ಯಾರದ್ದೋ ಜಮೀನು ಲಪಟಾಯಿಸಲು ಸುಪಾರಿ ನೀಡಿ ಕೊಲೆ: ಹತ್ಯೆ ಮಾಡಿ ಅಪಘಾತ ಅಂತಾ ಬಿಂಬಿಸಿದವರು ಲಾಕ್!

ಮಾರ್ಚ್ 11, 2025 - 10:47
 0  13
ಯಾರದ್ದೋ ಜಮೀನು ಲಪಟಾಯಿಸಲು ಸುಪಾರಿ ನೀಡಿ ಕೊಲೆ: ಹತ್ಯೆ ಮಾಡಿ ಅಪಘಾತ ಅಂತಾ ಬಿಂಬಿಸಿದವರು ಲಾಕ್!

ಬೆಳಗಾವಿ:- ಸಂಬಂಧ ಇಲ್ಲದ ಜಮೀನಿಗಾಗಿ ಸುಪಾರಿ ನೀಡಿ ಕೊಲೆ ಮಾಡಿ ಆ ಬಳಿಕ ಅಪಘಾತ ಅಂತಾ ಬಿಂಬಿಸಿದವರು ಇದೀಗ ಪೊಲೀಸರ ಅತಿಥಿ ಆಗಿದ್ದಾರೆ. 

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಟಕೋಳ ಗ್ರಾಮದಲ್ಲಿ 
ಈ ಘಟನೆ ಜರುಗಿದೆ.  ಸಣ್ಣರಾಮಪ್ಪ ಅತ್ತಾರ (65) ಕೊಲೆಯಾಗಿದ್ದ ವ್ಯಕ್ತಿ. ಫೆ.25ರಂದು ಕಟಕೋಳ ಹತ್ತಿರ ಬೈಕ್ ಮೇಲೆ ಬರುವ ವೇಳೆ ಓಮಿನಿ ವಾಹನ ಗುದ್ದಿ ಸಣ್ಣರಾಮಪ್ಪ ಸಾವನ್ನಪ್ಪಿದ್ದಾನೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಪೊಲೀಸರಿಗೆ ಅಪಘಾತವಾಗಿದ್ದ ಸ್ಥಿತಿ ಕಂಡು ಅನುಮಾನ ಮೂಡಿತ್ತು.

ತನಿಖೆ ನಡೆಸಿದಾಗ ಅಪಘಾತ ಅಲ್ಲಾ ಕೊಲೆ ಎಂಬುದು ಬಹಿರಂಗವಾಗಿದೆ. ಶಂಕರ್ ಜಾಧವ್ ಎಂಬಾತನಿಂದಲೇ ಸುಪಾರಿ ಕೊಟ್ಟು ಕೊಲೆ ನಡೆಸಿರುವುದು ಗೊತ್ತಾಗಿದೆ. ಕೊಲೆ ಮಾಡಿದ ಮತ್ತು ಕೊಲೆಯಾದ ವ್ಯಕ್ತಿಗೆ ಸಂಬಂಧ ಇಲ್ಲದ ಜಮೀನಿಗಾಗಿ ಕಿತ್ತಾಟ ನಡೆದಿದೆ. ಮಹಾರಾಷ್ಟ್ರ ಮೂಲದ ಘಾಟಗೆ ಎಂಬುವವರಿಗೆ ಈ ಜಮೀನು ಸೇರಿದ್ದು, 7ಎಕರೆ 2ಗುಂಟೆ ಜಮೀನನ್ನು ಆರೋಪಿ ಶಂಕರ್ ನೋಡಿಕೊಳ್ಳುತ್ತಿದ್ದ. ಪಾಲುದಾರಿಕೆಯಲ್ಲಿ ಮಾಡ್ತಿದ್ದ ಜಮೀನಿನ್ನೇ ಶಂಕರ್ ಲಪಟಾಯಿಸಲು ಮುಂದಾಗಿದ್ದ. ಈ ವಿಚಾರ ತಿಳಿದು ಮೃತ ಸಣ್ಣರಾಮಪ್ಪನಿಗೆ ಜಮೀನು ನೀಡಲು ಮೂಲ ಮಾಲೀಕ ಮುಂದಾಗಿದ್ದ. ಈ ವಿಚಾರ ಗೊತ್ತಾಗಿ ಸಣ್ಣರಾಮಪ್ಪ ಕೊಲೆಗೆ ಎರಡೂವರೆ ಲಕ್ಷಕ್ಕೆ ಶಂಕರ್ ಸುಪಾರಿ ನೀಡಿದ್ದ. ಚಿಕ್ಕೋಡಿಯಲ್ಲಿ ಮೆಸ್ ನಡೆಸುತ್ತಿದ್ದ ಸುಲ್ತಾನ್ ಕಿಲ್ಲೇದಾರ್ ಗೆ ಸುಪಾರಿ ಕೊಟ್ಟಿದ್ದ. ಒಂದೂವರೆ ಲಕ್ಷ ಹಣ ಮುಂಗಡ ನೀಡಿ ಕೊಲೆಗೆ ಶಂಕರ್ ಸೂಚಿಸಿದ್ದ. 

ಪಕ್ಕಾ ಪ್ಲ್ಯಾನ್ ಮಾಡಿ ಐದು ಜನರಿಂದ ಸಣ್ಣರಾಮಪ್ಪ ಕೊಲೆ ಮಾಡಲಾಗಿತ್ತು. ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಬಳಿಕ ಓಮಿನಿಯಿಂದ ಗುದ್ದಿಸಿ ಪರಾರಿಯಾಗಿದ್ದರು.ಓಮಿನಿ‌ ಓಡಾಡುವ ದೃಶ್ಯ ಗ್ರಾಮದ ಕೆಲ ಅಂಗಡಿ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅದರ ಆಧಾರದ ಮೇಲೆ ಬೆನ್ನು ಬಿದ್ದು ಆರೋಪಿಗಳನ್ನ  ಪೊಲೀಸರು ಪತ್ತೆ ಹಚ್ಚಿದ್ದಾರೆ. 

ಆರೋಪಿ ಶಂಕರ್ ಜಾಧವ್, ಸುಪಾರಿ ಪಡೆದ ಸುಲ್ತಾನ್ ಕಿಲ್ಲೇದಾರ್, ರಾಹುಲ್, ಟಿಪ್ಪು ಮುಜಾವರ್ ಬಂಧಿತರು. ಈ ಕುರಿತು ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow