ಸತತ ಸೋಲು: ಗಂಭೀರ್ ಹುದ್ದೆ ಮೇಲೆ ತೂಗುಗತ್ತಿ! ಯಾರಾಗ್ತಾರೆ ಮುಂದಿನ ಟೀಮ್ ಇಂಡಿಯಾ ಕೋಚ್!?

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡವು 10 ವರ್ಷಗಳ ನಂತರ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಸೋತಿದ್ದಕ್ಕೆ ಹಲವು ಕಾರಣಗಳಿವೆ.
ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಗರಡಿಯಲ್ಲಿ ಭಾರತ ತಂಡವು ಈವರೆಗೆ 23 ಪಂದ್ಯಗಳನ್ನಾಡಿದೆ. ಈ ಇಪ್ಪತ್ತಮೂರು ಪಂದ್ಯಗಳಲ್ಲಿ ಭಾರತ ತಂಡದ ಪ್ರದರ್ಶನ ಅಷ್ಟಕ್ಕಷ್ಟೇ. ಏಕೆಂದರೆ ಗಂಭೀರ್ ಮುಂದಾಳತ್ವದಲ್ಲಿ ಟೀಮ್ ಇಂಡಿಯಾ ಟಿ20 ಪಂದ್ಯಗಳಲ್ಲಿ ಮಿಂಚಿದರೂ, ಟೆಸ್ಟ್ ಹಾಗೂ ಏಕದಿನ ಸರಣಿಗಳಲ್ಲಿ ಮುಗ್ಗರಿಸಿದೆ. ಅದರಲ್ಲೂ ಹೀನಾಯ ಸೋಲುಗಳಿಗೆ ಕೊರೊಳೊಡ್ಡಿವೆ.
ರಾಹುಲ್ ದ್ರಾವಿಡ್ ಬಳಿಕ ಭಾರತದ ಕೋಚ್ ಹುದ್ದೆ ಅಲಂಕರಿಸಿರುವ ಗೌತಮ್ ಗಂಭೀರ್, ತಂಡವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಿಲ್ಲ ಎಂಬುದು ಅಂಕಿ ಅಂಶಗಳಿಂದ ತಿಳಿದು ಬರುವ ಸಂಗತಿ. ಗಂಭೀರ್ ಕೋಚ್ ಆದ ಬಳಿಕ ಭಾರತ 10 ಟೆಸ್ಟ್ ಆಡಿದ್ದು, ಕೇವಲ 3ರಲ್ಲಿ ಗೆದ್ದಿದೆ. ಇದರಲ್ಲಿ 2 ಟೆಸ್ಟ್ ಬಾಂಗ್ಲಾ ವಿರುದ್ಧ. ತಂಡ ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ 6 ಟೆಸ್ಟ್ ಸೋತಿದೆ. ಇನ್ನು, ಏಕದಿನದಲ್ಲಿ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲೂ ಗೆಲುವಿಲ್ಲ.
ಹುದ್ದೆ ಅಲಂಕರಿಸಿ ಕೆಲ ತಿಂಗಳಷ್ಟೇ ಆಗಿದ್ದರೂ, ಸದ್ಯ ಗಂಭೀರ್ ಸ್ಥಾನ ತೂಗುಯ್ಯಾಲೆಯಲ್ಲಿದೆ. ಸದ್ಯಕ್ಕೆ ಅವರ ಸ್ಥಾನದ ಬಗ್ಗೆ ಬಿಸಿಸಿಐ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೂ, ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಗಂಭೀರ್ ಪಾಲಿಗೆ ನಿರ್ಣಾಯಕ ಎನಿಸಿಕೊಂಡಿದೆ. ಒಂದು ವೇಳೆ ತಂಡ ಚಾಂಪಿಯನ್ಸ್ ಟ್ರೋಫಿಯಲ್ಲೂ ಭಾರತ ಕಳಪೆ ಪ್ರದರ್ಶನ ನೀಡಿದ್ದರೆ ಗಂಭೀರ್ರನ್ನು ಕೆಳಗಿಳಿಸಿ ಬೇರೊಬ್ಬ ಕೋಚ್ ನೇಮಿಸಲು ಬಿಸಿಸಿಐ ಚಿಂತಿಸುತ್ತಿದೆ ಎನ್ನಲಾಗಿದೆ.
ಸರಣಿ ಸೋಲಿನ ಬಳಿಕ ಭಾರತದ ಆಟಗಾರರ ಪ್ರದರ್ಶನದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೋಚ್ ಗೌತಮ್ ಗಂಭೀರ್, ರಣಜಿ ಟ್ರೋಫಿ ಆಡುವಂತೆ ತಂಡದ ಎಲ್ಲ ಆಟಗಾರರಿಗೂ ತಾಕೀತು ಮಾಡಿದ್ದಾರೆ.
ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಂದಿನ 5 ತಿಂಗಳಲ್ಲಿ ಏನಾಗಲಿದೆ ಎಂಬುದರ ಬಗ್ಗೆ ಈಗಲೇ ಏನೂ ಹೇಳಲು ಆಗಲ್ಲ. 5 ತಿಂಗಳಲ್ಲೇ ಸಾಕಷ್ಟು ಬದಲಾವಣೆ ಆಗಬಹುದು. ಜುಲೈನ ಇಂಗ್ಲೆಂಡ್ ವಿರುದ್ಧ ಸರಣಿಗೂ ಮುನ್ನ ಏನಾಗಲಿದೆ ನೋಡೋಣ’ ಎಂದರು.
ನಿಮ್ಮ ಪ್ರತಿಕ್ರಿಯೆ ಏನು?






