ಪೋಕ್ಸೋ ಕೇಸ್: ಜನವರಿ17 ಕ್ಕೆ ವಾದ ಮಂಡಿಸಲಿದ್ದಾರೆ ಬಿ ಎಸ್ ಯಡಿಯೂರಪ್ಪ ವಕೀಲರು, ಪ್ರಾಸಿಕ್ಯೂಶನ್ ವಾದ ಹೇಗಿತ್ತು?

ಬೆಂಗಳೂರು:- ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಕೋರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ನ್ಯಾಯಾಲಯದಲ್ಲಿ ನಡೆಯುತ್ತಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಪೋಕ್ಸೋ ಕೇಸ್ ಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಶನ್ ವಾದ ಮುಕ್ತಾಯವಾಗಿದ್ದು, ಜ. 17ಕ್ಕೆ ಬಿಎಸ್ವೈ ಪರ ವಕೀಲರ ವಾದ ಮಂಡಿಸಲಿದ್ದಾರೆ.
ನ್ಯಾ| ನಾಗಪ್ರಸನ್ನ ಅವರಿರುವ ಏಕಸದಸ್ಯ ನ್ಯಾಯಪೀಠವು ಈ ಪ್ರಕರಣದಲ್ಲಿ ಆರೋಪಿ ಬಿಎಸ್ವೈ ಪರ ವಕೀಲರ ವಾದಕ್ಕೆ ಜನವರಿ 17 ಅನ್ನು ನಿಗದಿ ಮಾಡಿದೆ. ವಿಚಾರಣೆಯಲ್ಲಿ ಯಡಿಯೂರಪ್ಪ ಖುದ್ದಾಗಿ ಹಾಜರಾಗುವುದರಿಂದ ನೀಡಲಾಗಿದ್ದ ವಿನಾಯಿತಿಯನ್ನೂ ಹೈಕೋರ್ಟ್ ವಿಸ್ತರಣೆ ಮಾಡಿದೆ. ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ಯಡಿಯೂರಪ್ಪ ಪರ ವಾದ ಮಾಡುತ್ತಿದ್ದಾರೆ.
ಪೋಕ್ಸೋ ಕಾಯ್ದೆ ಅಡಿಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡಬೇಕೆಂದು ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯುತ್ತಿದೆ. ಅಪ್ರಾಪ್ತೆಯ ಮೇಲೆ ಯಡಿಯೂರಪ್ಪ ಲೈಂಗಿಕ ದೌರ್ಜನ್ಯ ಎಸಗಿದರೆನ್ನುವ ಗುರುತರ ಆರೋಪ ಈ ಪ್ರಕರಣದಲ್ಲಿ ಕೇಳಿಬಂದಿದೆ.
ಸಿಐಡಿ ಸಲ್ಲಿಸಿದ ಆರೋಪಪಟ್ಟಿಯಲ್ಲಿರುವ ಮಾಹಿತಿ ಪ್ರಕಾರ, ಅಂದು ಯಡಿಯೂರಪ್ಪ ಅವರು ತಮ್ಮ ಕೊಠಡಿಗೆ ಬಾಲಕಿಯೊಬ್ಬಳನ್ನೇ ಕರೆದು ಬಾಗಿಲು ಹಾಕಿಕೊಂಡಿದ್ದಾರೆ. ಬಳಿಕ ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ. ಬಾಲಕಿ ಪ್ರತಿರೋಧಿಸಿದಾಗ ಯಡಿಯೂರಪ್ಪ ನಗದು ಹಣ ನೀಡಿದ್ದಾರೆ. ಇವತ್ತು ಹೈಕೋರ್ಟ್ನಲ್ಲಿ ನಡೆದ ವಿಚಾರಣೆಯಲ್ಲಿ ಪ್ರಾಸಿಕ್ಯೂಶನ್ನಿಂದ ನ್ಯಾಯಾಧೀಶರಿಗೆ ಈ ಘಟನೆಯನ್ನು ವಿವರಿಸಲಾಯಿತು.
ಯಡಿಯೂರಪ್ಪನವರ ಕೊಠಡಿಯಿಂದ ಹೊರಬಂದ ಬಳಿಕ ಬಾಲಕಿ, ಒಳಗೆ ನಡೆದ ಘಟನೆಯನ್ನು ತನ್ನ ತಾಯಿಗೆ ವಿವರಿಸಿದ್ದಾಳೆ. ವಕೀಲ ಹಿರೇಮಠ್ರೊಂದಿಗೆ ಮಾತನಾಡಿ ಘಟನೆಯ ಮಾಹಿತಿ ನೀಡಿದ್ದಾರೆ. ನಂತರ ಬಿಎಸ್ವೈ ನೀಡಿದ್ದ ನಗದು ಹಣದೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಬಳಿಕ ಮೊಬೈಲ್ ಕ್ಯಾಮರಾ ಆನ್ ಮಾಡಿ ಮತ್ತೆ ಬಿಎಸ್ವೈ ಮನೆಗೆ ಹೋಗಿದ್ದಾರೆ. ಮಗಳೊಂದಿಗೆ ಹಾಗೇಕೆ ವರ್ತಿಸಿದಿರಿ ಎಂದು ಯಡಿಯೂರಪ್ಪ ಅವರನ್ನು ಆ ತಾಯಿ ಪ್ರಶ್ನಿಸಿದ್ದಾರೆ. ‘ಇಲ್ಲ ಮರಿ, ಚಕ್ ಮಾಡಿದೆ’ ಎಂದು ಬಿಎಸ್ವೈ ಉತ್ತರಿಸಿದ್ದಾರೆ ಎಂದು ಘಟನೆಯನ್ನು ಕೋರ್ಟ್ ವಿಚಾರಣೆಯಲ್ಲಿ ವಿವರಿಸಿದ ಪ್ರಾಸಿಕ್ಯೂಶನ್, ಅಂದಿನ ಘಟನೆಯನ್ನು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ ಎಂದು ವಾದಿಸಿದೆ.
ಬಾಲಕಿಯ ಕುಟುಂಬಕ್ಕೆ ಯಡಿಯೂರಪ್ಪ ಕಡೆಯಿಂದ ಎರಡು ಲಕ್ಷ ರೂ ಸಂದಾಯವಾಗಿದೆ. ಈ ಅಂಶವನ್ನೂ ಪ್ರಾಸಿಕ್ಯೂಶನ್ ಎತ್ತಿತೋರಿಸಿದೆ. ಆದರೆ, ಆಕೆಗೆ ಸಮಸ್ಯೆ ಇದ್ದಿದ್ದರಿಂದ ಎರಡು ಲಕ್ಷ ರೂ ಹಣವನ್ನು ಪಿಎ ರುದ್ರೇಶ್ ಮೂಲಕ ಸಾಲವಾಗಿ ನೀಡಲಾಗಿದೆ ಎಂದು ಯಡಿಯೂರಪ್ಪ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚೆಕ್ ಮಾಡಿದೆ ಎನ್ನುವುದನ್ನೂ ಒಪ್ಪಿಕೊಂಡಿರುವ ಯಡಿಯೂರಪ್ಪ, ತಾನು ಕೇಸ್ ಅನ್ನು ಚೆಕ್ ಮಾಡಿದೆ ಎಂದು ಹೇಳಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






