ಎಲ್ಲಾ ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ರಾಜ್ಯಗಳಿಗೆ ಅಧಿಕಾರವಿಲ್ಲ: ಸುಪ್ರೀಂ ಕೋರ್ಟ್

ನವದೆಹಲಿ: ಸಂವಿಧಾನದ ಪರಿಚ್ಛೇದ 39(ಬಿ) ಅಡಿಯಲ್ಲಿ ಎಲ್ಲಾ ಖಾಸಗಿ ಆಸ್ತಿಗಳನ್ನು "ಸಮುದಾಯದ ಭೌತಿಕ ಸಂಪನ್ಮೂಲಗಳು" ಎಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಹೌದು ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ, ಖಾಸಗಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ನ್ಯಾ. ಕೃಷ್ಣಯ್ಯರ್ ನೀಡಿದ್ದ ತೀರ್ಪನ್ನು 8:1 ಬಹುಮತದೊಂದಿಗೆ ವಜಾ ಮಾಡಿದೆ.
ಸಂವಿಧಾನದ ಆರ್ಟಿಕಲ್ 39(ಬಿ)ಪ್ರಕಾರ ಖಾಸಗಿಯವರ ಮಾಲೀಕತ್ವದ ಎಲ್ಲಾ ಸಂಪನ್ಮೂಲಗಳನ್ನು ವಶಕ್ಕೆ ಪಡೆಯುವ ಹಕ್ಕು ರಾಜ್ಯ ಸರ್ಕಾರಗಳಿಗೆ ಇರಲ್ಲ ಎಂದು ಸಿಜೆಐ ಚಂದ್ರಚೂಡ್ ನೇತೃತ್ವದ 9 ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನಿಕ ಪೀಠ ಸ್ಪಷ್ಟವಾಗಿ ತಿಳಿಸಿದೆ.
ಕೆಲವೇ ಪ್ರಕರಣಗಳಲ್ಲಿ ಇದಕ್ಕೆ ವಿನಾಯ್ತಿ ಇರಲಿದೆ ಎಂದು ಸಾಂವಿಧಾನಿಕ ಪೀಠ ತಿಳಿಸಿದೆ. ಈ ವಿಚಾರವನ್ನು 1950ರ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಲಾಗದು. ಅಂದು ರಾಷ್ಟ್ರೀಕರಣ ನಡೆದಿತ್ತು. ಆದರೆ ಇಂದು ಹೂಡಿಕೆ ವಾಪಸಾತಿ ನಡೆಯುತ್ತಿದೆ. ಖಾಸಗಿ ಹೂಡಿಕೆ ಇದೆ. ಇದು ಪರಿವರ್ತನೆ. ಹೀಗಾಗಿ ಇಂದಿನ ಸ್ಥಿತಿಗೆ ಅನುಗುಣವಾಗಿ ಮತ್ತು ಭವಿಷ್ಯವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಈ ತೀರ್ಪು ನೀಡಿದ್ದೇವೆ ಎಂದು ಸಾಂವಿಧಾನಿಕ ಪೀಠ ಅಭಿಪ್ರಾಯಪಟ್ಟಿದೆ.
ಈ ತೀರ್ಪಿನೊಂದಿಗೆ, ಎಲ್ಲಾ ಖಾಸಗಿ ಆಸ್ತಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬಹುದು ಎಂದು ಹೇಳಿದ್ದ ನ್ಯಾ. ಕೃಷ್ಣ ಅಯ್ಯರ್ ಅವರ 1978 ರ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ನ್ಯಾಯಮೂರ್ತಿ ಕೃಷ್ಣ ಅಯ್ಯರ್ ಅವರ ತೀರ್ಪು ಖಾಸಗಿ ವ್ಯಕ್ತಿಗಳ ಎಲ್ಲಾ ಆಸ್ತಿಗಳನ್ನು ಸಮುದಾಯದ ಆಸ್ತಿ ಎಂದು ಕರೆಯಬಹುದು ಎಂದು ಹೇಳಿತ್ತು.
ನಿಮ್ಮ ಪ್ರತಿಕ್ರಿಯೆ ಏನು?






