ಇಂದು RCB Vs PBKS ಬಿಗ್ ಫೈಟ್: ತವರಿನ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಬೆಂಗಳೂರು!?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ಇಂದು ಐಪಿಎಲ್ ಪಂದ್ಯ ನಡೆಯಲಿದೆ. ಬ್ಯಾಕ್ ಟು ಬ್ಯಾಕ್ ಪಂದ್ಯ ಆಡುತ್ತಿರುವ ಉಭಯ ತಂಡಗಳು ಗೆಲುವಿಗಾಗಿ ಸೆಣಸಾಡಲಿದೆ.
ಶುಕ್ರವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಇದರಲ್ಲಿ ತವರಲ್ಲೇ ಆರ್ ಸಿಬಿ ಹೀನಾಯವಾಗಿ ಸೋತಿತ್ತು. 14 ಓವರ್ ಗಳ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಉತ್ತಮ ಬೌಲಿಂಗ್ ಹಾಗೂ ಬ್ಯಾಟಿಂಗ್ ನೆರವಿನಿಂದ ಬೆಂಗಳೂರು ತಂಡವನ್ನು ಮಣಿಸಿತ್ತು. ಇನ್ನೂ ಕಳೆದ ಪಂದ್ಯದ ಸೋಲಿನ ರುಚಿ ಕಂಡಿರುವ ಬೆಂಗಳೂರು ತಂಡವು, ಇಂದು ತನ್ನ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಆರ್ ಸಿಬಿ ಮತ್ತೆ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯವು ಮುಲ್ಲನ್ಪುರದ ಮಹಾರಾಜ ಯಾದವೀಂದ್ರ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಅದೇನೇ ಆಗ್ಲಿ ಮುಲ್ಲನ್ ಪುರದಲ್ಲಿ ಅಷ್ಟು ಸುಲಭವಲ್ಲ. ಕಳೆದ ಪಂದ್ಯದಲ್ಲಿ ಇದೇ ಪಿಚ್ ನಲ್ಲಿ ಪಂಜಾಬ್ ಕಿಂಗ್ಸ್ ಬೌಲರ್ ಗಳು ಕೋಲ್ಕತಾ ನೈಟ್ ರೈಡರ್ಸ್ ಅನ್ನು ಯಾವ ರೀತಿ ಗೋಳು ಹೊಯ್ದುಕೊಂಡರು ಎಂಬುದು ಎಲ್ಲರಿಗೂ ತಿಳಿದೇ ಇದೆ. ಐಪಿಎಲ್ ಇತಿಹಾಸದಲ್ಲಿ ಕನಿಷ್ಠ ಮೊತ್ತವನ್ನು ಪಂಜಾಬ್ ತಂಡ ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಎಲ್ಲಾ ಕೆಲಸವನ್ನೂ ಬೌಲರ್ ಗಳೇ ಮಾಡಿ ಮುಗಿಸಿದರು.
ವೇಗದ ಬೌಲರ್ ಗಳನ್ನು ಗಣನೆಗೆ ತೆಗೆದುಕೊಂಡರೆ ಆರ್ ಸಿಬಿಯಲ್ಲಿ ಜೋಶ್ ಹೇಜಲ್ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್ ಮೊದಲಾದ ಉತ್ತಮ ಬೌಲರ್ ಗಳಿದ್ದಾರೆ. ಆದರೆ ಸ್ಪಿನ್ನರ್ ಗಳ ವಿಚಾರಕ್ಕೆ ಬಂದಲ್ಲಿ ಯುಜುವೇಂದ್ರ ಚಹಲ್ ರೀತಿಯಲ್ಲಿ ಕೃನಾಲ್ ಪಾಂಡ್ಯ, ಲಿಯಾಮ್ ಲಿವಿಂಗ್ ಸ್ಟೋನ್ ಯಶಸ್ಸು ತಮ್ಮದಾಗಿಸಿಕೊಳ್ಳುವರೇ ಎಂಬುದೇ ಕುತೂಹಲದ ಸಂಗತಿ. ಪಂಜಾಬ್ ವಿರುದ್ಧ ಈ ಪಂದ್ಯ ಗೆಲ್ಲುತ್ತಾ ಕಾದು ನೋಡಬೇಕಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






