ಭೋಪಾಲ್:- ಮಧ್ಯಪ್ರದೇಶದ ಇಂದೋರ್ನ ಮಲ್ಹರ್ಗಂಜ್ನಲ್ಲಿ ಹಣದ ಆಸೆಗಾಗಿ ಮೊಮ್ಮಗನೊಬ್ಬ ಅಜ್ಜಿಯನ್ನು ಕೊಂದು ಬೆಡ್ನ ಬಾಕ್ಸ್ನಲ್ಲಿ ಬಚ್ಚಿಟ್ಟ ಘಟನೆ ಜರುಗಿದೆ. 65 ವರ್ಷದ ಶಾಂತಿ ಧನಂಜಯ್ ಕೊಲೆಯಾದ ವೃದ್ಧೆ. ವಿಕಾಸ್ ಗೌಹರ್ (28) ಕೊಲೆ ಮಾಡಿದ ಮೊಮ್ಮಗ ಎಂದು ಗುರುತಿಸಲಾಗಿದೆ.
ಶಾಂತಿ ನಿವೃತ್ತ ಪೌರ ಕಾರ್ಮಿಕರಾಗಿದ್ದರು. ಮೊಮ್ಮಗ ವಿಕಾಸ್ ಕುಡಿತದ ಚಟಕ್ಕೆ ಒಳಗಾಗಿದ್ದ. ಇದರಿಂದ ಬೇಸತ್ತು ಆತನ ಹೆಂಡತಿ, ಇಬ್ಬರು ಮಕ್ಕಳು ಹಾಗೂ ವಿಕಾಸ್ನನ್ನು ತೊರೆದಿದ್ದಳು.
ಪಿಂಚಣಿ ಹಣವನ್ನು ಅವಲಂಬಿಸಿದ್ದ ವೃದ್ಧೆ, ವಿಕಾಸ್ನ 7 ವರ್ಷದ ಹಾಗೂ 5 ವರ್ಷದ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.
ಮಾದಕ ವ್ಯಸನದಿಂದ ಬಳಲುತ್ತಿದ್ದ ವಿಕಾಸ್, ನಿರುದ್ಯೋಗಿಯಾಗಿದ್ದ. ಅಲ್ಲದೇ ವೃದ್ಧೆಯ ಬಳಿ ಬಂದು ಪದೇಪದೇ ಹಣ ನೀಡುವಂತೆ ಪೀಡಿಸುತ್ತಿದ್ದ. ಬುಧವಾರ ರಾತ್ರಿಯೂ ಮದ್ಯ ಖರೀದಿಗೆ ಹಣ ನೀಡುವಂತೆ ವೃದ್ಧೆ ಬಳಿ ಕೇಳಿದ್ದ. ಇದಕ್ಕೆ ವೃದ್ಧೆ ನಿರಾಕರಿಸಿದ್ದಳು. ಈ ವೇಳೆ ಮಕ್ಕಳು ಮಲಗಿರುವುದನ್ನು ಗಮನಿಸಿದ ವಿಕಾಸ್, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದ.
ಬಳಿಕ ವೃದ್ಧೆಯ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಬೆಡ್ನ ಬಾಕ್ಸ್ನಲ್ಲಿ ಬಚ್ಚಿಟ್ಟಿದ್ದ. ಬಳಿಕ ವಿಕಾಸ್ ತಾಯಿ, ವೃದ್ಧೆಯ ಬಗ್ಗೆ ವಿಚಾರಿಸಿದಾಗ ವಿಕಾಸ್ ಹಾರಿಕೆಯ ಉತ್ತರಗಳನ್ನು ನೀಡಿದ್ದ. ಇದರಿಂದ ಅನುಮಾನಗೊಂಡ ವಿಕಾಸ್ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಮನೆಗೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ, ಕೋಣೆಯಲ್ಲಿ ಬೆಡ್ ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿತ್ತು. ಇದರಿಂದ ಅನುಮಾನಗೊಂಡ ಪೊಲೀಸರು, ಬೆಡ್ ಬಾಕ್ಸ್ ತೆರೆದಾಗ ವೃದ್ಧೆಯ ಶವ ಪತ್ತೆಯಾಗಿದೆ.