ಶಿಕ್ಷಕರ ಕಿರುಕುಳ: ಹಾಸ್ಟೆಲ್’ನಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆ..! ಡೆತ್ ನೋಟ್’ನಲ್ಲಿತ್ತು ಸ್ಪೋಟಕ ಮಾಹಿತಿ

ನೊಯ್ಡಾ: ಗ್ರೇಟರ್ ನೊಯ್ಡಾದ ಶಾರದಾ ವಿಶ್ವವಿದ್ಯಾಲಯದ ಎರಡನೇ ವರ್ಷದ ದಂತ ಶಸ್ತ್ರಚಿಕಿತ್ಸೆ (ಬಿಡಿಎಸ್) ವಿದ್ಯಾರ್ಥಿನಿ, ಮಹಿಳಾ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಕೆಗೆ ಇಬ್ಬರು ಅಧ್ಯಾಪಕರು ಮಾನಸಿಕ ಕಿರುಕುಳ ನೀಡಿದ ಎಂಬ ಆರೋಪ ಕೇಳಿಬಂದಿದೆ.ಘಟನೆ ಕುರಿತು ಗೌತಮ್ ಬುದ್ಧ ನಗರ (ನಾಲೆಡ್ಜ್ ಪಾರ್ಕ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳು ವಿಚಾರಣೆಯನ್ನು ಆರಂಭಿಸಿದ್ದಾರೆ.
ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೆ, ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆಗಳು ಭುಗಿಲೆದ್ದಿವೆ. ಘಟನೆಗೆ ಸಂಬಂಧಿಸಿದಂತೆ, ಶಾರದಾ ವಿಶ್ವವಿದ್ಯಾಲಯದ ಇಬ್ಬರು ಸಿಬ್ಬಂದಿ – ಮಹಿಂದರ್ ಮತ್ತು ಶೈರಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆ ಸ್ಥಳದಿಂದ ಒಂದು ಸೂಸೈಡ್ ನೋಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಆ ಯುವತಿ ತನ್ನ ಶಿಕ್ಷಕರ ಮೇಲೆ ಕಿರುಕುಳ ಮತ್ತು ಅವಮಾನದ ಆರೋಪ ಮಾಡಿದ್ದಾರೆ. ತನ್ನ ಸೂಸೈಡ್ ನೋಟ್ನಲ್ಲಿ, ಪಿಸಿಪಿ ಮತ್ತು ಡೆಂಟಲ್ ಮೆಟೀರಿಯಲ್ಸ್ನ ಶಿಕ್ಷಕರು ತನ್ನ ಸಾವಿಗೆ ಕಾರಣರಾಗಿದ್ದಾರೆ. ಅವರು ತನಗೆ ಮಾನಸಿಕ ಕಿರುಕುಳ ನೀಡಿ, ಅವಮಾನ ಮಾಡಿದ್ದಾರೆ. ಇದರಿಂದಾಗಿ ಒತ್ತಡ ಉಂಟಾಗಿದೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.
ತನ್ನ ಸಾವಿಗೆ ಅವರೇ ಕಾರಣ. ಅವರೇ ಇದರ ಪರಿಣಾಮಗಳನ್ನು ಎದುರಿಸಬೇಕು ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಈ ಘಟನೆಯ ನಂತರ, ಕಾಲೇಜು ಅಧಿಕಾರಿಗಳಿಂದ ಹೊಣೆಗಾರಿಕೆಯನ್ನು ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಕ್ಯಾಂಪಸ್ನಲ್ಲಿ ಉದ್ವಿಗ್ನತೆ ಹೆಚ್ಚಾಯಿತು. ಪೊಲೀಸ್ ಸಿಬ್ಬಂದಿ ಮತ್ತು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ನಡುವೆ ಬಿಸಿ ಮಾತಿನ ಚಕಮಕಿಯೂ ನಡೆಯಿತು. ವಿದ್ಯಾರ್ಥಿಯ ಕುಟುಂಬ ಸಲ್ಲಿಸಿದ ದೂರಿನ ಆಧಾರದ ಮೇಲೆ, ಪೊಲೀಸರು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣವು ಪ್ರಸ್ತುತ ತನಿಖೆಯಲ್ಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






