ಸ್ಟಾರ್ ನಟರಿಗೆ ಆ್ಯಕ್ಷನ್ ಕಟ್ ಹೇಳಿದ್ದ ಖ್ಯಾತ ನಿರ್ದೇಶಕರಿಗೆ ಅನಾರೋಗ್ಯ: ಚಿಕಿತ್ಸೆಗೆ ದುಡ್ಡಿಲ್ಲದೆ ನರಳಾಟ!

ಮನುಷ್ಯ ಇವತ್ತು ಚೆನ್ನಾಗಿದ್ದು, ನಾಳೆ ಈಗೆ ಇರ್ತಾನೆ ಅಂತ ಹೇಳೋಕಾಗಲ್ಲ. ಏಕೆಂದರೆ ನಾಳೆ ಅನ್ನೋದು ಏನು ಬೇಕಾದ್ರೂ ಆಗಬಹುದು. ಬಡವ ಶ್ರೀಮಂತನಾಗಬಹುದು.. ಶ್ರೀಮಂತ ಬಡವನಾಗಬಹುದು. ಇದೀಗ ಅಂತದ್ದೇ ಪರಿಸ್ಥಿತಿ ಖ್ಯಾತ ನಿರ್ದೇಶಕರಿಗೆ ಬಂದಿದೆ.
ಹ್ಯಾಟ್ರಿಕ್ ಹೀರೋ, ಶಿವರಾಜ್ ಕುಮಾರ್ ನಟನೆಯ ‘ಸಂತ’, ಉಪೇಂದ್ರ ನಟನೆಯ ‘ನಾಗರಹಾವು’ ಸಿನಿಮಾಗಳ ನಿರ್ದೇಶಕ ಎಸ್ ಮುರಳಿ ಮೋಹನ್ ಅವರಿಗೆ ಅನಾರೋಗ್ಯ ಉಂಟಾಗಿದ್ದು, ತಮ್ಮ ಚಿಕಿತ್ಸೆಗೆ ಹಣಕಾಸಿನ ಅಗತ್ಯವಿದ್ದು ನೆರವಿಗಾಗಿ ಮನವಿ ಮಾಡಿದ್ದಾರೆ.
ಬಹಿರಂಗ ಪತ್ರ ಬರೆದಿರುವ ನಿರ್ದೇಶಕ ಎಸ್ ಮುರಳಿ ಮೋಹನ್, ‘ನಾನು ಕಳೆದ 36 ವರ್ಷಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಿನಿಮಾ ನಿರ್ದೇಶಕನಾಗಿ, ಸಂಭಾಷಣೆಕಾರನಾಗಿ, ಗೀತ ರಚನೆಕಾರನಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ 2018 ರಿಂದಲೂ ಆರೋಗ್ಯ ಸಮಸ್ಯೆ ಇದೆ. ಮೂತ್ರಪಿಂಡ ವೈಫಲ್ಯ ಉಂಟಾದ ವಾರಕ್ಕೆ ಮೂರು ದಿನ ಡಯಾಲಿಸಿಸ್ ಮಾಡಿಸುತ್ತಿದ್ದೇನೆ. 2020ರಲ್ಲಿ ನಾನು ಮೂತ್ರಪಿಂಡಕ್ಕಾಗಿ ಅಂಗಾಗ ಕಸಿ ಕಾರ್ಯಕ್ರಮ ಜೀವನಸಾರ್ಥಕತೆಯಲ್ಲಿ ನೊಂದಣಿ ಮಾಡಿಸಿದ್ದೇನೆ. ಈಗ ನನಗೆ ಮೂತ್ರಪಿಂಡ ಕಸಿ ಮಾಡಿಸುವ ಸಮಯ ಬಂದಿದೆ. ಬೆಂಗಳೂರಿನ ಜೆಸಿ ನಗರದಲ್ಲಿರುವ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ’ ಎಂದಿದ್ದಾರೆ.
ಈ ಶಸ್ತ್ರಚಿಕಿತ್ಸೆಗೆ 25 ಲಕ್ಷ ರೂಪಾಯಿಗಳು ಅಗತ್ಯವಿದೆ. ನಾನು ಈಗಾಗಲೇ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಇತರೆ ಚಿಕಿತ್ಸೆಗಳು ಮಾಡಿಸಿಕೊಂಡಿರುವ ಕಾರಣ ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ. ತಾವುಗಳು ದಯಮಾಡಿ ನನಗೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಧನ ಸಹಾಯ ಮಾಡಬೇಕಾಗಿ ತಮ್ಮಲ್ಲಿ ವಿನಮ್ರವಾಗಿ ಪ್ರಾರ್ಥಿಸುತ್ತೇನೆ’ ಎಂದು ಪತ್ರದಲ್ಲಿ ಬರೆದು ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಎಸ್ ಮುರಳಿ ಮೋಹನ್ ನೀಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






