ತಾಳಿ ಕಟ್ಟಿದ ಕೆಲವೇ ಕ್ಷಣದಲ್ಲಿ ವರ ಹೃದಯಾಘಾತದಿಂದ ಸಾವು..! ಮುಗಿಲು ಮುಟ್ಟಿದ ಆಕ್ರಂದನ

ಬಾಗಲಕೋಟೆ: ಎದೆ ನೋವು ಯಾವಾಗ ಮತ್ತು ಹೇಗೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕುಳಿತುಕೊಂಡಲೇ ವ್ಯಕ್ತಿ ಕುಸಿದು ಬೀಳುವುದು, ಡ್ಯಾನ್ಸ್ ಮಾಡುತ್ತಿರುವಾಗ, ಇತ್ತೀಚೆಗೆ ಮದುವೆ ಮನೆಯಲ್ಲಿ ವರನಿಗೆ ಎದೆ ನೋವು ಕಾಣಿಸಿಕೊಂಡು ಆತ ಸಾವಪ್ಪಿರುವಂತಹ ಘಟನೆ ಕೂಡ ವರದಿಯಾಗಿತ್ತು. ಸದ್ಯ ಇಂತಹದೇ ಒಂದು ಘಟನೆ ನಡೆದಿದ್ದು,
ತಾಳಿ ಕಟ್ಟಿ ಹೊಸ ಬದುಕಿನ ಸಂಭ್ರಮದಲ್ಲಿದ್ದ ವರ ಕೆಲವೇ ನಿಮಿಷಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆ, ಜಮಖಂಡಿ ನಗರದಲ್ಲಿ ನಡೆದಿದೆ. ಜಮಖಂಡಿ ತಾಲೂಕಿನ ಕುಂಬಾರಹಳ್ಳ ಗ್ರಾಮದ ಪ್ರವೀಣ್ (24) ಹೃದಯಾಘಾತದಿಂದ ಮೃತಪಟ್ಟ ವರನಾಗಿದ್ದು,
ವೃತ್ತಿಯಲ್ಲಿ ಕೃಷಿಕನಾಗಿರುವ ಪ್ರವೀಣ್ ಹಾಗೂ ಪೂಜಾ ಅವರ ವಿವಾಹ ಜಮಖಂಡಿಯ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆಯಿತು. ಬೆಳಗ್ಗೆಯಿಂದ ಪೂಜೆ ವಿಧಿ ವಿಧಾನಗಳಲ್ಲಿ ಪ್ರವೀಣ್ ಉತ್ಸಾಹದಿಂದ ಭಾಗವಹಿಸಿದ್ದರು. ಮಧ್ಯಾಹ್ನ 12.15ಕ್ಕೆ ಅಕ್ಷತಾರೋಪಣಕ್ಕಾಗಿ ವೇದಿಕೆ ಏರಿದರು.
ತಾಳಿ ಕಟ್ಟಿ, ಹಾರ ಬದಲಾಯಿಸಿಕೊಂಡು ಖುಷಿಯಿಂದ ಜನರ ಶುಭಾಶಯ ಸ್ವೀಕರಿಸುತ್ತಿದ್ದರು. ಆಗ ಪ್ರವೀಣ್ಗೆ ತಲೆ ಸುತ್ತು ಬಂದಂತಾಗಿದ್ದು, ತಂದೆ ಶ್ರೀಶೈಲ ಅವರಿಗೆ ಪಿಸುಮಾತಿನಲ್ಲಿ ವಿಷಯ ಹೇಳಿದರು. ತಂದೆ ನೀರು ತರಿಸಿ ಕೊಡುವಷ್ಟರಲ್ಲಿ ಪ್ರವೀಣ್ ಕುಸಿದುಬಿದ್ದರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಿ ಯುವಕ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದರು.
ಪ್ರವೀಣ್ ಸಾವಿನಿಂದ ಸಂಭ್ರಮದಲ್ಲಿದ್ದ ಮದುವೆ ಮನೆ ಮೌನವಾಯಿತು. ತಂದೆ, ತಾಯಿಗೆ ದಿಕ್ಕು ತೋಚದಂತಾಯಿತು. ಮದುವೆಗೆ ಬಂದ ಜನ ಪ್ರವೀಣ್ ಅಂತ್ಯಕ್ರಿಯೆಗೆ ಜತೆಯಾದರು. ಪ್ರವೀಣ್ ರಾಜ್ಯ ಆಮೆಚೂರ್ ಸೈಕ್ಲಿಂಗ್ ಅಸೋಸಿಯೇಶನ್ ಕಾರ್ಯದರ್ಶಿ ಶ್ರೀಶೈಲ ಕುರಣಿಯವರ ಪುತ್ರ. 'ಉತ್ಸಾಹದಿಂದ ಇದ್ದ ಪ್ರವೀಣನಿಗೆ ಯಾವುದೇ ಹೃದಯ ಸಮಸ್ಯೆಯಿರಲಿಲ್ಲ. ಆದರೆ ಹೃದಯಾಘಾತದಿಂದ ಜೀವ ತೊರೆದʼ ಎಂದು ಸ್ನೇಹಿತರು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






