂತೆ-ಕಂತೆ ನೋಟು!

ಮಂಡ್ಯ:- ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವ ಆಡಿದ್ದು, ಸಿಎಲ್-7 ಪರವಾನಗಿ ನೀಡಲು ಕಂತೆ-ಕಂತೆ ನೋಟು ಕೊಡ್ಬೇಕಾಗಿರೋದು ಬಟಾ ಬಯಲಾಗಿದೆ. ಈ ಘಟನೆ ನಡೆದಿರೋದು ಸಕ್ಕರೆ ನಾಡು ಮಂಡ್ಯದಲ್ಲಿ. ಸಿಎಲ್-7 ಪರವಾನಗಿ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪಗಳು ಕೇಳಿಬಂದಿವೆ. ಚಂದೂಪುರದಲ್ಲಿ ಬಾರ್ ಆ್ಯಂಡ್ ರೆಸ್ಟೋರೆಂಟ್ಗೆ ಅನುಮತಿ ಪಡೆಯಲು ಲಕ್ಷ್ಮಮ್ಮ ಎಂಬುವವರ ಹೆಸರಿನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಅರ್ಜಿಯನ್ನು ಲಕ್ಷ್ಮಮ್ಮ ಪುತ್ರ ಪುನೀತ್ ಎಂಬವರು ಸಲ್ಲಿಸಿದ್ದರು. ಆರಂಭದಲ್ಲಿ ಆನ್ಲೈನ್ ಮೂಲಕ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗಿತ್ತು, ಮತ್ತು ನಂತರ ಅವರು ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿದ್ದರು.
ಬಳಿಕ, ಅಬಕಾರಿ ಇಲಾಖೆ ಅಧಿಕಾರಿಗಳು 40 ಲಕ್ಷ ರೂ. ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಪುನೀತ್ ಆರೋಪಿಸಿದ್ದಾರೆ. ನಂತರ ಈ ಮೊತ್ತವನ್ನು 20 ಲಕ್ಷ ರೂ.ಗೆ ಇಳಿಕೆ ಮಾಡಲಾಗಿದೆ. ಮೊಬೈಲ್ ಸ್ವಿಚ್ಆಫ್ ಮಾಡಿಸಿ, ಅಬಕಾರಿ ಡಿಸಿ ರವಿಶಂಕರ್ ಅವರು ಲಂಚಕ್ಕೆ ಬೇಡಿಕೆ ಇಡುವಂತೆ ಮಾಡಿದ್ದಾರೆ ಎಂದು ಪುನೀತ್ ಆರೋಪಿಸಿದ್ದಾರೆ.
ಈ ಸಂಬಂಧ, ಪುನೀತ್ ಅವರು ಮಂಡ್ಯ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಆಡಿಯೋ ಸಾಕ್ಷ್ಯಗಳನ್ನೂ ಸಲ್ಲಿಸಿದ್ದಾರೆ. ಈ ವಿಚಾರ ಸಂಬಂಧ ಲೋಕಾಯುಕ್ತ ಮತ್ತಷ್ಟು ತನಿಖೆ ನಡೆಸುವ ನಿರೀಕ್ಷೆಯಿದೆ ಮತ್ತು ಇನ್ಸ್ಪೆಕ್ಟರ್ ಶಿವಶಂಕರ್ ಮತ್ತು ಡಿಸಿ ರವಿಶಂಕರ್ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ನಿಮ್ಮ ಪ್ರತಿಕ್ರಿಯೆ ಏನು?






