ಭಾರತದಲ್ಲಿದ್ದೂ ಶತ್ರು ರಾಷ್ಟ್ರಕ್ಕೆ ಸಪೋರ್ಟ್ ಮಾಡುವ ತುಂಬಾ ಜನರಿದ್ದಾರೆ: ಬಿವೈ ವಿಜಯೇಂದ್ರ

ತುಮಕೂರು: ಭಾರತದಲ್ಲಿದ್ದೂ ಶತ್ರು ರಾಷ್ಟ್ರಕ್ಕೆ ಸಪೋರ್ಟ್ ಮಾಡುವ ತುಂಬಾ ಜನರಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ತುಮಕೂರಿನಲ್ಲಿ ಆಪರೇಷನ್ ಸಿಂಧೂರ್ ಯಶಸ್ವಿ ಹಿನ್ನೆಲೆ ನಡೆಸುತ್ತಿರುವ ಬೃಹತ್ ತಿರಂಗಾಯಾತ್ರೆಯಲ್ಲಿ ಮಾತನಾಡಿದ ಅವರು, ರಾಷ್ಟ್ರ ರಕ್ಷಣೆಗಾಗಿ ನಾಗರಿಕರಿಂದ ತಿರಂಗಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ.
ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರದಲ್ಲಿ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ. ತುಮಕೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಎನ್ಸಿಸಿ ವಿದ್ಯಾರ್ಥಿಗಳು, ಮಾಜಿ ಸೈನಿಕರು, ದೇಶ ಭಕ್ತರು ಸೇರಿ ತಿರಂಗಯಾತ್ರೆ ಯಶಸ್ವಿಯಾಗಿಸಿದ್ದಾರೆ. ರಾಜಕೀಯ ಕಾರಣಕ್ಕೆ ತಿರಂಗಯಾತ್ರೆ ಮಾಡುತ್ತಿಲ್ಲ. ಸೈನಿಕರಿಗೆ ನೈತಿಕ ಬೆಂಬಲ ನೀಡುವಂತೆ ಇಡೀ ರಾಷ್ಟ್ರದಲ್ಲಿ ಜಾಗೃತಿಗೊಳಿಸಬೇಕೆಂದು ಮಾಡುತ್ತಿದ್ದೇವೆ.
ಭಾರತದಲ್ಲಿದ್ದೂ ಶತ್ರು ರಾಷ್ಟ್ರಕ್ಕೆ ಸಪೋರ್ಟ್ ಮಾಡುವ ತುಂಬಾ ಜನರಿದ್ದಾರೆ. ರಾಜ್ಯಸಭಾ ಚುನಾವಣಾ ವೇಳೆ ವಿಧಾನಸೌಧದ ಒಳಗಡೆ ನಿಂತು ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ದೇಶದ್ರೋಹಿಗಳು ನಮ್ಮ ರಾಜ್ಯದಲ್ಲೂ ಇದ್ದಾರೆ. ಅಂಥಹ ದೇಶದ್ರೋಹಿಗಳನ್ನು ಹುಡುಕುವ ಕೆಲಸ ಆಗಬೇಕಿದೆ. ನರೇಂದ್ರ ಮೋದಿಯವರು ಆ ಕೆಲಸ ಮಾಡಿಯೇ ಮಾಡುತ್ತಾರೆ. ನಮ್ಮ ತಿರಂಗಯಾತ್ರೆ ಪಕ್ಷದ್ದಲ್ಲ, ಇದಕ್ಕೆ ರಾಜಕಾರಣ ಮಾಡಬಾರದು. ಬಿಜೆಪಿ ಪಕ್ಷದ ಬಾವುಟ, ಶಲ್ಯ ಇದರಲ್ಲಿ ಕಾಣ ಸಿಗುವುದಿಲ್ಲ. ಇದು ಪಕ್ಷಾತೀತ ತಿರಂಗಯಾತ್ರೆ ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






