ನಾಗ ಚೈತನ್ಯ, ಶೋಭಿತಾ ಮಾತು ಬಿಡಲು ಸಾಯಿ ಪಲ್ಲವಿ ಕಾರಣವಂತೆ..!
ಟಾಲಿವುಡ್ನ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಅವರ ಪುತ್ರ ನಾಗ ಚೈತನ್ಯ ಇತ್ತೀಚೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ‘ತಂಡೇಲ್’ ಚಿತ್ರದ ಯಶಸ್ಸಿನ ಸಂಭ್ರಮದಲ್ಲಿರುವ ನಾಗ ಚೈತನ್ಯ, ನಟ ಜಗಪತಿ ಬಾಬು ನಡೆಸುವ ಟಾಕ್ ಶೋನಲ್ಲಿ ಭಾಗವಹಿಸಿ, ತಮ್ಮ ಪತ್ನಿ ಶೋಭಿತಾ ಧುಲಿಪಾಲ ಅವರೊಂದಿಗಿನ ಪ್ರೀತಿ ಮತ್ತು ದಾಂಪತ್ಯದ ಬಗ್ಗೆ ಅನೇಕ ಆಸಕ್ತಿದಾಯಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಮಂತಾ ಜೊತೆ ವಿಚ್ಛೇದನದ ಬಳಿಕ, 2022ರಲ್ಲಿ ನಾಗ ಚೈತನ್ಯ ‘ಶೋಯು’ ಹೆಸರಿನ ಕ್ಲೌಡ್ ಕಿಚನ್ ಆರಂಭಿಸಿದ್ದರು. ಅದರ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಹಂಚಿದ ಪೋಸ್ಟ್ಗೆ ಶೋಭಿತಾ ಪ್ರತಿಕ್ರಿಯಿಸಿದ ಬಳಿಕ, ಇವರಿಬ್ಬರ ಪರಿಚಯ ಪ್ರಾರಂಭವಾಗಿ ಅದು ಪ್ರೀತಿಗೆ ತಿರುಗಿತು. ಕಳೆದ ವರ್ಷ ಇಬ್ಬರೂ ಮದುವೆಯಾದರು.
ಆದರೆ ಮದುವೆಗೆ ಮುಂಚೆ ಶೋಭಿತಾ ಮತ್ತು ನಾಗ ಚೈತನ್ಯ ನಡುವೆ ಅಲ್ಪ ಕಾಲದ ಮುನಿಸು ಉಂಟಾಗಿತ್ತಂತೆ. ಇದರ ಹಿಂದಿನ ಕಾರಣವಾಗಿ ನಟಿ ಸಾಯಿ ಪಲ್ಲವಿ ಹೆಸರು ಕೇಳಿಬಂದಿದೆ. ಸಾಯಿ ಪಲ್ಲವಿ ಮತ್ತು ನಾಗ ಚೈತನ್ಯ ‘ಲವ್ ಸ್ಟೋರಿ’ ಹಾಗೂ ‘ತಂಡೇಲ್’ ಸಿನಿಮಾಗಳಲ್ಲಿ ಜೋಡಿಯಾಗಿ ನಟಿಸಿದ್ದಾರೆ.
‘ತಂಡೇಲ್’ ಚಿತ್ರದಲ್ಲಿ ಚೈತನ್ಯ ಸಾಯಿ ಪಲ್ಲವಿಗೆ “ಬುಜ್ಜಿ ತಲ್ಲಿ” ಎಂದು ಮುದ್ದು ಹೆಸರಿನಿಂದ ಕರೆಯುತ್ತಾರೆ. ಇದೇ ಹೆಸರು ಶೋಭಿತಾಗೆ ಇಷ್ಟವಾಗಲಿಲ್ಲವಂತೆ, ಏಕೆಂದರೆ ಚೈತನ್ಯ ಅವರು ಶೋಭಿತಾರನ್ನೂ ಅದೇ ಹೆಸರಿನಿಂದ ಕರೆಯುತ್ತಿದ್ದರು.ಈ ವಿಷಯದಿಂದ ಇಬ್ಬರ ಮಧ್ಯೆ ಅಲ್ಪಕಾಲದ ಅಸಮಾಧಾನ ಉಂಟಾದರೂ, ಬಳಿಕ ನಾಗ ಚೈತನ್ಯ ಶೋಭಿತಾಗೆ ವಿಷಯವನ್ನು ಸ್ಪಷ್ಟಪಡಿಸಿದ್ದು, ಎಲ್ಲವೂ ಸರಿಯಾಯಿತು ಎಂದು ತಿಳಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?