ವಿಧಾನ ಪರಿಷತ್ಗೆ ನಾಲ್ವರು ನಾಮನಿರ್ದೇಶನ: ರಾಜ್ಯಪಾಲರ ಅಂಕಿತ, ಯಾರವರು?
ಬೆಂಗಳೂರು:-ಕರ್ನಾಟಕ ವಿಧಾನಪರಿಷತ್ ಗೆ ನಾಲ್ವರನ್ನು ನಾಮನಿರ್ದೇಶನ ಮಾಡಲು ಕೊನೆಗೂ ರಾಜ್ಯಪಾಲರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಖಾಲಿ ಇದ್ದ ನಾಲ್ಕು ಪರಿಷತ್ ಸ್ಥಾನಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಾಲ್ವರ ಹೆಸರನ್ನು ಫೈನಲ್ ಮಾಡಿ ಕಳಹಿಸಿತ್ತು. ಇದೀಗ ಇದಕ್ಕೆ ರಾಜ್ಯಪಾಲರಿಂದ ಅಧಿಕೃತ ಮುದ್ರೆ ಬಿದ್ದಿದೆ.
ಸುಮಾರು ಆರೇಳು ತಿಂಗಳ ಹಗ್ಗಜಗ್ಗಾಟದ ಬಳಿಕ ಕಾಂಗ್ರೆಸ್ ಸರ್ಕಾರ ನಾಲ್ಕು ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಿ ಅಧಿಸೂಚನೆ ಹೊರಡಿಸಿದೆ. ಪರಿಷತ್ ಸದಸ್ಯ ಸ್ಥಾನಕ್ಕೆ ಕೆಪಿಸಿಸಿ ಮಾಧ್ಯಮ ಘಟಕ ಅಧ್ಯಕ್ಷ ರಮೇಶ್ ಬಾಬು, ಎನ್ಆರ್ಐ ಸೆಲ್ ಮುಖ್ಯಸ್ಥೆ ಆರತಿ ಕೃಷ್ಣ, ಹುಬ್ಬಳ್ಳಿ - ಧಾರವಾಡ ದಲಿತ ಮುಖಂಡ ಜಕ್ಕಪ್ಪನವರ್ ಹಾಗೂ ಮೈಸೂರು ಮೂಲದ ಪತ್ರಕರ್ತ ಶಿವಕುಮಾರ್ ಹೆಸರನ್ನು ನಾಮನಿರ್ದೇಶನ ಮಾಡಲಾಗಿದೆ
ಚಿಕ್ಕಮಗಳೂರು ಜಿಲ್ಲೆಯ ಬೇಗಣೆ ಪೋಸ್ಟ್ನ ಗೋಪಾಲ ಎಂ ಕೃಷ್ಣ ಅವರ ಪತ್ನಿ ಡಾ. ಆರತಿ ಕೃಷ್ಣ ಅವರನ್ನು ಪರಿಷತ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಇವರು ಶೃಂಗೇರಿ ತಾಲೂಕಿನವರು. ಅವರ ಜೊತೆಗೆ, ಹುಬ್ಬಳ್ಳಿಯ ಹೆಗ್ಗೇರಿಯ ನಿವಾಸಿಯಾಗಿರುವ ಸ್ವಾತಂತ್ರ್ಯ ಹೋರಾಟಗಾರ ದಿ. ಹಣಮಪ್ಪ ಅವರ ಪುತ್ರ ಶ್ರೀ ಎಫ್. ಹೆಚ್. ಜಕ್ಕಪ್ಪನವರ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಮೈಸೂರಿನ ಶ್ರೀರಾಂಪುರದ ನಿವಾಸಿ ಎ. ಕೃಷ್ಣಪ್ಪ ಅವರ ಪುತ್ರ ಶಿವಕುಮಾರ್ ಕೆ ಅವರನ್ನು ಕಾಂಗ್ರೆಸ್ ಪಕ್ಷದಿಂದ ನಾಮನಿರ್ದೇಶನ ಮಾಡಲಾಗಿದೆ.
ಮೂರು ಹೊಸ ನಾಮನಿರ್ದೇಶನಗಳ ಜೊತೆಗೆ, ಬೆಂಗಳೂರಿನ ನಿವಾಸಿ ರಮೇಶ್ ಬಾಬು ಅವರನ್ನು ವಿಧಾನ ಪರಿಷತ್ತಿಗೆ ರಾಜ್ಯಪಾಲರು ನಾಮನಿರ್ದೇಶನ ಮಾಡಿದ್ದಾರೆ. ರಮೇಶ್ ಬಾಬು ಅವರ ಅಧಿಕಾರಾವಧಿ 2026 ಜುಲೈ 21ರ ವರೆಗೆ ಇರಲಿದೆ.
ಸಿಎಂ ಸಿದ್ದರಾಮಯ್ಯ ಎರಡು ವಾರಗಳ ಹಿಂದೆ ಈ ನಾಲ್ವರ ಹೆಸರನ್ನು ನಾಮನಿರ್ದೇಶಿಸುವಂತೆ ಕೋರಿ ರಾಜ್ಯಪಾಲರಿಗೆ ಕಳುಹಿಸಿಕೊಟ್ಟಿದ್ದರು. ರಾಜ್ಯಪಾಲರು ನಾಲ್ವರ ಹೆಸರಿಗೆ ಅನುಮೋದನೆ ನೀಡಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಯು.ಬಿ.ವೆಂಕಟೇಶ್, ಪ್ರಕಾಶ್ ರಾಥೋಡ್, ಕೆ.ಎ.ತಿಪ್ಪೇಸ್ವಾಮಿ, ಸಿ.ಪಿ.ಯೋಗೇಶ್ವರಿಂದ ತೆರವಾದ ಮೇಲ್ಮನೆ ಸ್ಥಾನಕ್ಕೆ ಈ ನಾಲ್ವರು ಅಭ್ಯರ್ಥಿಗಳನ್ನು ನಾಮನಿರ್ದೇಶಿಸಲಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?