ತಂದೆಯ ಮೇಲೆ ಸೇಡು ತೀರಿಸಿಕೊಳ್ಳಲು 5 ವರ್ಷದ ಮಗನನ್ನು ಕೊ*ಲೆ ಮಾಡಿದ ಚಾಲಕ!
ನವದೆಹಲಿ: ತಂದೆಯ ವಿರುದ್ಧ ಸೇಡು ತೀರಿಸಿಕೊಳ್ಳಲು ಐದು ವರ್ಷದ ಮಗನನ್ನು ಅಪಹರಿಸಿ ಕೊಲೆ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಆರೋಪಿಯಾಗಿರುವ ವ್ಯಕ್ತಿ ಮೃತ ಬಾಲಕನ ತಂದೆಯ ಮನೆಯಲ್ಲಿ ವಾಹನ ಚಾಲಕರಾಗಿ ಕೆಲಸ ಮಾಡುತ್ತಿದ್ದನು.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಆರೋಪಿ ನೀತು ಎಂಬವನ ಬಾಡಿಗೆ ಮನೆಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಆರೋಪಿಯು ಘಟನೆಯ ನಂತರ ಪರಾರಿಯಾಗಿದ್ದು, ಅವನನ್ನು ಪತ್ತೆಹಚ್ಚಲು ಹಲವಾರು ತಂಡಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಾಹ್ನ ಸುಮಾರು 3.30 ಗಂಟೆಗೆ ನರೇಲಾ ಕೈಗಾರಿಕಾ ಪ್ರದೇಶದಲ್ಲಿ ಬಾಲಕನ ಅಪಹರಣದ ಕುರಿತು ಕರೆ ಬಂದಿತ್ತು.
ಬಾಲಕ ಮನೆಯ ಹೊರಗೆ ಆಟವಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾನೆ ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ದೂರು ನೀಡಿದ್ದರು. ಅದಾದ ಬಳಿಕ ಕುಟುಂಬದವರು ಹಾಗೂ ಅಕ್ಕಪಕ್ಕದವರು ಹುಡುಕಾಟ ಆರಂಭಿಸಿದಾಗ, ಹತ್ತಿರದಲ್ಲಿರುವ ನೀತುವಿನ ಬಾಡಿಗೆ ಮನೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯಲ್ಲಿ, ದೂರುದಾರರಾದ ಬಾಲಕನ ತಂದೆ ಏಳು ರಿಂದ ಎಂಟು ಸಾರಿಗೆ ವಾಹನಗಳನ್ನು ಹೊಂದಿದ್ದು, ನೀತು ಮತ್ತು ವಾಸಿಂ ಎಂಬ ಇಬ್ಬರನ್ನು ಚಾಲಕರಾಗಿ ನೇಮಿಸಿಕೊಂಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಒಂದು ದಿನದ ಹಿಂದಷ್ಟೇ ಕೆಟ್ಟದಾಗಿ ವರ್ತಿಸಿದ್ದಕ್ಕಾಗಿ ನೀತುಗೆ ಎರಡರಿಂದ ನಾಲ್ಕು ಬಾರಿ ಕಪಾಳಮೋಕ್ಷ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಮಾನಕ್ಕೊಳಗಾದ ನೀತು ಮಂಗಳವಾರ ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಾಲಕನನ್ನು ಅಪಹರಿಸಿ, ಬಾಡಿಗೆ ಮನೆಗೆ ಕರೆದೊಯ್ದು ಇಟ್ಟಿಗೆಯಿಂದ ತಲೆಗೆ ಹೊಡೆದು ಮತ್ತು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎಂದು ಡಿಸಿಪಿ ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?