ಊಟಿಗೆ ಹೋಗುವ ಪ್ರವಾಸಿಗರು ಗಮನಿಸಿ.. ಏಪ್ರಿಲ್ 2 ರಂದು ನೀಲಗಿರಿಯಲ್ಲಿ ಬಂದ್ ಘೋಷಣೆ!

ಬೇಸಿಗೆಯಲ್ಲಿ ಊಟಿಯ ಪ್ರವಾಸ ಸ್ವರ್ಗವೇ ಸರಿ. ಅದರಲ್ಲೂ ನಮ್ಮ ಬೆಂಗಳೂರು ಹಾಗು ಮೈಸೂರಿನ ಮಂದಿ ಊಟಿ ಗಿರಿಧಾಮಕ್ಕೆ ಆಗಾಗ್ಗೆ ಭೇಟಿ ನೀಡುತ್ತಾರೆ. ಆದರೆ, ಇದೀಗ ಊಟಿ ಪ್ರವಾಸದ ಯೋಜನೆ ಮಾಡುತ್ತಿದ್ದರೆ ಕೆಲವೊಂದು ವಿಚಾರಗಳನ್ನು ಗಮನಿಸಿ ಮುಂದಡಿ ಇಡುವುದು ಒಳಿತು. ಅದರಲ್ಲೂ ಏಪ್ರಿಲ್ 2 ರಂದು ಊಟಿ ಪ್ರವಾಸಕ್ಕೆ ಪ್ಲಾನ್ ಮಾಡದಿರುವುದೇ ಒಳಿತು.
ಊಟಿಗೆ ಹೋಗಲು ಏಪ್ರಿಲ್ 1 ರಿಂದ ಇ-ಪಾಸ್ ಕಡ್ಡಾಯವಾಗಿದೆ. ಇದನ್ನು ವಿರೋಧಿಸಿ ತಮಿಳುನಾಡಿನ ನೀಲಗಿರಿ ಜಿಲ್ಲೆಯಾದ್ಯಂತ ಬಂದ್ ಘೋಷಣೆಯಾಗಿದೆ. ಹೌದು ಊಟಿಗೆ ಹೋಗಬೇಕಾದಲ್ಲಿ ಆನ್ಲೈನ್ನಲ್ಲಿ ಮೊದಲೇ ಇ- ಪಾಸ್ ಪಡೆಯಬೇಕು. ಪ್ರವಾಸಿಗರ ದಟ್ಟಣೆ ತಪ್ಪಿಸಲು ಚನ್ನೈ ಹೈಕೋರ್ಟ್ ಈ ಆದೇಶ ನೀಡಿದೆ.
ಬಹುತೇಕ ಮೈಸೂರು-ಬಂಡೀಪುರ ರಸ್ತೆ ಮೂಲಕವೇ ಪ್ರವಾಸಿಗರು ಊಟಿಗೆ ಹೋಗುತ್ತಾರೆ. ಇ-ಪಾಸ್ ಕಡ್ಡಾಯದಿಂದ ವ್ಯಾಪಾರ ವಹಿವಾಟಿನ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಹಾಗಾಗಿ ಇ ಪಾಸ್ ರದ್ದುಗೊಳಿಸುವಂತೆ ಏಪ್ರಿಲ್ 2 ರಂದು ಊಟಿ ಬಂದ್ಗೆ ಕರೆ ನೀಡಲಾಗಿದೆ.
ಊಟಿ, ಕೊಡೈಕೆನಾಲ್ಗೆ ವಾಹನ ನಿರ್ಬಂಧ ವಿವರ
ಏಪ್ರಿಲ್ 1 ರಿಂದ ಜೂನ್ 30 ರವರೆಗೆ ಊಟಿ, ಕೊಡೈಕೆನಾಲ್ ಪ್ರವಾಸಿ ವಾಹನಗಳ ಪ್ರವೇಶಕ್ಕೆ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ವಾರದ ದಿನಗಳಲ್ಲಿ 6000 ವಾಹನಗಳಿಗೆ ಮಾತ್ರ ನೀಲಗಿರಿ ಜಿಲ್ಲೆಗೆ ಪ್ರವೇಶಿಸಲು ಅವಕಾಶವಿರುತ್ತದೆ. ಆದರೆ ಶನಿವಾರ ಮತ್ತು ಭಾನುವಾರದಂದು 8000 ವಾಹನಗಳಿಗೆ ಅವಕಾಶ ನೀಡಲಾಗುತ್ತದೆ. ನೀಲಗಿರಿ ಜಿಲ್ಲೆಯಲ್ಲಿ ನೋಂದಾಯಿಸಲಾದ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧಗಳಿಲ್ಲ.
ನಿಮ್ಮ ಪ್ರತಿಕ್ರಿಯೆ ಏನು?






