ಮದ್ಯನೀತಿ ಹಗರಣ: ಜೈಲಿನ ಕಹಿ ಅನುಭವ ಬಿಚ್ಚಿಟ್ಟ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್!

ನವದೆಹಲಿ:- ಮದ್ಯನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಇದೀಗ ಜಾಮೀನಿನ ಮೇಲೆ ಹೊರ ಬಂದಿರುವ ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರು, ಜೈಲಿನ ಕಹಿ ಘಟನೆಗಳನ್ನು ವಿವರಿಸಿದ್ದಾರೆ.
ಜೈಲಿನಲ್ಲಿ ಇನ್ಸುಲಿನ್ ನಿರಾಕರಿಸುವ ಮೂಲಕ ನನ್ನ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದಿದ್ದಾರೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಿರುವ ಕಾರಣ ದಿನಕ್ಕೆ ನಾಲ್ಕು ಇನ್ಸುಲಿನ್ಗಳನ್ನು ತೆಗೆದುಕೊಳ್ಳಬೇಕು, ಇನ್ಸುಲಿನ್ ಕೊಡದಿದ್ದರೆ ಕಿಡ್ನಿಗಳು ಹಾಳಾಗಬಹುದಿತ್ತು, ಕತೆಗೆ ಇನ್ಸುಲಿನ್ ಕೊರತೆಯಿಂದಾಗಿ ಸಾಯುವ ಸಾಧ್ಯತೆಯೂ ಹೆಚ್ಚಿತ್ತು. ಜನರ ಆಶೀರ್ವಾದದಿಂದ ಜೈಲಿನಿಂದ ಹೊರಗೆ ಬಂದಿದ್ದೇನೆ.
ಕಳೆದ 10 ವರ್ಷಗಳಿಂದ ನಮ್ಮ ಸರ್ಕಾರ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಬಿಜೆಪಿ ನಮ್ಮನ್ನು ಜೈಲಿಗೆ ಕಳುಹಿಸಿದೆ. ಅಷ್ಟೇ ಅಲ್ಲದೆ ಲೆಫ್ಟಿನೆಂಟ್ ಗವರ್ನರ್ ಮೂಲಕ ಹಲವು ಯೋಜನೆಗಳನ್ನು ನಿಲ್ಲಿಸುವ ಪ್ರಯತ್ನವನ್ನೂ ಮಾಡಲಾಗಿದೆ. ಸರ್ಕಾರವನ್ನು ಹೇಗೆ ಮುನ್ನಡೆಸಬೇಕು ಎಂಬುದು ನನಗೆ ತಿಳಿದಿದೆ, ಲ್ಲಿಯವರೆಗೆ ದೇಶದಲ್ಲಿ ಎಂದಿಗೂ ಮಾಡದಂತಹ ಕೆಲಸವನ್ನು ನಾನು ದೆಹಲಿಯಲ್ಲಿ ಮಾಡಿದ್ದೇನೆ. ಅವರಿಗೆ 22 ರಾಜ್ಯಗಳಲ್ಲಿ ಸರ್ಕಾರಗಳಿವೆ.
ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಮತ್ತು ದೆಹಲಿಯಲ್ಲಿ ಜನರಿಗಾಗಿ ಕೆಲಸ ಮಾಡುತ್ತಿರುವುದರಿಂದ ನನ್ನನ್ನು ಜೈಲಿಗೆ ಕಳುಹಿಸಲಾಗಿದೆ ಎಂದು ಪ್ರತಿಪಾದಿಸಿದರು.
ಜೈಲಿನಲ್ಲಿದ್ದಾಗ ಬಿಜೆಪಿ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿದೆ ಎಂದು ಆರೋಪಿಸಿದ ಕೇಜ್ರಿವಾಲ್, ಜಾಮೀನಿನ ಮೇಲೆ ಹೊರಬಂದ ನಂತರ ಎಎಪಿ ಸರ್ಕಾರವು ಗುಂಡಿಬಿದ್ದಿರುವ ರಸ್ತೆಗಳ ದುರಸ್ತಿ, ಚರಂಡಿಗಳನ್ನು ಸ್ವಚ್ಛಗೊಳಿಸುವುದು ಮತ್ತು ನೀರು ಸರಬರಾಜು ಮಾಡುವ ಕೆಲಸವನ್ನು ಪುನರಾರಂಭಿಸಿದೆ ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?






