ದಿ.ಜಯಲಲಿತಾ ಒಡವೆ ಸಂಬಂಧಿಕರಿಗೆ ಹಿಂದಿರುಗಿಸಲು ಹೈಕೋರ್ಟ್ ನಕಾರ: ಜಪ್ತಿಯಾದ ಒಡವೆ ಸರ್ಕಾರದ ಪಾಲು!

ತಮಿಳುನಾಡಿನ ಅನಭಿಷಿಕ್ತ ನಾಯಕಿ ದಿ. ಜಯಲಲಿತಾ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಪ್ತಿಯಾದ ಜಯಲಲಿತಾ ಒಡವೆಯನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಹೌದು ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿದ್ದ ಜಯಲಲಿತಾ ಅವರ ಸಹೋದರ ಜಯಕುಮಾರ್ ಮಕ್ಕಳಾದ ಜೆ ದೀಪಕ್ ಮತ್ತು ಜೆ ದೀಪಾ ಅವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಗಳನ್ನು ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಏಕಸದಸ್ಯ ಪೀಠ ವಜಾ ಮಾಡಿದೆ.
“ಅರ್ಜಿದಾರರು ವಾರಸುದಾರರಿರಬಹುದು. ಆದರೆ, ಈ ಹಿಂದೆ ಎಂದೂ ಅವರು ನ್ಯಾಯಾಲಯದ ಮುಂದೆ ಬಂದಿಲ್ಲ. ಇನ್ನು, ತೀರ್ಪಿನಲ್ಲಿ ವಶಪಡಿಸಿಕೊಳ್ಳದಿರುವ ವಸ್ತುಗಳನ್ನು ಮರಳಿಸುವಂತೆ ಕೋರಿದ್ದಾರೆ. ಆದರೆ, ಅವುಗಳಿಗೆ ಯಾವುದೇ ಆಧಾರವಿಲ್ಲ. ಹೀಗಾಗಿ, ಅರ್ಜಿಗಳನ್ನು ಪರಿಗಣಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
ರಾಜ್ಯ ಸರ್ಕಾರದ ಪರವಾಗಿ ವಾದಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಕಿರಣ್ ಜವಳಿ ಅವರು “ಜಯಲಲಿತಾ ಅವರ ವಸ್ತುಗಳನ್ನು ಜಫ್ತಿ ಮಾಡಿರುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಅದಕ್ಕೆ ಅನುಗುಣವಾಗಿ ಹೆಜ್ಜೆ ಇರಿಸಲಾಗಿದೆ” ಎಂದು ವಾದಿಸಿದ್ದರು.
"ಜಯಲಲಿತಾ ಅವರ ಸೋದರ ಸಂಬಂಧಿಗಳ ಅರ್ಜಿಗಳು ವಜಾಗೊಂಡಿರುವುದರಿಂದ ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯದ ಸುಪರ್ದಿಯಲ್ಲಿರುವ ಜಯಲಲಿತಾ ಅವರು ಅಕ್ರಮವಾಗಿ ಗಳಿಸಿದ್ದ ಆಭರಣ ಮತ್ತು ಸ್ಥಿರಾಸ್ತಿಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರ ಮಾಡುವ ಪ್ರಕ್ರಿಯೆ ಮುಂದುವರಿಯಲಿದೆ. ಜಯಲಲಿತಾ ಪ್ರಕರಣದ ವಿಚಾರಣೆ ನಡೆಸಿದ್ದರ ವೆಚ್ಚವಾಗಿ ತಮಿಳುನಾಡು ಸರ್ಕಾರವು ಕರ್ನಾಟಕ ಸರ್ಕಾರಕ್ಕೆ 5 ಕೋಟಿ ರೂಪಾಯಿ ಪಾವತಿಸಬೇಕಿದೆ" ಎಂದು ಹಿರಿಯ ವಕೀಲ ಕಿರಣ್ ಜವಳಿ "ಬಾರ್ ಅಂಡ್ ಬೆಂಚ್"ಗೆ ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






