ಟೀಂ ಇಂಡಿಯಾ ಟಿ20 ಚಾಂಪಿಯನ್ ಪಟ್ಟ ಅಲಂಕರಿಸಲು ಸಾಧ್ಯವಾಗುವುದಿಲ್ಲ: ಮಾಜಿ ಆಟಗಾರ
ಏಷ್ಯಾಕಪ್ಗಾಗಿ ಪ್ರಕಟಿಸಿದ 15 ಸದಸ್ಯರ ಟೀಮ್ ಇಂಡಿಯಾ ಬಗ್ಗೆ ಮಾಜಿ ಆಟಗಾರ ಕೃಷ್ಣಮಾಚಾರಿ ಶ್ರೀಕಾಂತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ತಂಡ ಏಷ್ಯಾಕಪ್ ಗೆಲ್ಲಬಹುದಾದರೂ, ಇದೇ ತಂಡದೊಂದಿಗೆ ಭಾರತ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಶ್ರೀಕಾಂತ್ ಹೇಳುವ ಪ್ರಕಾರ, ತಂಡದಲ್ಲಿ ಐದನೇ ಕ್ರಮಾಂಕದಲ್ಲಿ ಸಹಜ ಬ್ಯಾಟರ್ ಕೊರತೆಯಿದೆ. ಕೊನೆಯ ಟಿ20 ಪಂದ್ಯದಲ್ಲಿ ಶಿವಂ ದುಬೆ ಆ ಸ್ಥಾನದಲ್ಲಿ ಆಡಿದ್ದರೂ, ಪ್ರಸ್ತುತ ತಂಡದಲ್ಲಿ ಯಾರು ಆ ಕ್ರಮಾಂಕಕ್ಕೆ ಸೂಕ್ತ ಎಂಬುದು ಸ್ಪಷ್ಟವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಸಂಜು ಸ್ಯಾಮ್ಸನ್, ಜಿತೇಶ್ ಶರ್ಮಾ, ಶಿವಂ ದುಬೆ ಮತ್ತು ರಿಂಕು ಸಿಂಗ್ ನಡುವೆ ಪೈಪೋಟಿ ಇದೆ. ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ಕೂಡ ತಂಡದಲ್ಲಿರುವುದರಿಂದ ಗೊಂದಲ ಹೆಚ್ಚಾಗಿದೆ ಎಂದು ಹೇಳಿದರು.
ಅದೇ ವೇಳೆ ಅಕ್ಷರ್ ಪಟೇಲ್ ಅವರನ್ನು ಉಪನಾಯಕತ್ವದಿಂದ ತೆಗೆದುಹಾಕಿರುವುದು, ಜೊತೆಗೆ ರಿಂಕು ಸಿಂಗ್, ಶಿವಂ ದುಬೆ ಮತ್ತು ಹರ್ಷಿತ್ ರಾಣಾ ಆಯ್ಕೆಗೊಂಡಿರುವುದರ ಕುರಿತು ಸಂದೇಹ ವ್ಯಕ್ತಪಡಿಸಿದರು. "ಐಪಿಎಲ್ ಆಧಾರದ ಮೇಲೆ ಆಯ್ಕೆ ನಡೆದಿದೆಯೇ? ಅಥವಾ ಹಿಂದಿನ ಪ್ರದರ್ಶನ ಆಧಾರವೇ? ಸ್ಪಷ್ಟವಾಗಿಲ್ಲ," ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟರು.
ಇದರ ಜೊತೆಗೆ ಯಶಸ್ವಿ ಜೈಸ್ವಾಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದನ್ನು ಅವರು ಪ್ರಶ್ನಿಸಿದ್ದಾರೆ. "ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್ ಎರಡರಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದರೂ ಅವರಿಗೆ ಅವಕಾಶ ನೀಡಲಾಗಿಲ್ಲ," ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?