ವಾಹನ ಸವಾರರೇ ಎಚ್ಚರ: ಇನ್ಮುಂದೆ ಫುಟ್ ಪಾತ್ ಮೇಲೆ ವಾಹನ ಚಲಾಯಿಸಿದ್ರೆ ಲೈಸೆನ್ಸ್ ರದ್ದು!

ಬೆಂಗಳೂರು: ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ವಾಹನಗಳ ಸಂಖ್ಯೆ ಹೆಚ್ಚಳದೊಂದಿಗೆ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಕೂಡಾ ಏರಿಕೆಯಾಗುತ್ತಿವೆ. ಹೀಗಾಗಿ ಟ್ರಾಫಿಕ್ ನಿಯಮ ಉಲ್ಲಂಘಿಸುವವರ ವಿರುದ್ದ ಪೊಲೀಸರು ಎಐ ಕ್ಯಾಮೆರಾ ಮೂಲಕ ದಂಡಾಸ್ತ್ರ ಪ್ರಯೋಗಿಸುತ್ತಿದ್ದು, ಜನರು ಮಾತ್ರ ಸಂಚಾರಿ ನಿಯಮ ಪಾಲನೆ ಮಾಡುತ್ತಿಲ್ಲ.ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಕೋಟ್ಯಾಂತರ ರೂ. ದಂಡ ಕಟ್ಟಿದರೂ ನಿಯಮ ಮಾತ್ರ ಪಾಲಿಸುತ್ತಿಲ್ಲ.
ಇದೀಗ ಬೆಂಗಳೂರು ಸಂಚಾರ ಪೊಲೀಸರು ಪಾದಚಾರಿ ಮಾರ್ಗಗಳಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದಾರೆ. ಮೊದಲ ಅಪರಾಧಕ್ಕೆ ದಂಡ ವಿಧಿಸಲಾಗುವುದು, ಪುನರಾವರ್ತಿತ ಅಪರಾಧಕ್ಕೆ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲಾಗುವುದು.
ಪಾದಚಾರಿಗಳ ಸುರಕ್ಷತೆಯನ್ನು ಖಾತ್ರಿಪಡಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪಾದಚಾರಿ ಮಾರ್ಗಗಳಲ್ಲಿ ವಾಹನ ಚಾಲನೆ ಮಾಡುವುದು ಅಪಾಯಕಾರಿ ಮತ್ತು ಕಾನೂನುಬಾಹಿರ ಎಂಬುದನ್ನು ಜನರು ಅರಿತುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಹೌದು ದಂಡಾಸ್ತ್ರಕ್ಕೂ ಜಗ್ಗದ ವಾಹನ ಸವಾರರ ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡಲು ತೀರ್ಮಾನಿಸಿದ್ದಾರೆ. ಪಾದಚಾರಿಗಳ ಸುರಕ್ಷತೆ ದೃಷ್ಠಿಯಿಂದ ಸಂಚಾರಿ ಪೊಲೀಸರು ಈ ನಿಯಮ ಜಾರಿಗೆ ತಂದಿದ್ದಾರೆ. ಈ ಹಿಂದೆ ಫುಟಪಾತ್ ಮೇಲೆ ಗಾಡಿ ಓಡಿಸಿದರೆ ಸಂಚಾರಿ ಪೊಲೀಸರು ದಂಡ ಹಾಕುತ್ತಿದ್ದರು. ದಂಡ ವಿಧಿಸಿದರೂ ವಾಹನ ಸವಾರರು ಮಾತ್ರ, ಜಗ್ಗದೆ ಮತ್ತೆ ತಮ್ಮ ಫುಟ್ಪಾತ್ ಮೇಲೆ ವಾಹನ ಚಲಾಯಿಸುತ್ತಿದ್ದಾರೆ.
ಹೀಗಾಗಿ, ಬೆಂಗಳೂರು ಸಂಚಾರಿ ಪೊಲೀಸ್ ಹಿರಿಯ ಅಧಿಕಾರಿಗಳು ಸಭೆ ನಡೆಸಿ, ಡ್ರೈವಿಂಗ್ ಲೈಸೆನ್ಸ್ ಅಮಾನತು ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಮೊದಲ ಬಾರಿಗೆ ದಂಡ ಹಾಕಲಾಗುತ್ತದೆ. ಮತ್ತೆ ಮತ್ತೆ ಸಿಕ್ಕಿಬಿದ್ದರೇ, ಆತನ ಲೈಸೆನ್ಸ್ ಅಮಾನತು ಮಾಡುವಂತೆ ಸಂಚಾರಿ ಪೊಲೀಸರು ಶಿಪಾರಸ್ಸು ಮಾಡುತ್ತಾರೆ. ಹೀಗಾಗಿ, ಇನ್ಮುಂದೆ ಫುಟ್ಪಾತ್ ಮೇಲೆ ಗಾಡಿ ಓಡಿಸುವ ಮುನ್ನ ಯೋಚಿಸಿ ಎಂದು ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






