ರೇಣುಕಾಸ್ವಾಮಿ ಕೊಲೆ ಪ್ರಕರಣ: ಬಳ್ಳಾರಿ ಸೆಂಟ್ರಲ್ ಜೈಲಿನಿಂದ ಹೊರ ಬಂದ ನಟ ದರ್ಶನ್.!

ಬಳ್ಳಾರಿ: ನಟ ದರ್ಶನ್ಗೆ ಮಧ್ಯಂತರ ಜಾಮೀನು ನೀಡಲಾಗಿದೆ. ದರ್ಶನ್ಗಿರುವ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ಚಿಕಿತ್ಸೆಗಾಗಿ ಜಾಮೀನು ನೀಡಲಾಗಿದ್ದು, ಆರು ವಾರಗಳಿಗೆ ಜಾಮೀನು ಅವಧಿ ಮುಕ್ತಾಯವಾಗಲಿದೆ. ಮಧ್ಯಂತರ ಜಾಮೀನು ಆದೇಶ ಇಂದು ಬೆಳಿಗ್ಗೆ ಹೊರಬಿದ್ದಿದ್ದು, ಇದೀಗ ನಟ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಕೋರ್ಟ್ ಜಾಮೀನು ಆದೇಶವನ್ನು ಬಳ್ಳಾರಿ ಸೆಂಟ್ರಲ್ ಜೈಲಿಗೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ಕಳುಹಿಸಲಾಗಿತ್ತು. ಇದರ ಬೆನ್ನಲ್ಲಿಯೇ ಸಂಜೆ 5.30ರ ವೇಳೆ ನಟ ದರ್ಶನ್ನನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ದರ್ಶನ್ ಜೈಲಿನಿಂದ ಹೊರಗೆ ಬರುವಾಗ ಎಲ್ಲ ಜಾಮೀನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಹೊರಗೆ ಬಂದಿದ್ದಾರೆ. ಆದರೆ, ಜೈಲಿನಿಂದ ಹೊರಗೆ ಬರುವಾಗ ಕುಂಟುತ್ತಾ ಬಂದಿದ್ದು, ಬೆನ್ನು ನೋವು ತೀವ್ರವಾಗಿ ಉಲ್ಬಣಗೊಂಡಿದೆ ಎಂಬ ಲಕ್ಷಣಗಳು ಕಂಡುಬರುತ್ತಿವೆ. ಇನ್ನು ದರ್ಶನ್ ಮನೆಗೆ ಹೋದ ನಂತರ ಒಂದು ವಾರದೊಳಗೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದರ ಬಗ್ಗೆ ಕೋರ್ಟ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಇನ್ನು ಬೆಂಗಳೂರಿನಲ್ಲಿಯೇ ಚಿಕಿತ್ಸೆ ಪಡೆಯುವುದಕ್ಕೆ ಸೂಚಿಸಲಾಗಿದೆ.
ಈ ಹಿಂದೆ 57 ಸಿಸಿಎಚ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಈ ಬಗ್ಗೆ ಅರ್ಜಿ ವಿಚಾರಣೆ ಮಾಡಿದ್ದ ಕೋರ್ಟ್ ಅರ್ಜಿ ವಜಾಗೊಳಿಸಿ ಜಾಮೀನು ನೀಡಿರಲಿಲ್ಲ. ಆದರೆ ಇದೀಗ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸದ್ಯ ದರ್ಶನ್ ಅವರಿಗೆ ಬೇಲ್ ಸಿಗುತ್ತಿದ್ದಂತೆ ಅವರ ಅಭಿಮಾನಿಗಳಿಗೆ ದೀಪಾವಳಿಯ ದೊಡ್ಡ ಉಡುಗೊರೆ ಸಿಕ್ಕಂತೆ ಆಗಿದ್ದು ಫುಲ್ ಖುಷ್ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






