ಕೆ.ಎನ್. ರಾಜಣ್ಣ ವಜಾ ಖಂಡಿಸಿ ಸಿಡಿದೆದ್ದ ಬೆಂಬಲಿಗರು: ಪೆಟ್ರೋಲ್ ಸುರಿದುಕೊಂಡು ಆಕ್ರೋಶ
ಮಧುಗಿರಿ: ಸಚಿವ ಸ್ಥಾನದಿಂದ ಕೆ.ಎನ್. ರಾಜಣ್ಣ ಅವರನ್ನು ವಜಾಗೊಳಿಸಿರುವ ಹಿನ್ನೆಲೆಯಲ್ಲಿ, ಮಧುಗಿರಿ ಪಟ್ಟಣದಲ್ಲಿ ಬೆಂಬಲಿಗರು ಬಂದ್ ಮಾಡಿ ಭಾರೀ ಪ್ರತಿಭಟನೆ ನಡೆಸಿದರು. ಬೆಂಬಲಿಗರು ಹಾಗೂ ಅಭಿಮಾನಿಗಳು ಪಟ್ಟಣದ ಬಸ್ ನಿಲ್ದಾಣ ಸರ್ಕಲ್ನಲ್ಲಿ ಜಮಾವಣೆಗೊಂಡು, ಟೈರ್ಗೆ ಬೆಂಕಿ ಹಚ್ಚಲು ಯತ್ನಿಸಿದರು. ಆದರೆ, ಪೊಲೀಸರು ತಡೆಯುವುದರಿಂದ ಉದ್ವಿಗ್ನತೆ ಸೃಷ್ಟಿಯಾಯಿತು. ರಾಜಣ್ಣರ ರಾಜೀನಾಮೆ ವಾಪಸ್ ಪಡೆಯುವಂತೆ ಆಗ್ರಹಿಸಿದ ಬೆಂಬಲಿಗರು ಪಾದಯಾತ್ರೆ ಮೂಲಕ ಎಸಿ ಕಚೇರಿ ಕಡೆ ತೆರಳಿದರು.
ಎಸಿ ಕಚೇರಿ ಬಳಿ "ಬೇಕೆ ಬೇಕು ನ್ಯಾಯ ಬೇಕು" ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಲು ಹರಸಾಹಸಪಟ್ಟರು. ತುಮಕೂರು ಗೇಟ್ ವರೆಗೆ ಪಾದಯಾತ್ರೆ ನಡೆಸಿದ ಬಳಿಕ, ಪ್ರತಿಭಟನಾಕಾರರು ರಸ್ತೆಯಲ್ಲಿ ಧರಣಿ ನಡೆಸಿದರು. ಈ ವೇಳೆ ಬೇಕರಿಯೊಂದಕ್ಕೆ ನುಗ್ಗಲು ಪ್ರಯತ್ನ, ಎಂಜಿ ಕ್ರೀಡಾಂಗಣದ ಬಳಿ ಹೈಡ್ರಾಮಾ ಹಾಗೂ ಅಭಿಮಾನಿಯೊಬ್ಬ ವಿಷ ಕುಡಿಯಲು ಯತ್ನಿಸಿದ ಘಟನೆಗಳು ನಡೆದವು. ಆತನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತು.
ಸಚಿವ ಸ್ಥಾನದಲ್ಲಿ ಸಡಿಲ ಹೇಳಿಕೆಗಳಿಂದ ವಿವಾದಕ್ಕೆ ಒಳಗಾದ ಕೆ.ಎನ್. ರಾಜಣ್ಣ ಅವರನ್ನು ಹೈಕಮಾಂಡ್ ಸೂಚನೆಯ ಮೇರೆಗೆ ಸಿಎಂ ಸಿದ್ದರಾಮಯ್ಯ ಸೋಮವಾರ ಸಂಪುಟದಿಂದ ವಜಾಗೊಳಿಸಿದ್ದರು. ಈ ನಿರ್ಧಾರಕ್ಕೆ ರಾಜಣ್ಣ ಬೇಸರ ವ್ಯಕ್ತಪಡಿಸಿದ್ದು, ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?