ಬರ್ತ್ಡೇ ಪಾರ್ಟಿಗೆ ಎಣ್ಣೆ ಏಟಲ್ಲಿ ಹುಡುಗೀರ ಕಿಡ್ನಾಪ್! ಉತ್ತರ ಪ್ರದೇಶದಲ್ಲಿ ಪಡ್ಡೆ ಹೈಕ್ಳಿಗೆ ಖಾಕಿ ಕಿಕ್

ಬರ್ತ್ಡೇ ಪಾರ್ಟಿಗೆ ಎಣ್ಣೆ ಏಟಲ್ಲಿ ಹುಡುಗೀರ ಕಿಡ್ನಾಪ್! ಉತ್ತರ ಪ್ರದೇಶದಲ್ಲಿ ಪಡ್ಡೆ ಹೈಕ್ಳಿಗೆ ಖಾಕಿ ಕಿಕ್
ಹಣ, ಅಧಿಕಾರ, ತೋಳ್ಬಲದ ಹಮ್ಮು ಏನೆಲ್ಲಾ ದುಷ್ಕೃತ್ಯಗಳನ್ನ ಮಾಡಿಸುತ್ತೆ ಅನ್ನೋದಕ್ಕೆ ಇಲ್ಲೊಂದು ಅತ್ಯುತ್ತಮ ಉದಾಹರಣೆ ಇದೆ. ಈ ಘಟನೆ ಸಿನಿಮಾ ಹಾಗೂ ವೆಬ್ ಸಿರೀಸ್ಗಳ ದೃಶ್ಯವನ್ನ ನೆನಪು ಮಾಡುವಂತಿದೆ! ಉತ್ತರ ಪ್ರದೇಶ ರಾಜ್ಯದ ಕುಶಿ ನಗರದಲ್ಲಿ ನಡೆದ ಈ ಘಟನೆ, ಇದೀಗ ದುರಹಂಕಾರಿ ಸಿರಿವಂತ ಯುವಕರಿಗೆ ಪಾಠವನ್ನೂ ಕಲಿಸುವಂತಿದೆ!
ಕಳೆದ ಭಾನುವಾರ ರಾತ್ರಿ ಕುಶಿ ನಗರದ ಸಿರಿವಂತ ವ್ಯಕ್ತಿಯೊಬ್ಬನ ಮಗನಾದ ಅಜಿತ್ ಸಿಂಗ್ ಎಂಬಾತನ ಹುಟ್ಟು ಹಬ್ಬ ಇತ್ತು. ಈತನ ಹುಟ್ಟು ಹಬ್ಬದಂದು ‘ಎಣ್ಣೆ ಹೊಳೆ’ಯೇ ಹರಿದಿತ್ತು. ಒಟ್ಟು ಎಂಟು ಮಂದಿ ಪಡ್ಡೆಗಳ ಜೊತೆ ತನ್ನ ಬರ್ತ್ ಡೇ ಪಾರ್ಟಿ ಮಾಡುತ್ತಿದ್ದ ಅಜಿತ್ ಸಿಂಗ್ಗೆ ಯಾವನೋ ಒಬ್ಬ ಶಿಷ್ಯ ಸಖತ್ ಐಡಿಯಾ ಕೊಟ್ಟಿದ್ದ! ಈ ಐಡಿಯಾ ಕೇಳಿ ಅಜಿತ್ ಸಿಂಗ್ ರೋಮಾಂಚನಗೊಂಡಿದ್ದ! ನಿನ್ನ ಬರ್ತ್ ಡೇ ಪಾರ್ಟಿಗೆ ಡ್ಯಾನ್ಸರ್ಗಳು ಇದ್ದರೆ ಹೇಗೆ ಅನ್ನೋ ವಿಚಾರ ಕಿವಿಗೆ ಬಿದ್ದಿದ್ದೇ ತಡ, ಅಜಿತ್ ಸಿಂಗ್ ರಂಗಾಗಿದ್ದ. ಆದರೆ ನಡು ರಾತ್ರಿಯಾಗಿದೆ. ಇಂಥಾ ಹೊತ್ತಲ್ಲಿ ಹುಡುಗೀರು ಎಲ್ಲಿ ಸಿಗ್ತಾರೆ? ಹೀಗಂತಾ ಗೆಳೆಯನೊಬ್ಬ ಹೇಳಿದ್ದ ತಡ ಕೆಂಡಾಮಂಡಲವಾದ ಅಜಿತ್ ಸಿಂಗ್, ನಂಗೆ ಈಗ ಹುಡುಗೀರು ಬೇಕು ಅಂದ್ರೆ ಬೇಕು ಅಷ್ಟೇ ಅಂತಾ ಪಟ್ಟು ಹಿಡಿದ!
ಉತ್ತರ ಪ್ರದೇಶದ ಕುಶಿ ನಗರದಲ್ಲಿ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡುತ್ತಿದ್ದ ಯುವತಿಯರ ಕುರಿತಾಗಿ ಅಜಿತ್ ಸಿಂಗ್ನ ತಂಡದಲ್ಲಿ ಇದ್ದ ಕೆಲವರಿಗೆ ಮಾಹಿತಿ ಇತ್ತು. ಇವರು ನೀಡಿದ ಮಾಹಿತಿ ಆಧರಿಸಿ ಮಧ್ಯ ರಾತ್ರಿ ಎರಡು ಫಾರ್ಚ್ಯುನರ್ ಕಾರ್ಗಳಲ್ಲಿ ಈ ಪಡ್ಡೆ ಯುವಕರ ತಂಡ ಹೊರಟಿತು. ಯುವತಿಯರು ಇದ್ದ ಬಾಡಿಗೆ ಮನೆ ಸಿಕ್ಕಿದ್ದೇ ತಡ, ಬಂದೂಕು ಕೈನಲ್ಲಿ ಹಿಡಿದು ಬಾಗಿಲು ತಟ್ಟಿದರು. ಯುವತಿಯರು ಈ ಯುವಕರ ತಂಡದ ಜೊತೆಗೆ ಬರಲು ನಿರಾಕರಿಸಿದಾಗ ಗಾಳಿಯಲ್ಲಿ ಗುಂಡು ಹಾರಿಸಿದರು. ಅಕ್ಕ ಪಕ್ಕದ ಮನೆಯ ನಿವಾಸಿಗಳು ಅಡ್ಡಿ ಪಡಿಸಲು ಎದುರಾದಾಗ ಅವರಿಗೂ ಬಂದೂಕು ತೋರಿಸಿ ಎದುರಿಸಿದರು. ತಡ ಮಾಡದೆ ತಮ್ಮ ಟೊಯೋಟಾ ಫಾರ್ಚ್ಯುನರ್ ಕಾರ್ಗಳಲ್ಲಿ ಯುವತಿಯರನ್ನು ಕೂರಿಸಿಕೊಂಡು ಹೊರಟೇ ಬಿಟ್ಟರು.
ವಿಷಯ ಕಿವಿಗೆ ಬಿದ್ದಿದ್ದೇ ತಡ, ಯುವತಿಯರ ಮನೆಯ ಅಕ್ಕಪಕ್ಕದಲ್ಲಿ ಸಿಸಿಟಿವಿ ಪರಿಶೀಲಿಸಿದ ಪೊಲೀಸರು, ಕಾರುಗಳು ಯಾರಿಗೆ ಸೇರಿದ್ದು ಎಂದು ಪತ್ತೆ ಹಚ್ಚಿ ಆರೋಪಿ ಅಜಿತ್ ಸಿಂಗ್ ಮನೆಗೆ ಧಾವಿಸಿದರು. ಆತನ ಮನೆಯಲ್ಲಿ ಯುವಕರ ಬಲವಂತಕ್ಕೆ ನೃತ ಮಾಡುತ್ತಿದ್ದ ಇಬ್ಬರು ಯುವತಿಯರನ್ನು ರಕ್ಷಿಸಿದರು. ಒಟ್ಟು 8 ಮಂದಿ ಯುವಕರು ಅಲ್ಲಿದ್ದರು. ಈ ಪೈಕಿ ಪ್ರಮುಖ ಆರೋಪಿ ಅಜಿತ್ ಸಿಂಗ್ ಸೇರಿ 6 ಮಂದಿ ಪೊಲೀಸರಿಗೆ ಸೆರೆ ಸಿಕ್ಕರು. ಆದರೆ, ಇಬ್ಬರು ಯುವಕರು ಮಾತ್ರ ಪೊಲೀಸರಿಗೇ ಗುಂಡು ಹಾರಿಸಿ ಪರಾರಿಯಾದರು.
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






