ಕೋವಿಡ್ ಹಗರಣ ತನಿಖಾ ವರದಿ ಮಾತ್ರವಲ್ಲ, ಕೆಂಪಣ್ಣ ಆಯೋಗದ ವರದಿ ಬಗ್ಗೆಯೂ ಸಂಪುಟದಲ್ಲಿ ಚರ್ಚಿಸಲಿ: ಕುಮಾರಸ್ವಾಮಿ

ಕೋವಿಡ್ ಹಗರಣ ತನಿಖಾ ವರದಿ ಮಾತ್ರವಲ್ಲ, ಕೆಂಪಣ್ಣ ಆಯೋಗದ ವರದಿ ಬಗ್ಗೆಯೂ ಸಂಪುಟದಲ್ಲಿ ಚರ್ಚಿಸಲಿ: ಕುಮಾರಸ್ವಾಮಿ
ಕೋವಿಡ್ ಹಗರಣದ ತನಿಖಾ ವರದಿಯಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಸಂಪುಟದಲ್ಲಿ ಚರ್ಚೆಯಾಗಲಿದೆ ಎಂದು ಮಾಧ್ಯಮಗಳ ವರದಿಯಲ್ಲಿ ನೋಡಿದ್ದೇನೆ. ಕೆಂಪಣ್ಣ ಆಯೋಗದ ವರದಿ ಬಗ್ಗೆಯೂ ಸಂಪುಟದಲ್ಲಿ ಚರ್ಚಿಸಲಿ ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅದನ್ನು (ಕೆಂಪಣ್ಣ ಆಯೋಗದ ವರದಿ) ಏಕೆ ಕ್ಯಾಬಿನೆಟ್ ಮುಂದೆ ತರದೆ ಬಿಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ಮುಡಾ ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅಮಾನತು ವಿಚಾರವಾಗಿ ಪ್ರತಿಕ್ರಿಯಿಸಿ, ಹೈಕೋರ್ಟ್ನಲ್ಲಿ ಈ ಪ್ರಕರಣದ ಬಗ್ಗೆ ವಾದ ಪ್ರತಿವಾದ ಆಗಿದೆ. ಸಿಎಂ ಪರ ವಕೀಲರು ವಾದ ಮಾಡಲು ಸಮಯ ಕೇಳುತ್ತಿದ್ದಾರೆ ಎಂದರು.
ನಾಡಿಗೆ ಅನೇಕ ಕೊಡುಗೆಗಳನ್ನು ಎನ್ಯು ಆಸ್ಪತ್ರೆ ಕೊಟ್ಟಿದೆ. ಶಿವಮೊಗ್ಗದಲ್ಲಿ ಹಲವಾರು ಕುಟುಂಗಳಿಗೆ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಿದ್ದಾರೆ. ಶಿವಮೊಗ್ಗಕ್ಕೆ ಇಂತಹ ಒಂದು ಆಸ್ಪತ್ರೆ ಅವಶ್ಯಕವಾಗಿತ್ತು. ಇಲ್ಲವಾದರೆ ಬೆಂಗಳೂರು ಅಥವಾ ಮಂಗಳೂರಿಗೆ ಆಸ್ಪತ್ರೆಗೆ ಹೋಗಬೇಕಿತ್ತು. ಇದೀಗ ಆ ಸೌಲಭ್ಯ ಶಿವಮೊಗ್ಗದಲ್ಲಿ ದೊರೆಯುತ್ತಿದೆ ಎಂದರು.
ಇತ್ತೀಚೆಗೆ ಕಿಡ್ನಿ ಸಮಸ್ಯೆ ಎದುರಿಸುತ್ತಿರುವವರು ಬಹಳ ಸಂಖ್ಯೆಯಲ್ಲಿದ್ದಾರೆ. ಕಿಡ್ನಿ ಸಮಸ್ಯೆಗೆ ಒಳಗಾದವರಿಗೆ ಕುಟುಂಬದವರು ಯಾರಾದರೂ ಕಿಡ್ನಿ ದಾನ ಮಾಡಬಹುದು. ಆದರೆ ಆ ಕಿಡ್ನಿ ಮ್ಯಾಚ್ ಆಗಬೇಕು. ನಾನು ಮುಖ್ಯಮಂತ್ರಿ ಆಗಿದ್ದಾಗ ಅಂಗಾಂಗ ಚಿಕಿತ್ಸೆಗೆ 30 ಕೋಟಿ ರೂ. ಹಣ ಇಟ್ಟಿದ್ದೆ. ಆದರೆ, ತದನಂತರ ಅದರ ಬಗ್ಗೆ ಯಾರೂ ಗಮನ ಕೊಡಲಿಲ್ಲ. ಆ ಹಣ ಏನಾಯ್ತೋ ಗೊತ್ತಿಲ್ಲ ಎಂದರು.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






