ಕೊಹ್ಲಿ ಮತ್ತೆ RCB ಜೆರ್ಸಿ ತೊಡೊಲ್ವಾ? ಈ ಅನುಮಾನ ಹೆಚ್ಚಾಗಲು ಇಲ್ಲಿದೆ ಅಸಲಿ ಕಾರಣಗಳು!
ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಈ ವಾರ ದೊಡ್ಡ ಶಾಕ್ ನೀಡಿದ್ದಾರೆ. ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ, ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಒಪ್ಪಂದವನ್ನು ತಿರಸ್ಕರಿಸಿದ್ದಾರೆಯೆಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ಸತ್ಯವೋ ಸುಳ್ಳೋ ಎನ್ನುವುದು ಇನ್ನೂ ಸ್ಪಷ್ಟವಾಗದಿದ್ದರೂ, ಕ್ರಿಕೆಟ್ ಅಭಿಮಾನಿಗಳಲ್ಲಿ ಆತಂಕ ಹೆಚ್ಚಿಸಿದೆ.
18 ವರ್ಷಗಳ ಬಳಿಕ ಐಪಿಎಲ್ ಟ್ರೋಫಿ ಗೆದ್ದ ಸಂಭ್ರಮದಲ್ಲಿದ್ದ ಆರ್ಸಿಬಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭರ್ಜರಿ ಆಚರಣೆ ನಡೆಸಿತ್ತು. ಆದರೆ ಅಂದು ನಡೆದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದರು. ಆ ಘಟನೆಯ ನಂತರ ವಿರಾಟ್ ಕೊಹ್ಲಿ ಬಹಳ ಮೌನವಾಗಿದ್ದು, ಇತ್ತೀಚೆಗೆ ಮಾಧ್ಯಮಗಳಿಂದ ದೂರ ಉಳಿದಿದ್ದಾರೆ.
ಮೂಲಗಳ ಪ್ರಕಾರ, ಕೊಹ್ಲಿ ಆರ್ಸಿಬಿ ತಂಡವನ್ನು ತೊರೆಯುವ ವಿಚಾರ ನಿಜಕ್ಕೂ ಸತ್ಯಕ್ಕೆ ಹತ್ತಿರವಾಗಿದೆ. ಕ್ರಿಕೆಟ್ ಮೇಲಿನ ಆಸಕ್ತಿ ನಿಧಾನವಾಗಿ ಕಡಿಮೆಯಾಗುತ್ತಿರುವುದಲ್ಲದೆ, ವೈಯಕ್ತಿಕ ಜೀವನಕ್ಕೂ ಹೆಚ್ಚು ಸಮಯ ನೀಡುವ ಚಿಂತನೆದಲ್ಲಿದ್ದಾರಂತೆ. 2008ರಿಂದಲೂ ಆರ್ಸಿಬಿಯೊಂದಿಗೇ ಇದ್ದ ವಿರಾಟ್ ಕೊಹ್ಲಿ, ತಂಡದ ಲಾಯಲ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದರು.
ಐಪಿಎಲ್ ಸೀಸನ್ 18ರಲ್ಲಿ ಕೊಹ್ಲಿಯ ಕನಸು ನನಸಾಗಿ, ಆರ್ಸಿಬಿ ತನ್ನ ಮೊದಲ ಟ್ರೋಫಿ ಗೆದ್ದಿತ್ತು. ಈಗ ತನ್ನ ಗುರಿ ಸಾಧಿಸಿದ್ದರಿಂದ, ಕೊಹ್ಲಿ ತಂಡಕ್ಕೆ ಗುಡ್ಬೈ ಹೇಳಲು ಕಾರಣವಿರಬಹುದು ಎಂದು ಊಹಿಸಲಾಗಿದೆ.
ಟ್ರೋಫಿ ಗೆದ್ದ ಸಂಭ್ರಮದ ದಿನದಲ್ಲೇ ನಡೆದ ದುರ್ಘಟನೆಯು ಕೊಹ್ಲಿಯ ಮನಸ್ಸಿನಲ್ಲಿ ಆಳವಾದ ನೋವನ್ನು ಮೂಡಿಸಿದೆ. ಆ ಘಟನೆ ಬಳಿಕ ಕೊಹ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳದಿರುವುದೇ ಈ ಸುದ್ದಿ ಮತ್ತಷ್ಟು ಬಲ ಪಡಿಸಿದೆ.
ತಂಡದ ಮಾಲೀಕರು ಆರ್ಸಿಬಿಯನ್ನು ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲು ಮುಂದಾಗಿರುವ ವರದಿಗಳು ಹೊರಬಂದಿವೆ. ಇದೇ ಕಾರಣಕ್ಕೆ ಕೊಹ್ಲಿ ಹೊಸ ಒಪ್ಪಂದದ ಪ್ರಸ್ತಾವನೆ ತಿರಸ್ಕರಿಸಿದ್ದಾರೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ.
ನವೆಂಬರ್ 5ರಂದು 37ನೇ ವಸಂತಕ್ಕೆ ಕಾಲಿಡಲಿರುವ ಕೊಹ್ಲಿ, 17 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ಮತ್ತು 18 ವರ್ಷಗಳ ಐಪಿಎಲ್ ಆಟದ ನಂತರ ವಿಶ್ರಾಂತಿಯ ಚಿಂತನೆ ನಡೆಸುತ್ತಿರುವ ಸಾಧ್ಯತೆ ಇದೆ. ತಮ್ಮ ಪತ್ನಿ ಅನುಷ್ಕಾ ಶರ್ಮಾ ಮತ್ತು ಇಬ್ಬರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಿರುವುದು ಸಹ ಕಾರಣವಾಗಿರಬಹುದು ಎಂದು ಮೂಲಗಳು ಹೇಳುತ್ತಿವೆ. ಕೊಹ್ಲಿ ಆರ್ಸಿಬಿಯಿಂದ ದೂರವಾಗುವ ಸುದ್ದಿ ಅಭಿಮಾನಿಗಳಿಗೆ ಆಘಾತ ತಂದರೂ, ಅಧಿಕೃತ ಘೋಷಣೆ ಇನ್ನೂ ಬಾರದಿರುವುದರಿಂದ ಎಲ್ಲರೂ ಅವರ ಮುಂದಿನ ನಿರ್ಧಾರಕ್ಕಾಗಿ ಕಾದಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?