ಹೆಣ್ಣು ನೋಡಲು ಸ್ಟಡಿಯಾಗಿ ಹೋದ ತ್ರಿವಿಕ್ರಂ: ಬಿಗ್ ಬಾಸ್ ನಿಂದ ಹೊರಬಂದ್ಮೇಲೆ ಸಿಕ್ತು ಲಕ್!

ಬಿಗ್ ಬಾಸ್ ಕನ್ನಡ 11ರ ಮೂಲಕ ಕನ್ನಡಿಗರ ಮನೆ ಮನಗಳನ್ನು ತ್ರಿವಿಕ್ರಮ್ ತಲುಪಿದ್ದರು. ಬಿಗ್ ಬಾಸ್ನಲ್ಲಿ ಕಪ್ ಗೆಲ್ಲುವ ಫೇವರಿಟ್ ಸ್ಪರ್ಧಿಯೂ ಎನಿಸಿಕೊಂಡಿದ್ದರು. ಆದರೆ, ರನ್ನರ್ ಅಪ್ ಸ್ನಾನಕ್ಕೆ ತೃಪ್ತಿಪಟ್ಟರು. ಇದೀಗ ಇದೇ ತ್ರಿವಿಕ್ರಮ್ ಬಿಗ್ ಬಾಸ್ ಬಳಿಕ ಏನ್ಮಾಡ್ತಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು.
ಬಿಗ್ ಬಾಸ್ ಕನ್ನಡ ಸೀಸನ್ 11’ ರನ್ನರ್ ಅಪ್ ತ್ರಿವಿಕ್ರಂ ಅವರು ಒಂದೊಳ್ಳೆಯ ಅವಕಾಶಕ್ಕಾಗಿ ಕಾಯುತ್ತಾ ಇದ್ದರು. ‘ಬಿಗ್ ಬಾಸ್’ನಿಂದ ಬದುಕು ಬದಲಾಗುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡಿದ್ದರು. ಕೊನೆಗೂ ಅದು ನಿಜವಾಗಿದೆ. ಅವರಿಗೆ ಹೊಸ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸೋ ಅವಕಾಶ ಸಿಕ್ಕಿದೆ. ಇದರ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದಕ್ಕೆ ಭರ್ಜರಿ ಲೈಕ್ಸ್ಗಳು ಸಿಕ್ಕಿವೆ. ಫ್ಯಾನ್ಸ್ ನಾನಾ ರೀತಿಯಲ್ಲಿ ಇದಕ್ಕೆ ಕಮೆಂಟ್ ಮಾಡುತ್ತಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರ ಕಂಡಿದ್ದ ‘ಪದ್ಮಾವತಿ’ ಹೆಸರಿನ ಸೀರಿಯಲ್ನಲ್ಲಿ ತ್ರಿವಿಕ್ರಂ ಅವರು ನಟಿಸಿದ್ದರು. ಇದರಲ್ಲಿ ಕಥಾ ನಾಯಕನ ಪಾತ್ರ ಮಾಡಿದ್ದರು. ಆ ಬಳಿಕ ಅವರಿಗೆ ಹೆಚ್ಚು ಆಫರ್ಗಳು ಬಂದಿರಲಿಲ್ಲ. ಬಿಗ್ ಬಾಸ್ಗೆ ಬಂದ ಬಳಿಕ ಸಿನಿಮಾ ಅಥವಾ ಸೀರಿಯಲ್ಗಳಲ್ಲಿ ನಟಿಸೋಕೆ ಅವಕಾಶ ಸಿಗಬಹುದು ಎಂದು ಅವರು ಅಂದುಕೊಂಡಿದ್ದರು. ಅದು ನಿಜವಾಗಿದೆ.
ಕಲರ್ಸ್ ಕನ್ನಡದಲ್ಲಿ ಶೀಘ್ರವೇ ‘ಮುದ್ದು ಸೊಸೆ’ ಹೆಸರಿನ ಸೀರಿಯಲ್ ಪ್ರಸಾರ ಕಾಣಲಿದೆ. ಇದಕ್ಕೆ ತ್ರಿವಿಕ್ರಂ ಅವರು ಹೀರೋ ಆಗಿ ಆಯ್ಕೆ ಆಗಿದ್ದಾರೆ. ಕಥಾ ನಾಯಕಿ ವಿದ್ಯಾ ಇನ್ನೂ ಶಿಕ್ಷಣ ಪಡೆಯುತ್ತಿರುವ ಹುಡುಗಿ. ಸ್ಕೂಲ್ನಲ್ಲಿ ಆಕೆಯೇ ನಂಬರ್ 1. ಒಂದಿನ ಅಜ್ಜಿಗೆ ಅನಾರೋಗ್ಯ ಆಗಿದೆ ಎಂದು ಆಕೆಯನ್ನು ಶಾಲೆಯಿಂದ ಕರೆಸುತ್ತಾರೆ. ಮನೆಗೆ ಬಂದು ನೋಡಿದರೆ ಹೆಣ್ಣು ನೋಡುವ ಶಾಸ್ತ್ರಕ್ಕೆ ತಯಾರಿ ನಡೆಯುತ್ತಾ ಇರುತ್ತದೆ.
ವಿದ್ಯಾನ ನೋಡೋಕೆ ಬರೋದು ಕಥಾ ನಾಯಕನ ಪಾತ್ರದಲ್ಲಿರೋ ತ್ರಿವಿಕ್ರಂ. ವಿದ್ಯಾಗೆ ಡಾಕ್ಟರ್ ಆಗಬೇಕು ಎಂಬ ಆಸೆ. ಆದರೆ, ಮದುವೆ ಬಳಿಕೆ ಆಕೆಯನ್ನು ಶಾಲೆಗೆ ಕಳಿಸೋದು ಬೇಡ ಎಂಬ ನಿರ್ಧಾರಕ್ಕೆ ಎಲ್ಲರೂ ಬರುತ್ತಾರೆ. ಮುಂದೇನಾಗುತ್ತದೆ ಎಂಬುದು ಧಾರಾವಾಹಿಯ ಕಥೆ. ಸದ್ಯ ಪ್ರೋಮೋ ರಿಲೀಸ್ ಆಗಿದ್ದು, ಮುಂದಿನ ದಿನಗಳಲ್ಲಿ ಧಾರಾವಾಹಿಯ ಪ್ರಸಾರ ದಿನಾಂಕದ ಬಗ್ಗೆ ವಿವರ ಸಿಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






