ಅಧಿಕಾರದ ಮದದಲ್ಲಿ ಜನಪ್ರತಿನಿಧಿ ಅನ್ನೋದನ್ನು ಮರೆಯಬೇಡಿ: ಪ್ರಿಯಾಂಕ ಖರ್ಗೆಗೆ ಅಶೋಕ್ ತಿರುಗೇಟು!

ಬೆಂಗಳೂರು:- ಅಧಿಕಾರದ ಮದದಲ್ಲಿ ಜನಪ್ರತಿನಿಧಿ ಅನ್ನೋದನ್ನು ಮರೆಯಬೇಡಿ ಎಂದು ಹೇಳುವ ಮೂಲಕ ಸಚಿವ ಪ್ರಿಯಾಂಕ ಖರ್ಗೆಗೆ ವಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ಕೊಟ್ಟಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅಶೋಕ್, ಬಿಜೆಪಿ ನಾಯಕರ ಹಳೆಯ ಹೇಳಿಕೆಗಳು, ಅವುಗಳಿಗೆ ಸಂಬಂಧಿಸಿದ ವಿಡಿಯೋ ತುಣುಕಗಳನ್ನೇ ಮುಂದಿಟ್ಟುಕೊಂಡು ವಾಗ್ದಾಳಿ ನಡೆಸುತ್ತಿದ್ದ ಸಚಿವ ಪ್ರಿಯಾಂಕ್ ಖರ್ಗೆಗೆ ಅದೇ ಧಾಟಿಯಲ್ಲಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.
ರಿಪಬ್ಲಿಕ್ ಆಫ್ ಕಲಬುರ್ಗಿಯ ನಿಜಾಮ ಜನಾಬ್ ಪ್ರಿಯಾಂಕ್ ಖರ್ಗೆ ಅವರು ಹೊರಡಿಸಿರುವ ಫತ್ವಾ ಏನು ಅಂತ ಒಮ್ಮೆ ಕೇಳಿ: “ಖರ್ಗೆ ಕುಟುಂಬದವರು ಮನಸ್ಸು ಮಾಡಿದರೆ ಬಿಜೆಪಿ ಕಾರ್ಯಕರ್ತರು ಕಲಬುರ್ಗಿ ಜಿಲ್ಲೆಗೆ ಕಾಲು ಇಡುವುದಕ್ಕೂ ಬಿಡುವುದಿಲ್ಲವಂತೆ!” ಜನಾಬ್ ಪ್ರಿಯಾಂಕ್ ಖರ್ಗೆ ಅವರೇ, ಎರಡು ಬಾರಿ ಸಚಿವರಾದ ಮಾತ್ರಕ್ಕೆ ತಾವು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗಿಂತ ದೊಡ್ಡವರೂ ಅಂದುಕೊಂಡು ಬಿಟ್ಟಿದ್ದೀರಾ? ಅಂಬೇಡ್ಕರ್ ಅವರ ಸಂವಿಧಾನ ಕಲಬುರ್ಗಿಯಲ್ಲಿ
ಅನ್ವಯ ಆಗುವುದಿಲ್ಲವೇ? ಅಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕುಗಳು ಸಿಗುವುದಿಲ್ಲವೇ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ತಾವೂ ನಿಜಾಮರೂ ಅಲ್ಲ, ತಮ್ಮ ಹಿಂಬಾಲಕರು ರಜಾಕರರೂ ಅಲ್ಲ. ಅಧಿಕಾರದ ಮದದಲ್ಲಿ ಮೈಮರೆತು ತಾವೂಬ್ಬ ಜನಪ್ರತಿನಿಧಿ, ಜನಸೇವಕ ಅನ್ನೋದನ್ನು ಮರೆಯಬೇಡಿ ಎಂದು ಅಶೋಕ್ ಕಿಡಿಕಾರಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






